ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಮೇ 30ರೊಳಗೆ ಚುನಾವಣೆ ನಡೆಸು ವಂತೆ ಹೈಕೋರ್ಟ್ನ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿಗಳ ವಿಭಾಗೀಯ ಪೀಠವು ರದ್ದುಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ನೇತೃತ್ವದ ಪೀಠವು ಈ ಕುರಿತು ಕಾಯ್ದಿರಿಸಿದ್ದ ಆದೇಶವನ್ನು ಶುಕ್ರವಾರ ಪ್ರಕಟಿಸಿತು. ಆದಾಗ್ಯೂ ಚುನಾವಣೆ ಯಾವತ್ತು ನಡೆಯಬೇಕು ಎಂಬ ಅಂಶಕ್ಕೆ ಸಂಬಂಧಿಸಿದಂತೆ ಆದೇಶ ದಲ್ಲಿ ಯಾವುದೇ ಸೂಚನೆ ನೀಡಲಾಗಿಲ್ಲ.
ಸಂವಿಧಾನದ 74ನೇ ತಿದ್ದುಪಡಿ ಗಮನದಲ್ಲಿ ಇರಿಸಿಕೊಂಡು ಆರು ತಿಂಗಳ ಒಳಗಾಗಿ ಆದಷ್ಟು ಶೀಘ್ರ ಚುನಾವಣೆ ನಡೆಸುವಂತೆ ಪೀಠವು ಸರ್ಕಾರ ಮತ್ತು ಆಯೋಗಕ್ಕೆ ತಾಕೀತು ಮಾಡಿದೆ.
‘ಏಕಸದಸ್ಯ ಪೀಠವು ತನ್ನ ಆದೇಶ ಪ್ರಕಟಿಸುವಾಗ ಬಿಬಿಎಂಪಿ ಆಡಳಿತ ಮಂಡಳಿ ವಿಸರ್ಜನೆ ಆಗಿರಲಿಲ್ಲ. ಆದರೆ ಏಪ್ರಿಲ್ 18ರಂದು ಪಾಲಿಕೆಯನ್ನು ಸರ್ಕಾರ ವಿಸರ್ಜನೆ ಮಾಡಿದೆ. ಈ ಅಂಶ ವನ್ನು ಗಮನದಲ್ಲಿ ಇರಿಸಿಕೊಂಡೇ ನಾವು ಸರ್ಕಾರದ ಮೇಲ್ಮನವಿಯನ್ನು ಪರಿಗಣಿ ಸಿದ್ದೇವೆ’ ಎಂದು ಪೀಠವು ಹೇಳಿದೆ.
‘ಪಾಲಿಕೆ ವಿಸರ್ಜನೆ ಆದನಂತರ ಚುನಾವಣೆಗೆ ಆರು ತಿಂಗಳ ಕಾಲಾವಕಾಶ ಇದೆ. ನಾವು ಇದನ್ನು ಕಡಿಮೆ ಮಾಡು ವುದಾಗಲೀ ಅಥವಾ ಅವಧಿಯನ್ನು ಇನ್ನಷ್ಟು ವಿಸ್ತರಿಸುವುದಾಗಲೀ ಸಾಧ್ಯ ವಿಲ್ಲ. ಇದು ಸಂವಿಧಾನದ ಚೌಕಟ್ಟಿ ನಲ್ಲಿರುವ ಸಂಗತಿ. ಆದ್ದರಿಂದ ಈ ವಿಷ ಯದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ’ ಎಂದು ಆದೇಶದಲ್ಲಿ ಸ್ಪಷ್ಟ ಪಡಿಸಲಾಗಿದೆ.
‘ಏಕಸದಸ್ಯ ಪೀಠವು ಚುನಾವಣೆಗೆ ನೀಡಿದ್ದ ಸಮಯಾವಕಾಶ ಕಡಿಮೆ ಇತ್ತು. ಈ ಕಾರಣಕ್ಕಾಗಿಯೇ ಏಕಸದಸ್ಯ ಪೀಠದ ಆದೇಶವನ್ನು ರದ್ದು ಮಾಡಲಾಗಿದೆ’ ಎಂದು ಪೀಠವು ವಿವರಿಸಿದೆ.
ಇದೇ ವೇಳೆ ಇನ್ನಿಬ್ಬರು ಅರ್ಜಿದಾರರ ಪರ ಹಿರಿಯ ವಕೀಲ ವಿ.ಲಕ್ಷ್ಮಿನಾರಾಯಣ ಅವರು, ‘ವಿಭಾಗೀಯ ಪೀಠವು ತನ್ನ ಆದೇಶವನ್ನು ಏಳು ದಿನಗಳ ಕಾಲ ತಡೆ ಹಿಡಿಯಬೇಕು’ ಎಂಬ ಮೌಖಿಕ ಕೋರಿಕೆಯನ್ನು ಪೀಠ ತಿರಸ್ಕರಿಸಿತು.
ಏಪ್ರಿಲ್ 22ಕ್ಕೆ ಬಿಬಿಎಂಪಿಯ ಆಡಳಿ ತಾವಧಿ ಪೂರ್ಣಗೊಳ್ಳುತ್ತಿದೆ. ಆದರೂ ಸರ್ಕಾರ ಚುನಾವಣೆಯ ತಯಾರಿಗೆ ಮುಂದಾಗಿಲ್ಲ ಎಂದು ಪಾಲಿಕೆಯ ಸದಸ್ಯ ರಾದ ಸಿ.ಕೆ. ರಾಮ ಮೂರ್ತಿ ಮತ್ತು ಬಿ. ಸೋಮ ಶೇಖರ್ ರಿಟ್ ಅರ್ಜಿ ಸಲ್ಲಿ ಸಿದ್ದರು. ಈ ಅರ್ಜಿಯ ಅನುಸಾರ ನ್ಯಾಯ ಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಏಕ ಸದಸ್ಯ ಪೀಠವು ಮೇ 30ರೊಳಗೆ ಚುನಾವಣೆ ನಡೆಸುವಂತೆ ಸೂಚಿಸಿತ್ತು.
