ಮುಂಬೈ: ಬಹಿಷ್ಕಾರಕ್ಕೆ ಒಳಗಾಗಿದ್ದ ದಂಪತಿಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಕಚೇರಿಯಲ್ಲಿ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸುವ ಅವಕಾಶ ದೊರೆಯಿತು.
ಪೂಜೆ ನೆರವೇರಿಸಲು ಗ್ರಾಮದ ಜನರು ಅವಕಾಶ ನಿರಾಕರಿಸಿದ್ದರಿಂದ ಮಧ್ಯ ವಯಸ್ಸಿನ ದಂಪತಿ ಪರಮಾನಂದ ಹೆವಲೆಕರ್ ಹಾಗೂ ಪ್ರೀತಂ ಅವರು ಬುಧವಾರ ಗಣೇಶನ ಮೂರ್ತಿಯನ್ನು ಹೊತ್ತುಕೊಂಡು ರಾಜ್ಯ ಸಚಿವಾಲಯದ ಮುಖ್ಯ ಪ್ರವೇಶದ್ವಾರದ ಬಳಿ ಬಂದಿದ್ದರು.
ಈ ವೇಳೆ ದಂಪತಿ ನ್ಯಾಯ ಒದಗಿಸಿಕೊಡುವಂತೆ ಧರಣಿ ನಡೆಸಿದ್ದರು. ಸಿಂಧುದುರ್ಗ ಜಿಲ್ಲೆಯ ಕುಡಲ್ ತೆಹ್ಸಿಲ್ನ ಮಹಾದೇವಚೆ ಕೆರ್ವಡೆಯಲ್ಲಿ ‘ಜಾತಿ ಪಂಚಾಯ್ತಿ’ ಸಾಮಾಜಿಕ ಬಹಿಷ್ಕಾರ ಹಾಕಿದೆ ಎಂದು ಹೆವಲೆಕರ್ ದೂರಿದರು. ಈ ವಿಷಯ ತಿಳಿದ ಫಡಣವೀಸ್ ಅವರು ತಮ್ಮಕಚೇರಿಗೆ ಬಂದು ಪೂಜೆ ನೆರವೇರಿಸುವಂತೆ ಆಹ್ವಾನಿಸಿದರು.
ಫಡಣವೀಸ್ ಅವರು ಸಿಂಧುದುರ್ಗದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ದಂಪತಿಗೆ ಸೌಕರ್ಯ ಒದಗಿಸಿಕೊಡುವಂತೆ ಸೂಚಿಸಿದ್ದಾರೆ. ಇದೇ ವೇಳೆ ಪ್ರಕರಣದ ಬಗ್ಗೆ ತನಿಖೆ ನಡೆಸಿ, ದಂಪತಿಗೆ ಬಹಿಷ್ಕಾರದಿಂದ ಮುಕ್ತಿ ನೀಡುವಂತೆಯೂ ಅವರು ಹಿರಿಯ ಅಧಿಕಾರಿಗೆ ಸೂಚಿಸಿದ್ದಾರೆ.
ಜಾತಿ ಪಂಚಾಯ್ತಿಯ ನಿರಂತರ ಅವಮಾನದಿಂದಾಗಿ ಪುಣೆಯಲ್ಲಿ 45 ವರ್ಷದ ಆಟೋರಿಕ್ಷಾ ಚಾಲಕರೊಬ್ಬರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.