ADVERTISEMENT

ಅಂಧಶ್ರದ್ಧೆ ತೊಲಗಲಿ

ಜಯಶ್ರೀ ಭ.ಭಂಡಾರಿ, ಬಾದಾಮಿ
Published 1 ಡಿಸೆಂಬರ್ 2015, 19:30 IST
Last Updated 1 ಡಿಸೆಂಬರ್ 2015, 19:30 IST

ಮಹಾರಾಷ್ಟ್ರದ ಧಾರ್ಮಿಕ ಕ್ಷೇತ್ರವೊಂದರ ಶನಿ ದೇವರ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ಇದ್ದ ನಿಷೇಧವನ್ನು ಮೀರಿ ಮಹಿಳೆಯೊಬ್ಬರು ದೇಗುಲ ಪ್ರವೇಶಿಸಿದ  ಕಾರಣಕ್ಕೆ ಏಳು ಭದ್ರತಾ ಸಿಬ್ಬಂದಿ ಅಮಾನತಾದ ಸುದ್ದಿ (ಪ್ರ.ವಾ., ನ. 30) ಬೇಸರ ತರಿಸಿತು. ಹೆಣ್ಣು, ಗಂಡೆಂಬ ಲಿಂಗ ತಾರತಮ್ಯದಿಂದ ಸಮಾಜ ಇನ್ನೂ ಹೊರಬಂದಿಲ್ಲ. ಅವಳನ್ನು ಎರಡನೇ ದರ್ಜೆ ಪ್ರಜೆಯನ್ನಾಗಿಯೇ ಬಿಂಬಿಸಲಾಗುತ್ತಿದೆ.

‘ಮಾತೃದೇವೋಭವ’ ಎನಿಸಿಕೊಂಡ ಮಹಿಳೆಗೆ ದೇಗುಲದಲ್ಲಿ ಪ್ರವೇಶವಿಲ್ಲದ್ದು ವಿಷಾದನೀಯ. ಮಹಿಳೆಯ ಪ್ರವೇಶದ ಕಾರಣಕ್ಕೆ ಗ್ರಾಮಸ್ಥರು ಆ ದೇಗುಲವನ್ನು ಸ್ವಚ್ಛಗೊಳಿಸಿ ಮೂರ್ತಿಗೆ ಅಭಿಷೇಕ ಮಾಡಿದ್ದು ಯಾವ ಘನಕಾರ್ಯಕ್ಕಾಗಿ ಎಂದು ತಿಳಿಯುತ್ತಿಲ್ಲ. ಒಂದು ಕಾಲದಲ್ಲಿ ಭಾರತ ಮೂಢನಂಬಿಕೆಗಳ ತವರೂರು ಎಂದು ಕರೆಸಿಕೊಂಡಿತ್ತು.

ಇಂದಿನ 21ನೇ ಶತಮಾನದಲ್ಲಿ ಬದಲಾವಣೆಯ ವೈಜ್ಞಾನಿಕ ಯುಗದಲ್ಲೂ ಅಂಧಶ್ರದ್ಧೆಯನ್ನು ಅನುಸರಿಸುವುದು ಎಷ್ಟು ಸರಿ? ಈ ತಾರತಮ್ಯ ತೊಲಗುವುದೆಂದು? ಮಹಿಳೆಗೆ ಸಮಾನತೆ ಸಿಗುವುದೆಂದು?

ಈ ಘಟನೆಗೆ ಕೆಲ ಗಣ್ಯ ಮಹಿಳೆಯರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಖುಷಿ ತಂದಿತು. ಇತ್ತೀಚೆಗಷ್ಟೆ ‘ಸಂವಿಧಾನ ದಿನ’ ಆಚರಿಸಿದ್ದೇವೆ. ಮಹಿಳೆಯ ದೇಗುಲ ಪ್ರವೇಶ ಸಂವಿಧಾನದ ಲಿಂಗ ಸಮಾನತೆ ಆಶಯವನ್ನು ಎತ್ತಿ ಹಿಡಿದಿದೆ ಎಂದು ಭಾವಿಸಿದರೆ ಇಂತಹ ದಿನಾಚರಣೆ ಸಾರ್ಥಕ ಎನಿಸುವುದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.