ಚಂಬಲ್ ನದಿ ಮಧ್ಯಪ್ರದೇಶದಲ್ಲಿ ಹುಟ್ಟಿ ಹರಿಯುವ ನದಿ. ಧೋಲ್ಪುರ ಎಂಬ ಗ್ರಾಮದ ಹತ್ತಿರ ಹುಟ್ಟುವ ನದಿ ಭಾರತದ ಬಹುತೇಕ ನದಿಗಳಿಗಿಂತ ಕಡಿಮೆ ಮಲಿನವಾದದ್ದು ಎಂದು ಹೇಳುತ್ತಾರೆ. ಧೋಲ್ಪುರ್ ಹೇಗೆ ಚಂಬಲ್ ನದಿ ಉಗಮಕ್ಕೆ ಹೆಸರಾಗಿದೆಯೋ ಹಾಗೆಯೇ ಚಂಬಲ್ ಕಣಿವೆಯ ಭಯಂಕರ ಢಕಾಯಿತರನ್ನು ಸೃಷ್ಟಿ ಮಾಡಿದ್ದಕ್ಕೂ ಹೆಸರಾಗಿದೆಯಂತೆ.
ಮಾಧೋಸಿಂಗ್ನನ್ನು ಡಕಾಯಿತರಲ್ಲಿ ಸಿಂಹವೆಂದು ಕರೆಯುತ್ತಿದ್ದರು. ಅವನ ಹೆಸರು ಹೇಳಿದರೆ ಸಾಕು ಚಂಬಲ್ ಕಣಿವೆಯ ಶ್ರೀಮಂತರ ಗುಂಡಿಗೆಗಳು ನಡುಗುತ್ತಿದ್ದವು. ಮುಂದೆ ಹುಲಿ ಬಂದು ನಿಂತರೆ ಹೇಗಾದರೂ ಎದುರಿಸಬಹುದು ಆದರೆ, ಮಾಧೋಸಿಂಗ್ ಎದುರಿಗೆ ಬಂದರೆ ಅದು ಯಮದರ್ಶನವೇ. ಅವನು ತಮ್ಮ ಹಳ್ಳಿಯ ಕಡೆಗೆ ಹೊರಟಿದ್ದಾನೆ ಎಂಬ ಸುದ್ದಿ ಏನಾದರೂ ಬಂದರೆ ಊರಿಗೆ ಊರೇ ಖಾಲಿಯಾಗುತ್ತಿತ್ತು. ಒಂದು ಶ್ರಾವಣದ ಹುಣ್ಣಿಮೆಯ ದಿನ ಧೋಲ್ಪುರ್ದಲ್ಲಿ ಸಂಭ್ರಮ ಮನೆಮಾಡಿತ್ತು.
ಎಲ್ಲಿ ನೋಡಿದಲ್ಲಿ ಹೂವಿನ ಅಲಂಕಾರ. ಮನೆಮನೆಗಳ ಮುಂದೆ ರಂಗೋಲಿಗಳ ಚಿತ್ತಾರ. ಅದು ರಕ್ಷಾಬಂಧನದ ದಿನ. ಹೆಣ್ಣುಮಕ್ಕಳು ತಮ್ಮ ಅಣ್ಣ-ತಮ್ಮಂದಿರಿಗೆ ರಕ್ಷೆಯನ್ನು ಕಟ್ಟುವ ದಿನ. ಆ ಅಣ್ಣ-ತಮ್ಮಂದಿರುಗಳು ತಮ್ಮ ಸಹೋದರಿಯರಿಗೆ ರಕ್ಷಣೆಯ ರಕ್ಷೆಯನ್ನು ನೀಡುವ ದಿನ. ಆ ಊರಿನ ಕೊತ್ವಾಲನ ಮಗಳು ಚಮೇಲಿಯ ಕಾಲುಗಳು ನೆಲದ ಮೇಲೆಯೇ ನಿಲ್ಲುತ್ತಿಲ್ಲ. ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದಳು. ಪ್ರತಿವರ್ಷವೂ ಅವಳದೊಂದು ವಿಶೇಷ.
