ADVERTISEMENT

ಗೋಕರ್ಣ ದೇಗುಲಕ್ಕೆ ಜಿಲ್ಲಾಧಿಕಾರಿ ಭೇಟಿ, ಆಸ್ತಿ ಪರಿಶೀಲನೆ

ಆಸ್ತಿಯ ವಿವರವುಳ್ಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಶುಕ್ರವಾರ ಒಪ್ಪಿಸುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2018, 14:21 IST
Last Updated 23 ಆಗಸ್ಟ್ 2018, 14:21 IST
ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ದೇವಸ್ಥಾನದ ಸ್ಥಿರ ಹಾಗೂ ಚರ ಆಸ್ತಿಗಳ ಪಟ್ಟಿಯನ್ನು ಪರಿಶೀಲನೆ ನಡೆಸಿದರು. ಕುಮಟಾ ಉಪ ವಿಭಾಗಾಧಿಕಾರಿ ಲಕ್ಷ್ಮೀಪ್ರಿಯಾ ಚಿತ್ರದಲ್ಲಿದ್ದಾರೆ.
ಗೋಕರ್ಣ ಮಹಾಬಲೇಶ್ವರ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ದೇವಸ್ಥಾನದ ಸ್ಥಿರ ಹಾಗೂ ಚರ ಆಸ್ತಿಗಳ ಪಟ್ಟಿಯನ್ನು ಪರಿಶೀಲನೆ ನಡೆಸಿದರು. ಕುಮಟಾ ಉಪ ವಿಭಾಗಾಧಿಕಾರಿ ಲಕ್ಷ್ಮೀಪ್ರಿಯಾ ಚಿತ್ರದಲ್ಲಿದ್ದಾರೆ.   

ಗೋಕರ್ಣ (ಉತ್ತರ ಕನ್ನಡ): ಮುಜರಾಯಿ ಇಲಾಖೆಗೆ ಮರು ಹಸ್ತಾಂತರಿಸುವ ಪ್ರಕ್ರಿಯೆಯ ಭಾಗವಾಗಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಇಲ್ಲಿನ ಮಹಾಬಲೇಶ್ವರ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದರು. ಈ ಸಂದರ್ಭಲ್ಲಿ ದೇವಸ್ಥಾನದ ಚರ ಮತ್ತು ಸ್ಥಿರಆಸ್ತಿಗಳ ದಾಖಲೆಗಳನ್ನು ಪರಿಶೀಲನೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯ ನಡೆಯನ್ನು ದೇವಸ್ಥಾನದ ಆಡಳಿತಾಧಿಕಾರಿ, ರಾಮಚಂದ್ರಾಪುರ ಮಠದ ಜಿ.ಕೆ.ಹೆಗಡೆ ಪ್ರಶ್ನಿಸಿದರು.

‘ಸೆ.10 ವರೆಗೆ ನಮಗೆ ಕಾಲಾವಕಾಶವಿದೆ. ನೀವು ಈಗ ನಿಮ್ಮ ವಶಕ್ಕೆ ಪಡೆಯಲು ಸಾಧ್ಯವಿಲ್ಲ’ ಎಂದು ವಿರೋಧಿಸಿದರು.ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ,‘ನ್ಯಾಯಾಲಯಕ್ಕೆ ಶುಕ್ರವಾರದ ಒಳಗೆ ಎಲ್ಲ ಪಟ್ಟಿಯನ್ನು ಒಪ್ಪಿಸಬೇಕಾಗಿದೆ. ಅದರಅಂಗವಾಗಿ ಈ ಪ್ರಕ್ರಿಯೆ ನಡೆಸಲೇಬೇಕಾಗಿದೆ’ ಎಂದರು.

ADVERTISEMENT

2008 ಆ.14ರಿಂದ 2018ರ ಇಲ್ಲಿಯವರೆಗೆಉಳಿದ ಆದಾಯ ₹ 64 ಲಕ್ಷ ಎಂದು ದೇವಸ್ಥಾನದ ಆಡಳಿತ ಮಂಡಳಿನಮೂದಿಸಿತ್ತು. ಅದನ್ನು ಜಿಲ್ಲಾಧಿಕಾರಿ ಪ್ರಶ್ನಿಸಿದಾಗ ಆಡಳಿತಾಧಿಕಾರಿ, ‘ನಾವು ಬಹಳಷ್ಟು ಅಭಿವೃದ್ಧಿ ಮಾಡಿದ್ದೇವೆ. ಅನ್ನದಾನ, ಇತರ ಖರ್ಚು ಬಹಳಷ್ಟು ಇದ್ದು ಹಣ ಅಲ್ಲಿ ವ್ಯಯವಾಗಿದೆ’ ಎಂದು ಉತ್ತರಿಸಿದರು.

