ADVERTISEMENT

ಜನಜಾಗೃತಿಗಾಗಿ ಜಗ ಸುತ್ತುವರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 20:10 IST
Last Updated 18 ಜೂನ್ 2018, 20:10 IST
ಜಾಗೃತಿ ಯಾತ್ರೆಗೆ ಹೊರಟವರಿಗೆ ಶುಭಕೋರಿದವರು
ಜಾಗೃತಿ ಯಾತ್ರೆಗೆ ಹೊರಟವರಿಗೆ ಶುಭಕೋರಿದವರು   

ವಿಶ್ವದ 14 ರಾಷ್ಟ್ರಗಳಲ್ಲಿ ಜಾಗೃತಿ ಮೂಡಿಸಲು ಬೆಂಗಳೂರಿನ ಮೂವರು 45 ದಿನಗಳವರೆಗೆ ರಸ್ತೆ ಪ್ರಯಾಣ ಕೈಗೊಂಡಿದ್ದಾರೆ. ನೀರು ಮತ್ತು ಆಹಾರದ ಅಪವ್ಯಯ ತಪ್ಪಿಸಬೇಕು ಎನ್ನುವುದು ಅವರ ಕಾಳಜಿ. ಜೊತೆಗೆ, ಇಂಧನ ಕ್ಷಮತೆಯ ವಾಹನಗಳ ಬಳಕೆಯನ್ನು ಉತ್ತೇಜಿಸಬೇಕು. ಜಾಗತಿಕ ತಾಪಮಾನ ಹೆಚ್ಚಳವನ್ನು ನಿಯಂತ್ರಿಸಬೇಕು ಎನ್ನುವ ಕಳಕಳಿ ಅವರದ್ದು.

ಈ ಮೂರು ಮುಖ್ಯ ಅಂಶಗಳನ್ನು ಗಮನದಲ್ಲಿರಿಸಿಕೊಂಡು, ಅದಕ್ಕಾಗಿಯೇ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವ ಇವರು, ತಮ್ಮ ವಾಹನವನ್ನೂ ಅದಕ್ಕಾಗಿ ವಿನ್ಯಾಸಗೊಳಿಸಿದ್ದಾರೆ. ಸುಮ್ಮನೆ ಜಾಗೃತಿಯೆಂದರೆ ಕೇವಲ ಘೋಷಣೆಗಳನ್ನು ಕೂಗುವುದಲ್ಲ. ಮೂವರೂ ಸಂಪನ್ಮೂಲವ್ಯಕ್ತಿಗಳು. ತಮ್ಮ ಕ್ಷೇತ್ರದ ಅರಿವು, ಅನುಭವವನ್ನೇ ಜನರಿಗೆ ತಲುಪಿಸುವ ಉದ್ದೇಶದಿಂದ ಈ ಯಾತ್ರೆಯನ್ನು ಕೈಗೊಂಡಿದ್ದಾರೆ.

ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರ ರಜನಿಕಾಂತ್‌, ಫಾರ್ಮಸಿ ಪದವೀಧರ ರಘುರಾಮ್‌, ಪರಿಸರ ಹಾಗೂ ವ್ಯವಸ್ಥಾಪನ ತಾಂತ್ರಿಕತೆಯಲ್ಲಿ ಪರಿಣತಿ ಪಡೆದಿರುವ ಎಸ್‌. ರಾಜನ್‌ ಅವರು ಈ ಪ್ರಯಾಣವನ್ನು ಭಾನುವಾರ ಕೈಗೊಂಡಿದ್ದಾರೆ.

ADVERTISEMENT

ರಜನಿಕಾಂತ್‌ ಅವರು ಬೆಳೆಗಳಲ್ಲಿ ಬೇಕಾಬಿಟ್ಟಿ ಕೀಟನಾಶಕ, ಪೀಡೆನಾಶಕಗಳನ್ನು ಬಳಸುವುದರಿಂದ ಇಡಿಯ ಪೀಳಿಗೆಯೇ ವಿಷಯುಕ್ತ ಆಹಾರ ಉಣ್ಣುವಂತಾಗಿದೆ. ಇದನ್ನು ತಪ್ಪಿಸಬೇಕು ಎನ್ನುವುದು ಅವರ ಆಕಾಂಕ್ಷೆಯಾಗಿದೆ.

ರಘುರಾಮ್‌ ಅವರು ಔಷಧ ನಿಯಂತ್ರಣ ಕಾಯ್ದೆಯ ಬಗೆಗೆ ಸಾಕಷ್ಟು ಶ್ರಮಿಸಿದ್ದು, ಇದೀಗ ಜನಜಾಗೃತಿಯ ಪರಿಹಾರದತ್ತ ಕಾರ್ಯನಿರತರಾಗಿದ್ದಾರೆ.

ಎಸ್‌. ರಾಜನ್‌ ಅವರು ಇದು ಕಾರ್ಯಪ್ರವರ್ತರಾಗಬೇಕಾದ ಸಮಯ ಎಂದೆ ನಂಬಿದ್ದು, ದಿನ ನಿತ್ಯದ ಜೀವನದಲ್ಲಿ ತಾಪಮಾನ ಏರಿಕೆಯ ನಿಯಂತ್ರಣಕ್ಕೆ ಏನೆಲ್ಲ ಮಾಡಬಹುದು ಎಂಬ ಬಗ್ಗೆ ಉಪನ್ಯಾಸಗಳನ್ನು ನೀಡುತ್ತ, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತ ಜಾಗೃತಿ ಮೂಡಿಸಲಿದ್ದಾರೆ.

ಇರಾನ್‌, ಟರ್ಕ್‌ಮೆನಿಸ್ತಾನ್‌, ಉಜ್ಬೇಕಿಸ್ತಾನ್‌, ಕಜಕಿಸ್ತಾನ್‌, ರಷ್ಯಾ, ಎಸ್ಟೋನಿಯಾ, ಲಾಟ್‌ವಿಯಾ, ಲಿಥುವೇನಿಯಾ, ಪೋಲ್ಯಾಂಡ್‌, ಜರ್ಮನಿ, ನೆದರ್‌ಲೆಂಡ್‌, ಬೆಲ್ಜಿಯಂ, ಫ್ರಾನ್ಸ್‌, ಯುಕೆಗಳಲ್ಲಿ ಕಾರಿನಲ್ಲಿ ಸಂಚರಿಸಲಿದ್ದಾರೆ.

ಪ್ರಯಾಣದ ಮಾರ್ಗದ ಮಧ್ಯದಲ್ಲಿ ಸಿಗುವ ವಿವಿಧ ಸಮುದಾಯದ ಜನರೊಂದಿಗೆ ಮಾಹಿತಿ ಹಂಚಿಕೊಂಡು ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಮೂವರ ತಂಡ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.