ADVERTISEMENT

ರವಿ ಪೋಷಕರ ಮನವೊಲಿಕೆಗೆ ಸಿಎಂ ಯತ್ನ

ಪ್ರತಿಭಟನೆ ಮುಂದುವರಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2015, 13:32 IST
Last Updated 18 ಮಾರ್ಚ್ 2015, 13:32 IST

ಬೆಂಗಳೂರು: ಐಎಎಸ್‌ ಅಧಿಕಾರಿ  ಡಿ.ಕೆ. ರವಿ ಅವರ ಅಸಹಜ ಸಾವಿನ ಪ್ರಕರಣವನ್ನು ‘ಸಿಬಿಐ’ ತನಿಖೆಗೆ ಒಪ್ಪಿಸಬೇಕು ಎಂದು ಪಟ್ಟು ಹಿಡಿದು ಬುಧವಾರ ಮಧ್ಯಾಹ್ನದಿಂದ ವಿಧಾನಸೌಧದ ಎದುರು ಪ್ರತಿಭಟನೆ ನಡೆಸುತ್ತಿದ್ದ ಷೋಷಕರ  ಮನವೊಲಿಸಲು ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಸಂಜೆ ವೇಳಗೆ ಪ್ರಯತ್ನಿಸಿದರು. ಆದರೆ, ಮನವೊಲಿಕೆಗೆ ಬಗ್ಗದ ಪೋಷಕರು ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.

ಸಂಜೆ 6:15ರ  ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅವರು, ಸುಮಾರು 20 ನಿಮಿಷಗಳ ಕಾಲ ಧರಣಿ ನಿರತರ ಜತೆ ಮಾತುಕತೆ ನಡೆಸಿ, ಅವರ ಮನವೊಲಿಸುವ ಪ್ರಯತ್ನ ನಡೆಸಿದರು.

ರವಿ ಅವರ ತಂದೆ ಕರಿಯಪ್ಪ, ತಾಯಿ ಗೌರಮ್ಮ ಮತ್ತು ಸಂಬಂಧಿಕರ ಜತೆಗೆ ಮಾತನಾಡಿದ ಅವರು, ‘ಸಿಐಡಿ’ಯಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಆದರೆ, ಸಿಬಿಐನಿಂದಲೇ ತನಿಖೆ ನಡೆಸಬೇಕು ಎಂದು ಪೋಷಕರು ಪಟ್ಟು ಹಿಡಿದರು. ಬುಧವಾರದೊಳಗೆ ಮರಣೋತ್ತರ ಪರೀಕ್ಷೆ ವರದಿ ಲಭಿಸಲಿದ್ದು, ಸಾವಿನ ನಿಖರ ಕಾರಣ ತಿಳಿಯಲಿದೆ. ಆ ನಂತರ ನಾವು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು  ಭರವಸೆ ನೀಡಿದರು.

ಆದರೆ, ಪೊಷಕರು ಸಿದ್ದರಾಮಯ್ಯ ಅವರ ಮಾತನ್ನು ಒಪ್ಪಲಿಲ್ಲ. ರಾಜ್ಯ ಪೊಲೀಸರ ತನಿಖೆ ಕುರಿತು ತಮಗೆ ವಿಶ್ವಾಸ ಇಲ್ಲ. ಇದನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

‘ಮಗನ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ಸಿಬಿಐನಿಂದ ಮಾತ್ರ ನಮಗೆ ನ್ಯಾಯ ಸಿಗಲಿದೆ’ ಎಂದು ರವಿ ಅವರ ತಾಯಿ ಗೌರಮ್ಮ ಹೇಳಿದರು.

ಮುಖ್ಯಮಂತ್ರಿಗಳು ಹೋದ ಬೆನ್ನಲ್ಲೇ, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಮತ್ತು  ಜಗದೀಶ ಶೆಟ್ಟರ್ ಅವರು ಧರಣಿ ನಿರತರಿಗೆ ಬೆಂಬಲ ನೀಡಿ, ಸಿಬಿಐ ತನಿಖೆಗೆ ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.