ಪುತ್ರಜಯ: ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್ ಅವರನ್ನು ಭಾರತಕ್ಕೆ ಗಡಿಪಾರು ಮಾಡುವುದಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹಾತೀರ್ ಮೊಹಮ್ಮದ್ ಸ್ಪಷ್ಟಪಡಿಸಿದ್ದಾರೆ.
2016ರಲ್ಲಿ ಝಾಕೀರ್ ನಾಯ್ಕ್ ಭಾರತ ತೊರೆದು ಮಲೇಷ್ಯಾದಲ್ಲಿ ನೆಲೆಸಿದ್ದಾರೆ. ಮಲೇಷ್ಯಾದಲ್ಲಿ ಅವರಿಗೆ ಶಾಶ್ವತವಾಗಿ ವಾಸಿಸಲು ಅವಕಾಶ ಕಲ್ಪಿಸಲಾಗಿದೆ. ಭಯೋತ್ಪಾದನೆ ಸಂಬಂಧಿಸಿದ ಚಟುವಟಿಕೆಗಳಿಗೆ ಕುಮ್ಮಕ್ಕು ಮತ್ತು ದ್ವೇಷ ಭಾಷಣ ಮಾಡಿದ ಆರೋಪವನ್ನು ಝಾಕೀರ್ ಎದುರಿಸುತ್ತಿದ್ದಾರೆ. ಆದರೆ, ಈ ಆರೋಪಗಳನ್ನು ಝಾಕೀರ್ ತಳ್ಳಿಹಾಕಿದ್ದಾರೆ.
‘ಎಲ್ಲಿಯವರೆಗೆ ಝಾಕೀರ್ ಯಾವುದೇ ಸಮಸ್ಯೆಯನ್ನು ಮಾಡುವುದಿಲ್ಲವೋ ಅಲ್ಲಿಯವರೆಗೆ ಮಲೇಷ್ಯಾದಿಂದ ಗಡಿಪಾರು ಮಾಡುವುದಿಲ್ಲ. ಶಾಶ್ವತ ವಾಸಿಸುವ ಸ್ಥಾನಮಾನ ನೀಡಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಪ್ರಧಾನಿ ಮಹಾತೀರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.