‘ಸುಪ್ರೀಂ’ಗೆ ಚುನಾವಣಾ ಆಯೋಗ
ಬಿಬಿಎಂಪಿ ಚುನಾವಣೆಗೆ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠ ಕೊಟ್ಟಿರುವ ಆದೇಶ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್ ಮೆಟ್ಟಿಲು ಏರಲಿದೆ. ಹೈಕೋರ್ಟ್ನ ಲಿಖಿತ ಆದೇಶ ಸಿಕ್ಕ ನಂತರ ವಕೀಲರ ಜತೆ ಚರ್ಚಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸ ಲಿದೆ. ಸುಪ್ರೀಂಕೋರ್ಟ್ ಕೊಟ್ಟಿ ರುವ ತೀರ್ಪಿಗೆ ಹೈಕೋರ್ಟ್ ಆದೇಶ ವ್ಯತಿ ರಿಕ್ತವಾಗಿರುವ ಕಾರಣ ಆಯೋಗ ಅದನ್ನು ಪ್ರಶ್ನಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಶ್ನಿಸಲು ಬಿಜೆಪಿ ತೀರ್ಮಾನ
ಮೇ 30ರೊಳಗೆ ಚುನಾವಣೆ ನಡೆಸಬೇಕು ಎನ್ನುವ ಏಕ ಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದು ಮಾಡಿದ್ದು, ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಹೋಗಲು ಬಿಜೆಪಿ ತೀರ್ಮಾನಿಸಿದೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಷಿ ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ಉಪ ನಾಯಕ ಆರ್.ಅಶೋಕ ಅವರು ಪ್ರತ್ಯೇಕ ಹೇಳಿಕೆಗಳನ್ನು ನೀಡಿ ‘ ಸುಪ್ರೀಂ ಕೋರ್ಟ್ಗೆ ಹೋಗುವುದು ಖಚಿತ. ಈ ಕುರಿತು ನಗರದ ಶಾಸಕರು ಮತ್ತು ಪಕ್ಷದ ಪ್ರಮುಖರ ಜತೆ ಮಾತುಕತೆ ನಡೆಸಲಾಗುವುದು’ ಎಂದರು.
‘ಸುಪ್ರೀಂಕೋರ್ಟ್ ಈ ಹಿಂದೆ ಕೊಟ್ಟ ತೀರ್ಪುಗಳನ್ನು ಆಧಾರವಾಗಿ ಇಟ್ಟುಕೊಂಡೇ ಚುನಾವಣೆ ಮುಂದೂಡುವ ಸರ್ಕಾರದ ಪ್ರಯ ತ್ನದ ವಿರುದ್ಧ ಹೈಕೋರ್ಟ್ನಲ್ಲಿ ಪ್ರಶ್ನಿ ಸಲಾಗಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ಗೆ ಹೋದರೆ ಈ ವಿಷಯ ದಲ್ಲಿ ನ್ಯಾಯ ಸಿಗುವುದು ಖಚಿತ’ ಎಂದು ಅಶೋಕ ಹೇಳಿದರು.
‘ಆಡಳಿತಾಧಿಕಾರಿಯನ್ನು ನೇಮಿಸಿ ದಾಗಲೆಲ್ಲ ಬಿಬಿಎಂಪಿಯಲ್ಲಿ ದುರಾ ಡಳಿತ ಹೆಚ್ಚಾಗಿದೆ. ಜನಪ್ರತಿನಿಧಿಗಳು ಇಲ್ಲದಂತೆ ಮಾಡುವುದು ಪ್ರಜಾ ಪ್ರಭುತ್ವ ವಿರೋಧಿ ಕ್ರಮ’ ಎಂದು ಬಿಬಿಎಂಪಿ ವಿಸರ್ಜನೆ ಮಾಡಿದ್ದನ್ನು ಅವರು ಟೀಕಿಸಿದರು.
‘ವಿಭಜನೆ ಕುರಿತ ಮಸೂದೆ ಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸ ಬೇಕು ಎನ್ನುವ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಸೋಮವಾರ ಪರಿಷತ್ನಲ್ಲಿ ಹೋರಾಟ ಮುಂದು ವರಿಯಲಿದೆ’ ಎಂದರು.
ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಆತ್ಮ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ. ಹೀಗಾಗಿಯೇ ಮುಖ್ಯಮಂತ್ರಿ ಚುನಾ ವಣಾ ಸೋಲಿನಿಂದ ತಪ್ಪಿಸಿಕೊಳ್ಳಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ
-ಪ್ರಹ್ಲಾದ ಜೋಷಿ,ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲ ಆಶಯಗಳಿಗೆ ಯಾವತ್ತೂ ಧಕ್ಕೆ ಆಗಬಾರದು. ಹೀಗಾಗಿ ಹೈಕೋರ್ಟ್ ಆದೇಶವನ್ನು ನಾವು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಿದ್ದೇವೆ.
ಎ.ವಿ.ನಿಶಾಂತ್, ಅರ್ಜಿದಾರರ ಪರ ವಕೀಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.