‘ಉಪನ್ಯಾಸಕ ಉಂಡ ಬಾಳೆಲೆಯೇ?’ (ವಾ.ವಾ., ಸೆ. 1) ಪತ್ರಕ್ಕೆ ಪ್ರತಿಕ್ರಿಯೆ. ೧೦–-೧೫ ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ತಮ್ಮನ್ನು ಸರ್ಕಾರದ ಉದ್ದೇಶಿತ, ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅರ್ಹತೆ ಮತ್ತು ಸೇವಾ ಹಿರಿತನ ಆಧರಿಸಿ ಪರಿಗಣಿಸಬೇಕು ಎಂಬ ಬೇಡಿಕೆ ಎಷ್ಟರಮಟ್ಟಿಗೆ ಉಚಿತ?
ಒಂದು ವೇಳೆ ಅತಿಥಿ ಉಪನ್ಯಾಸಕರನ್ನೇ ಪರಿಗಣಿಸಿದರೆ, ಅತಿಥಿ ಉಪನ್ಯಾಸಕರಲ್ಲದೆ ಇನ್ನಿತರ ಕಡೆ ಸೇವೆ ಸಲ್ಲಿಸುತ್ತಿರುವ ಸಾವಿರಾರು ಜನ ಅರ್ಹ ಪ್ರತಿಭಾನ್ವಿತರಿಗೆ ದ್ರೋಹ ಮಾಡಿದಂತಾಗುವುದಿಲ್ಲವೇ? ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವುದೇ ಕಾಯಂಗೊಳ್ಳುವುದಕ್ಕೆ ವಿಶೇಷ ಅರ್ಹತೆಯಾಗುವುದಾದರೆ ೧೦–೧೫ ವರ್ಷಗಳಲ್ಲಿ ರಾಜ್ಯದ ಖಾಸಗಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವವರನ್ನೂ ಇದೇ ಅರ್ಹತೆಯ ಆಧಾರದ ಮೇಲೆ ಪರಿಗಣಿಸಬೇಕಲ್ಲವೇ?
ಅನುದಾನಿತ ಕಾಲೇಜುಗಳ ಅನುದಾನರಹಿತ ಹುದ್ದೆಗಳಲ್ಲಿ ಸಾವಿರಾರು ಸಂಖ್ಯೆಯ ಉಪನ್ಯಾಸಕರು, ಅತಿಥಿ ಉಪನ್ಯಾಸಕರು ಪಡೆಯುವುದಕ್ಕಿಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದು, ಅಲ್ಲೂ ಅರ್ಹರು ಇದ್ದಾರೆ. ಅಷ್ಟೇ ಅಲ್ಲದೆ, ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡಿರುವ ಅನೇಕರು ಸ್ಥಳೀಯ ರಾಜಕಾರಣಿಗಳ ಪ್ರಭಾವ, ಅಧಿಕಾರಸ್ಥರ ಜೊತೆಗಿನ ನಂಟು ಹಾಗೂ ಪ್ರಾಂಶುಪಾಲರ ಮರ್ಜಿಗನುಗುಣವಾಗಿ ಆ ಕೆಲಸ ಗಿಟ್ಟಿಸಿಕೊಂಡಿದ್ದಾರೆ.
ಏಕೆಂದರೆ, ಅತಿಥಿ ಉಪನ್ಯಾಸಕರ ನೇಮಕಕ್ಕೆ ಈವರೆಗೂ ಸೂಕ್ತ ಮಾನದಂಡ ರೂಪಿಸಿರಲಿಲ್ಲ. ಮೆರಿಟ್ ಆಧಾರದಲ್ಲಿ ನೇಮಕ ಮಾಡುವ ಆನ್ಲೈನ್ ನೇಮಕಾತಿ ವ್ಯವಸ್ಥೆ ರಾಜ್ಯದಲ್ಲಿ ಜಾರಿಗೊಂಡದ್ದು ಕಳೆದ ವರ್ಷವಷ್ಟೆ. ಅದೂ ಇಡೀ ರಾಜ್ಯಕ್ಕೆ ಅನ್ವಯಿಸುವುದಿಲ್ಲ.
ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯಪಾಲನೆಯೂ ಆಗಿರುವುದಿಲ್ಲ.
ಸ್ಥಳೀಯ ಪ್ರಭಾವಿಗಳೇ ಹೀಗೆ ನೇಮಕ-ಗೊಂಡಿದ್ದನ್ನು ಕಾಣಬಹುದು. ಅತಿಥಿ ಉಪನ್ಯಾಸಕ ಎಂಬ ಹೆಸರಿನಲ್ಲೇ ಅದೊಂದು ತಾತ್ಕಾಲಿಕ ವ್ಯವಸ್ಥೆ ಎಂಬ ಸೂಚನೆ ಇದೆ. ಪೇಯಿಂಗ್ ಗೆಸ್ಟ್ ಆಗಿ ಮನೆಗೆ ಬಂದವರು ಮನೆಯ ಮಾಲೀಕತ್ವದಲ್ಲಿ ತಾವೂ ಹಕ್ಕುದಾರರು ಎನ್ನುವುದು ಎಷ್ಟು ಅಸಂಗತವೋ ಅಷ್ಟೇ ಅಸಂಗತ ಈ ಬೇಡಿಕೆ ಕೂಡ.
–ರೋಹಿಣಾಕ್ಷ ಶಿರ್ಲಾಲು, ಪುತ್ತೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.