ಹೊಸಬಟ್ಟೆ ಧರಿಸಿ, ತಿಂಡಿ ತಿಂದು ಮನೆಯ ಮುಂದಿನ ಕಟ್ಟೆಯ ಮೇಲೆ ನೂರಾರು ಅಲಂಕಾರ ಮಾಡಿದ ರಕ್ಷೆಗಳನ್ನು ತಟ್ಟೆಯಲ್ಲಿಟ್ಟುಕೊಂಡು ಕುಳಿತುಕೊಳ್ಳುವಳು. ಅದರೊಂದಿಗೆ ಒಂದು ಗಂಧದ ಮತ್ತು ಕುಂಕುಮದ ಬಟ್ಟಲುಗಳು. ಮನೆಯ ಮುಂದಿನ ರಸ್ತೆಯಲ್ಲಿ ಹೋಗುವ ಪ್ರತಿಯೊಬ್ಬ ಗಂಡಸಿನ ಕೈಗೂ ರಕ್ಷೆಯನ್ನು ಕಟ್ಟಲು ಆಕೆಗೆ ಭಾರಿ ಸಂತೋಷ. ಆಕೆಯನ್ನು ಕಂಡರೆ ಎಲ್ಲರಿಗೂ ಇಷ್ಟವಾದ್ದರಿಂದ ಎಲ್ಲ ಹುಡುಗರು, ಹಿರಿಯರು ಬೇಕೆಂದೇ ಇವಳ ಮನೆಯ ಮುಂದೆಯೇ ಬಂದು ರಕ್ಷೆಯನ್ನು ಕಟ್ಟಿಸಿಕೊಂಡು, ಕಾಣಿಕೆ ನೀಡಿ ಹೋಗುತ್ತಿದ್ದರು. ಅಂದು ಚಮೇಲಿಯ ಬುಟ್ಟಿ ಕಾಣಿಕೆಗಳಿಂದ, ತುಂಬಿ ಹೋಗುತ್ತಿತ್ತು.
ಅವಳು ತಲೆ ತಗ್ಗಿಸಿ ರಕ್ಷೆ ಕಟ್ಟುತ್ತಲೇ ಇದ್ದಳು. ಆಗ ಅವಳ ಮನೆಯ ಮುಂದಿದ್ದ ಜನ ಓಡತೊಡಗಿದರು. ಕ್ಷಣಾರ್ಧದಲ್ಲಿ ರಸ್ತೆ ಖಾಲಿಯಾಯಿತು, ಮನೆಗಳ ಬಾಗಿಲುಗಳು ಮುಚ್ಚತೊಡಗಿದವು. ಚಮೇಲಿ ತಲೆ ಎತ್ತಿ ನೋಡಿದರೆ ಮುಂದೆ ಒಬ್ಬ ಆಜಾನುಬಾಹು ವ್ಯಕ್ತಿ ನಿಂತಿದ್ದಾನೆ. ಅವನ ಕೆಂಪುಕಣ್ಣುಗಳು, ಭಾರಿ ಮೀಸೆ, ಕೆಂಪು ರುಮಾಲು, ಹೆಗಲ ಮೇಲೆ ಇಳಿ ಬಿದ್ದಿದ್ದ ಎರಡು ಭಾರಿ ಗಾತ್ರದ ಬಂದೂಕುಗಳು ಮತ್ತು ಎದೆಯ ಮೇಲೆ ಹರಡಿದ ಗುಂಡುಗಳ ಸರಪಳಿ ಅವನೇ ಮಾಧೋಸಿಂಗ್ ಎಂದು ಸಾರಿ ಹೇಳಿದವು.
