ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಹಳೆದ್ವೇಷದ ಕಾರಣ ರೌಡಿಯೊಬ್ಬನನ್ನು ಕೊಲೆ ಮಾಡಲು ಸಂಚು ರೂಪಿಸಿ, ಆತನನ್ನು ಅಪಹರಿಸಿದ್ದ ಐವರು ರೌಡಿ ಶೀಟರ್ಗಳನ್ನು ಅರಕೆರೆ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಬಂಧಿತರಿಂದ ಒಂದು ಕಾರು, ಸ್ಕೂಟರ್, 4 ಮೊಬೈಲ್ ಹಾಗೂ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ.
ಮಂಜುನಾಥ, ಅವಿನಾಶ್, ಮಹೇಶ್, ಹೇಮಂತಕುಮಾರ್, ಹೇಮಂತ ಬಂಧಿತ ಆರೋಪಿಗಳು. ಇನ್ನಿತರ ಆರೋಪಿಗಳಾದ ಜಯಂತ್, ಸಂದೀಪ, ವಿನಯ್ ಖಜಾನೆ, ಸಂತೋಷ್ ಹಾಗೂ ಸಚಿನ್ ತಲೆಮರೆಸಿಕೊಂಡಿದ್ದಾರೆ.
ಆರೋಪಿಗಳೆಲ್ಲರೂ ಬೆಂಗಳೂರಿನವರಾಗಿದ್ದು, ಕೆ.ಪಿ.ಅಗ್ರಹಾರದ ರೌಡಿ ಶೀಟರ್ ನವೀನ್ ಕೊಲೆಗೆ ಸಂಚು ರೂಪಿಸಿ ಅಪಹರಿಸಿದ್ದರು. ಎರಡು ಕೊಲೆ ಪ್ರಕರಣಗಳ ಆರೋಪಿಯಾಗಿರುವ ನವೀನ್ನನ್ನು ತಾಲ್ಲೂಕಿನ ಮಂಡ್ಯಕೊಪ್ಪಲು ಬಳಿಯ ಕಾವೇರಿ ಬೋರೇದೇವರ ದೇವಾಲಯ ಬಳಿ ಜ.1ರಂದು ಅಪಹರಿಸಿ ಮಳವಳ್ಳಿ ತಾಲ್ಲೂಕಿನ ಹೊನಗನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಬಂಧಿಸಿಟ್ಟಿದ್ದರು. ನವೀನ್ನನ್ನು ಕೊಲೆ ಮಾಡಿ ಬೆಂಗಳೂರಿನ ನೈಸ್ ರಸ್ತೆ ಬಳಿ ಶವವನ್ನು ಬಿಸಾಡುವ ಯೋಜನೆ ರೂಪಿಸಿದ್ದರು ಎಂದು ವಿಚಾರಣೆಯ ವೇಳೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಗಳಾದ ಮಂಜುನಾಥ್ ವಿರುದ್ಧ ಒಂದು, ಅವಿನಾಶ್ ವಿರುದ್ಧ ಎರಡು, ಮಹೇಶನ ವಿರುದ್ಧ 10, ಕೆಂಚನ ಮೇಲೆ ಎರಡು, ವಿನಯ್ ವಿರುದ್ಧ 9, ಜಯಂತ್ ವಿರುದ್ಧ 4 ಹಾಗೂ ಸಂದೀಪನ ವಿರುದ್ಧ 2 ಪ್ರಕರಗಳು ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.
ನವೀನ್ ಸಹಚರ ಅನಿಲ್ ಬಗ್ಗೆ ಈ ಆರೋಪಿಗಳ ತಂಡ ಮಾಹಿತಿ ಕೇಳಿತ್ತು. ಆದರೆ ಮಾಹಿತಿ ನೀಡಲು ನವೀನ್ ನಿರಾಕರಿಸಿದ್ದ. ಇದೇ ದ್ವೇಷದಲ್ಲಿ ನವೀನ್ನನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಿಪಿಐ ಸಿ.ಎಂ.ರವೀಂದ್ರ, ಪಿಎಸ್ಐ ಬಿ.ವಿ. ಭವಿತಾ, ಸಿಬ್ಬಂದಿ ಕೃಷ್ಣಶೆಟ್ಟಿ, ಅರುಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.