‘ರಾಮಚಂದ್ರಾಪುರ ಮಠ ದೇವಸ್ಥಾನವನ್ನು ವಹಿಸಿಕೊಳ್ಳುವಾಗ ಆಗಿನ ಕುಮಟಾ ಉಪ ವಿಭಾಗಾಧಿಕಾರಿ ನೀಡಿದ ಪಟ್ಟಿಯಂತೆ ಮುಚ್ಚಿದ ಕಪಾಟು ಹಾಗೂ ಇತರ ವಸ್ತುಗಳನ್ನು ನಾವು ತೋರಿಸಿದ್ದೇವೆ. ಹಳೆಯ ವಸ್ತುಗಳ ಬಗ್ಗೆ ನಮ್ಮಲ್ಲಿಯೂ ಮಾಹಿತಿ ಇಲ್ಲ’ ಆಡಳಿತಾಧಿಕಾರಿ ಉತ್ತರಿಸಿದರು.

ಹೊಸ ಸಮಿತಿಯಲ್ಲಿ ಇಬ್ಬರು ಉಪಾಧಿವಂತರ ಸೇರ್ಪಡೆಯ ಬಗ್ಗೆ ಚರ್ಚೆ ನಡೆದಾಗ, ‘ಶನಿವಾರದೊಳಗೆ ಯಾರೇ ಉಪಾಧಿವಂತರು ತಮ್ಮ ಕಾಗದ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ನಾವು ಅರ್ಜಿ ಪರಿಶೀಲಿಸಿ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ’ ಎಂದು ಜಿಲ್ಲಾಧಿಕಾರಿಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ್, ಕುಮಟಾ ಉಪವಿಭಾಗಾಧಿಕಾರಿ ಲಕ್ಷ್ಮೀಪ್ರಿಯಾ, ಕಂದಾಯ ಅಧಿಕಾರಿಗಳು, ನ್ಯಾಯಾಲಯದಲ್ಲಿ ಅರ್ಜಿದಾರರಾದ ಬಾಲಚಂದ್ರ ದೀಕ್ಷಿತ್, ಗಜಾನನ ಕೃಷ್ಣ ಹಿರೇ ಹಾಗೂ ಅನೇಕ ಉಪಾಧಿವಂತರು ಉಪಸ್ಥಿತರಿದ್ದರು.

ಸದ್ಯಕ್ಕೆ ಮಠದ ಆಡಳಿತ:ಹೈಕೋರ್ಟ್ ನಿರ್ದೇಶನದಂತೆ ಅವರು 15 ದಿನದೊಳಗೆ ಆಸ್ತಿಯತಪಾಸಣೆ ಮಾಡಿ ವರದಿ ಒಪ್ಪಿಸಬೇಕು.ಎರಡು ದಿನಗಳಿಂದ ಕುಮಟಾ ಉಪ ವಿಭಾಗಾಧಿಕಾರಿ ಲಕ್ಷ್ಮೀಪ್ರಿಯಾ ನೇತೃತ್ವದಲ್ಲಿ ಆಸ್ತಿಯ ಪಟ್ಟಿಯನ್ನುತಯಾರಿಸಲಾಗಿತ್ತು. ಅದರ ಪ್ರಕಾರ ಜಿಲ್ಲಾಧಿಕಾರಿ ಚಿನ್ನಾಭರಣ, ಒಡವೆ, ಬೆಳ್ಳಿಯ ವಸ್ತುಗಳನ್ನು ಪರಿಶೀಲಿಸಿಜಿಲ್ಲಾಡಳಿತದ ವಶಕ್ಕೆತೆಗೆದುಕೊಂಡಿದ್ದಾರೆ. ಹೊಸ ಸಮಿತಿ ರಚನೆಆಗುವವರೆಗೆ ದೇವಸ್ಥಾನದ ಆಡಳಿತವನ್ನು ನಡೆಸಲು ರಾಮಚಂದ್ರಾಪುರ ಮಠಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.