ದಾವಣಗೆರೆ: ಉತ್ತಮ ಹೋರಾಟದ ಪಂದ್ಯದಲ್ಲಿ ಹಿನ್ನಡೆಯಿಂದ ಚೇತರಿಸಿ ಕೊಂಡ ಆರ್.ಬಿ.ಐನ ಜಹೀರ್ ಪಾಷಾ ಬೆಂಗಳೂರಿನ ಅರುಣ್ ಕುಮಾರ್ ಅವರನ್ನು ಸೋಲಿಸಿ, ರಾಜ್ಯ ರ್ಯಾಂಕಿಂಗ್ ಕೇರಂ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
ರಾಜ್ಯ ಚಾಂಪಿಯನ್ ಸಹ ಆಗಿರುವ ಜಹೀರ್ ಗುರುಭವನದಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ 6–20, 19–5, 25–11ರಿಂದ ಅರುಣ್ ಎದುರು ಜಯ ಗಳಿಸಿದರು. ದಾವಣಗೆರೆಯ ಶಿವ ಕುಮಾರ್, ಬೆಂಗಳೂರಿನ ವಿನೋದ್ ವಿರುದ್ಧ ಜಯಗಳಿಸಿ ಮೂರನೇ ಸ್ಥಾನ ಪಡೆದರು.
ಅಮೋಘ ಆಟವಾಡಿದ 13 ವರ್ಷದ ಎಸ್.ಶೈನಿ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಸೆಮಿಫೈನಲ್ನಲ್ಲಿ ಆರ್.ಬಿ.ಐ.ನ ಅಂಬಿಕಾ ಹರಿತ್ ವಿರುದ್ಧ ಜಯಗಳಿಸಿದ್ದ ಶೈನಿ ಫೈನಲ್ನಲ್ಲಿ ಆದಾಯ ತೆರಿಗೆ ಇಲಾಖೆಯ ನಾಗಜ್ಯೋತಿ ವಿರುದ್ಧ 25–10, 13–8ರಲ್ಲಿ ನೇರ ಆಟಗಳಿಂದ ಜಯಗಳಿಸಿದಳು.
ಶೈನಿ ಜಯಿಸಿದ ಎರಡನೇ ರಾಜ್ಯ ರ್ಯಾಂಕಿಂಗ್ ಟೂರ್ನಿ ಇದು. 2015ರಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆದ ಟೂರ್ನಿಯಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಳು.
ದಾವಣಗೆರೆ ಜಿಲ್ಲಾ ಕೇರಂ ಸಮಿತಿ ಮತ್ತು ಫ್ರೆಂಡ್ಸ್ ಕೇರಂ ಗ್ರೂಪ್ ಆಶ್ರಯದ ಟೂರ್ನಿಯ ವೆಟರನ್ಸ್ ಸಿಂಗಲ್ಸ್ನಲ್ಲಿ ವಿಭಾಗದಲ್ಲಿ ಬೆಂಗಳೂರಿನ ಶ್ರೀನಿವಾಸ್, ಚಳ್ಳಕೆರೆಯ ಕೃಷ್ಣ ನಾಯ್ಕ ಮತ್ತು ದಾವಣಗೆರೆಯ ಕೇರಂ ಗಣೇಶ್ ಕ್ರಮ ವಾಗಿ ಮೊದಲ ಮೂರು ಸ್ಥಾನ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.