ADVERTISEMENT

‘ಸುಪ್ರೀಂ’ಗೆ ರಂಜಿತ್‌ ಪ್ರಮಾಣಪತ್ರ

ಹಗರಣ ಆರೋಪಿಗಳ ಭೇಟಿ ದೂರು

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2014, 19:30 IST
Last Updated 12 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): 2 ಜಿ ಮತ್ತು ಕಲ್ಲಿದ್ದಲು ಹಗರಣ ಆರೋಪಿಗಳು ತಮ್ಮನ್ನು ಅಧಿಕೃತ ನಿವಾಸದಲ್ಲಿ ಭೇಟಿಯಾಗಲು ಅವಕಾಶ ಮಾಡಿಕೊಟ್ಟ ಆರೋಪಕ್ಕೆ ಸಿಲುಕಿರುವ ಸಿಬಿಐ ನಿರ್ದೇಶಕ ರಂಜಿತ್‌ ಸಿನ್ಹಾ ಅವರು ಶುಕ್ರವಾರ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದರು. ತಮ್ಮ ವಿರುದ್ಧದ ಆರೋಪಗಳಿಗೆ ಸಿನ್ಹಾ ಅವರ ಪ್ರತಿಕ್ರಿಯೆ ಈ ಪ್ರಮಾಣಪತ್ರದಲ್ಲಿ ದಾಖಲಾಗಿದೆ.

ತಮ್ಮ ವಿರುದ್ಧ ಕೇಳಿಬಂದಿರುವ ‘ಗಂಭೀರ ಆರೋಪ’ಗಳಿಗೆ ಸಂಬಂಧಿಸಿ­ದಂತೆ ಪ್ರತಿಕ್ರಿಯೆಯನ್ನು ದಾಖಲಿಸು­ವಂತೆ ಸುಪ್ರೀಂ ಕೋರ್ಟ್‌ ಸೆ.8ರಂದು ಸಿನ್ಹಾ ಅವರಿಗೆ ನಿರ್ದೇಶನ ನೀಡಿತ್ತು. ಇದೇ ವೇಳೆ, ‘ನ್ಯಾಯಪೀಠದ ಮುಂದೆ ಏನನ್ನೇ ಹೇಳಿಕೊಳ್ಳುವ ಮನಸ್ಸಿದ್ದರೂ ಅದನ್ನು ಲಿಖಿತ ರೂಪದಲ್ಲಿ ಸಲ್ಲಿಸ­ಬೇಕು’ ಎಂದೂ ಕೋರ್ಟ್‌ ಸೂಚಿಸಿತ್ತು.

ವಕೀಲ ಪ್ರಶಾಂತ್‌ ಭೂಷಣ್‌ ಅವರು ಸಿಬಿಐ ನಿರ್ದೇಶಕರ ನಿವಾಸಕ್ಕೆ ಭೇಟಿ­ಯಾದವರ ಪಟ್ಟಿಯನ್ನು ನ್ಯಾಯಾ­ಲಯಕ್ಕೆ ಸಲ್ಲಿಸಿದ್ದರು.
ಇಲ್ಲಿನ ಜನಪಥ್‌ ರಸ್ತೆಯಲ್ಲಿರುವ ಸಿಬಿಐ ನಿರ್ದೇಶಕರ ಅಧಿಕೃತ ನಿವಾಸದ ಭದ್ರತೆಗೆ ನಿಯೋಜಿತವಾಗಿರುವ 23 ಐಟಿಬಿಪಿ (ಇಂಡೊ ಟಿಬೆಟನ್‌ ಬಾರ್ಡರ್‌ ಪೊಲೀಸ್‌) ಮತ್ತು ನಾಲ್ವರು ಸಿಬಿಐ ಕಾನ್‌ಸ್ಟೆಬಲ್‌ಗಳ ಪಟ್ಟಿಯನ್ನೂ ನ್ಯಾಯಪೀಠ ಪರಿಶೀಲನೆ ನಡೆಸಿದೆ.

ಮೇಲಿನ ಎರಡು ಹಗರಣಗಳ ಕೆಲವು ಆರೋಪಿಗಳನ್ನು ರಕ್ಷಿಸಲು ಯತ್ನಿಸುತ್ತಿರುವ ರಂಜಿತ್‌ ಸಿನ್ಹಾ ಅವರನ್ನು ಆ ಸ್ಥಾನದಿಂದ ವಜಾ ಮಾಡಬೇಕು ಎಂಬುದು ಸರ್ಕಾರೇತರ ಸಂಸ್ಥೆಯಾದ ‘ಸೆಂಟರ್‌ ಫಾರ್‌ ಪಬ್ಲಿಕ್‌ ಇಂಟರೆಸ್‌್ಟ ಲಿಟಿಗೇಷನ್‌’  ಪರ ವಕೀಲರಾದ ಪ್ರಶಾಂತ್‌ ಭೂಷಣ್‌ ಅವರ ವಾದವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.