ನವದೆಹಲಿ: ಬಲಪಂಥೀಯ ಸಂಘಟನೆಗಳಿಂದ ತಮಗೆ ಜೀವ ಬೆದರಿಕೆಯಿದ್ದು, ರಕ್ಷಣೆ ನೀಡುವಂತೆ ಕೋರಿ ಎಎಪಿ ಮುಖಂಡ ಆಶಿಷ್ ಖೇತನ್ ಅವರು ಬುಧವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ತುರ್ತು ವಿಚಾರಣೆ ಅಗತ್ಯವಿದೆ ಎಂದು ವಕೀಲ ಸುನೀಲ್ ಫರ್ನಾಂಡಿಸ್ ಅವರು ಮನವಿ ಮಾಡಿದ ಕಾರಣ, ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರರಾವ್ ಹಾಗೂ ನವೀನ್ ಸಿನ್ಹಾ ಅವರಿದ್ದ ರಜಾಕಾಲದ ಪೀಠವು ವಿಚಾರಣೆಯನ್ನು ಜೂನ್ 5ಕ್ಕೆ ನಿಗದಿಗೊಳಿಸಿದೆ.
ಸನಾತನ ಸಂಸ್ಥೆ ನಿಷೇಧ ಹಾಗೂ ಜೀವ ಬೆದರಿಕೆ ಬಗ್ಗೆ ಸುಪ್ರೀಂಕೋರ್ಟ್ ಕಣ್ಗಾವಲಿನಲ್ಲಿ ತನಿಖೆ ನಡೆಸುವಂತೆ ಅವರು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.
ಇಂತಹ ಪ್ರಕರಣದಲ್ಲಿ ಜೀವ ಬೆದರಿಕೆ ಎದುರಿಸುವ ವ್ಯಕ್ತಿಗಳಿಗೆ ರಕ್ಷಣೆ ಒದಗಿಸುವ ಮಾರ್ಗಸೂಚಿ ರಚಿಸುವಂತೆಯೂ ಅವರು ಆಗ್ರಹಿಸಿದ್ದಾರೆ.
‘ಕೆಲವು ಬಲಪಂಥೀಯ ತೀವ್ರವಾದಿ ಸಂಘಟನೆಗಳು ದೇಶದಲ್ಲಿ ಸಕ್ರಿಯವಾಗಿವೆ. ಸನಾತನ ಸಂಸ್ಥೆ, ಅಭಿನವ ಭಾರತ್, ಹಿಂದೂ ಜನಜಾಗೃತಿ ಸಮಿತಿ, ಹಿಂದಿ ರಕ್ಷಕ್ ಸಮಿತಿ, ಬಜರಂಗದಳ, ದುರ್ಗಾ ವಾಹಿನಿ, ಶ್ರೀರಾಮಸೇನೆ ಹಾಗೂ ವಿಶ್ವಹಿಂದೂ ಪರಿಷತ್ ಸಂಘಟನೆಗಳು ಇವುಗಳಲ್ಲಿ ಮುಖ್ಯವಾದವು’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
‘ಇಂತಹ ಮೂಲಭೂತವಾದಿ ಬಲಪಂಥೀಯ ತೀವ್ರವಾದಿ ಸಂಘಟನೆಗಳು ಕಳೆದ ಕೆಲವು ವರ್ಷಗಳಿಂದ ಜಾತ್ಯತೀತವಾದಿಗಳು, ಮೂಢನಂಬಿಕೆ ವಿರೋಧಿಗಳು, ಮುಕ್ತ ಚಿಂತಕರು ಹಾಗೂ ವಿಚಾರವಾದಿಗಳ ವಿರುದ್ಧ ಮಾರಣಾಂತಿಕ ದಾಳಿಗಳನ್ನು ನಡೆಸಿವೆ’ ಎಂದು ಹೇಳಿದ್ದಾರೆ.
2014ರಿಂದ ಇಂತಹ ಸಂಘಟನೆಗಳು ಪ್ರಾಮುಖ್ಯತೆ ಪಡೆದಿದ್ದು, ಕೇಂದ್ರ ಹಾಗೂ ಸಂಬಂಧಿಸಿದ ರಾಜ್ಯ ಸರ್ಕಾರಗಳು ಇವುಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ಹಾಗೂ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ರಕ್ಷಿಸುವಲ್ಲಿ ವಿಫಲವಾಗಿವೆ ಎಂದು ಆಶಿಷ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.