ಚಮೇಲಿಗೆ ಗಾಬರಿಯಾಯಿತು. ಆಕೆ ಎದ್ದು ಓಡಿಹೋಗಲೂ ಆಗದು. ಯಾಕೆಂದರೆ ಅವನು ಮುಂದೆಯೇ ನಿಂತಿದ್ದಾನೆ. ಸಿಡಿಲಿನಂತಹ ಅವನ ಧ್ವನಿ ಗುಡುಗಿತು, ‘ಏ ಹುಡುಗಿ, ನನಗೆ ರಕ್ಷೆ ಕಟ್ಟುವುದಿಲ್ಲವೇನೇ?’ ಒಂದೆರಡು ಗಳಿಗೆ ತಡಬಡಿಸಿದ ಹೃದಯವನ್ನು ಧೃಡತೆಗೆ ತಂದುಕೊಂಡು ಚಮೇಲಿ ಕೇಳಿದಳು, ‘ಕಟ್ಟುತ್ತೇನೆ ಅಣ್ಣಾ, ಆದರೆ ನೀನು ನನಗೆ ಯಾವ ಕಾಣಿಕೆ ಕೊಡುತ್ತೀ?’ ಆತ ಅಬ್ಬರಿಸಿ ನಕ್ಕ, ‘ನಿನಗೇನು ಬೇಕು ಹೇಳು. ಇಡೀ ಧೋಲ್ಪುರ ಕೊಟ್ಟು ಬಿಡಲೇ?’ ಚಮೇಲಿ ಧೈರ್ಯದಿಂದ ಹೇಳಿದಳು, ‘ನಿನಗೆ ರಕ್ಷೆ ಕಟ್ಟಿದ ಮೇಲೆ ನೀನು ನನ್ನ ಅಣ್ಣನೇ. ನನಗೆ ಕೆಟ್ಟ ಅಣ್ಣ ಬೇಡ. ಈಗ ಎಲ್ಲರೂ ನಿನ್ನನ್ನು ಕಂಡರೆ ಹೆದರುತ್ತಾರೆ, ದ್ವೇಷಿಸುತ್ತಾರೆ.
ಎಲ್ಲ ಕೆಟ್ಟ ಕೆಲಸಗಳನ್ನು ಬಿಟ್ಟು ಎಲ್ಲರಿಗೆ ಪ್ರಿಯವಾಗುವಂತೆ ಇರುವುದಾದರೆ ಪ್ರೀತಿಯಿಂದ ರಕ್ಷೆ ಕಟ್ಟುತ್ತೇನೆ’. ಆತ ಕಣ್ಣುಮುಚ್ಚಿ ಒಂದು ಕ್ಷಣ ನಿಂತ. ನಂತರ ಮುಗುಳ್ನಕ್ಕು ಹೇಳಿದ, ‘ಆಯ್ತು ತಂಗಿ, ರಕ್ಷೆ ಕಟ್ಟು. ಈ ಕ್ಷಣದಿಂದ ಮಾಧೋಸಿಂಗ್ ಒಂದೂ ಕೆಟ್ಟ ಕೆಲಸ ಮಾಡುವುದಿಲ್ಲ. ನನ್ನನ್ನು ನಂಬು’. ಆಮೇಲೆ ಬಲಗೈ ಮುಂದೆ ಚಾಚಿ ನಿಂತ. ನಗುತ್ತಲೇ ಚಮೇಲಿ ಸುಂದರವಾದ ರಕ್ಷೆ ಕೈಗೆ ಕಟ್ಟಿದಳು. ಮಾಧೋಸಿಂಗ್ ತನ್ನ ಕೊರಳಲ್ಲಿದ್ದ ಚಿನ್ನದ ಹಾರವನ್ನು ತೆಗೆದು ಆಕೆಗೆ ಕಾಣಿಕೆಯೆಂದು ನೀಡಿದ. ನೇರವಾಗಿ ಪೋಲೀಸ್ ಠಾಣೆಗೆ ನಡೆದು ಶರಣಾದ. ಅವನ ಜೀವನದ ಡಕಾಯಿತನದ ಅವಧಿ ಮುಗಿದಿತ್ತು. ಪೊಲೀಸರ ಗುಂಡಿನ ಹೆದರಿಕೆಯಿಂದ, ಜನರ ಪ್ರತಿಭಟನೆಯಿಂದ, ಆಗದ್ದು ಪ್ರೀತಿಯಿಂದ ಸಾಧ್ಯವಾಗಿತ್ತು.
ಅದಕ್ಕೇ ತಿಳಿದವರು ಹೇಳುತ್ತಾರೆ, ಪ್ರೀತಿಗಿರುವ ಶಕ್ತಿ ಕ್ರೌರ್ಯಕ್ಕೆ ಎಂದೂ ಬರಲಾರದು. ಆದರೆ, ದೌರ್ಭಾಗ್ಯವೆಂದರೆ ಕೆಲ ನಾಯಕರು ಕ್ರೌರ್ಯದಿಂದ, ಹಿಂಸೆಯಿಂದ ಎಲ್ಲವನ್ನೂ ಸಾಧಿಸಬಹುದೆಂದು ನಂಬಿ ಪ್ರಪಂಚದ ಶಾಂತಿ, ನೆಮ್ಮದಿ ಕದಡುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.