ನವದೆಹಲಿ: ಸಮಾಜಮುಖಿ ಕಾರ್ಯಗಳಿಗಾಗಿ ಸಂಪತ್ತಿನ ಶೇ 10ರಷ್ಟು, ಅಂದಾಜು ₹7000 ಕೋಟಿ ಮೀಸಲಿಟ್ಟಿರುವುದಾಗಿ ಭಾರತಿ ಎಂಟರ್ಪ್ರೈಸಸ್ ಅಧ್ಯಕ್ಷ ಸುನಿಲ್ ಮಿತ್ತಲ್ ಗುರುವಾರ ಪ್ರಕಟಿಸಿದ್ದಾರೆ.
ಭಾರತಿ ಏರ್ಟೆಲ್ನಲ್ಲಿನ ಕುಟುಂಬದ ಶೇ 3ರಷ್ಟು ಪಾಲು ಸೇರಿ ಒಟ್ಟು ಶೇ 10 ಮೊತ್ತದ ಹಣವನ್ನು ಸಮಾಜದ ಉನ್ನತಿಗಾಗಿ ದಾನ ನೀಡಲಾಗುತ್ತದೆ ಎಂದರು.
ಆರ್ಥಿಕವಾಗಿ ಹಿಂದುಳಿದ ವರ್ಗದ ಯುವಕ–ಯುವತಿಯರಿಗೆ ಉಚಿತ ಶಿಕ್ಷಣ ಒದಗಿಸಲು ಸತ್ಯ ಭಾರತಿ ವಿಶ್ವವಿದ್ಯಾಲಯ ಸ್ಥಾಪಿಸಲು ಉದ್ದೇಶಿಸಲಾಗಿದೆ. ಉತ್ತರ ಭಾರತದಲ್ಲಿ ಸ್ಥಾಪನೆಯಾಗಲಿರುವ ವಿಶ್ವವಿದ್ಯಾಲಯವು 2021ಕ್ಕೆ ಕಾರ್ಯಾರಂಭಿಸಲಿದೆ.
ವಿವಿಯಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸಲು ಯೋಜಿಸಲಾಗಿದ್ದು, ಕಟ್ಟಡ ನಿರ್ಮಾಣದ ಸ್ಥಳದ ಕುರಿತು ಮಾತು–ಕತೆ ಅಂತಿಮ ಹಂತದಲ್ಲಿದೆ ಎಂದರು.
ಇನ್ಫೋಸಿಸ್ನ ಸಹ ಸಂಸ್ಥಾಪಕರಾದ ನಂದನ್ ನಿಲೇಕಣಿ ಹಾಗೂ ಅವರ ಪತ್ನಿ ರೋಹಿಣಿ ನಿಲೇಕಣಿ ತಮ್ಮ ಅರ್ಧದಷ್ಟು ಸಂಪತ್ತನ್ನು ಸಮಾಜದ ಏಳ್ಗೆಗಾಗಿ ಬಳಸುವುದಾಗಿ ‘ದಾನ ನೀಡುವ ವಾಗ್ದಾನ’ ಜಾಲ(ದಿ ಗಿವಿಂಗ್ ಪ್ಲೆಡ್ಜ್)ಕ್ಕೆ ಸೇರ್ಪಡೆಯಾದ ಬೆನ್ನಲೇ ಸುನಿಲ್ ಮಿತ್ತಲ್ ತಮ್ಮ ನಿರ್ಧಾರ ಘೋಷಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.