ADVERTISEMENT

ನವ್ಯದಲ್ಲೇ ಜನತೆ ತಲುಪಿದ ಕವಿ

ಪ್ರೊ.ಬರಗೂರು ರಾಮಚಂದ್ರಪ್ಪ
Published 4 ಮೇ 2020, 3:03 IST
Last Updated 4 ಮೇ 2020, 3:03 IST
ಸಾಹಿತಿ ಬರಗೂರು ರಾಮಚಂದ್ರಪ್ಪ
ಸಾಹಿತಿ ಬರಗೂರು ರಾಮಚಂದ್ರಪ್ಪ   

ಆಗ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಮತ್ತು ವಿಜ್ಞಾನ ಕಾಲೇಜು ಒಟ್ಟಿಗೆ ಇದ್ದವು. ನಾನು ಕಲಾ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದೆ. ಕೆ.ಎಸ್‌. ನಿಸಾರ್‌ ಅಹಮದ್‌, ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನ ಅಧ್ಯಾಪಕರಾಗಿದ್ದರು. ಕನ್ನಡ ಅಧ್ಯಾಪಕನಾಗಿದ್ದ ನನಗೆ ಭೂವಿಜ್ಞಾನ ಅಧ್ಯಾಪಕರ ಜತೆಗೇ ಹೆಚ್ಚಿನಒಡನಾಟ. ಅದರನಂತರದಲ್ಲಿ ಅವರು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ನಾನು ಸದಸ್ಯನಾಗಿದ್ದೆ. ಹಿರಿ– ಕಿರಿ ಭೇದಭಾವ ಇಲ್ಲದೆ ನಮ್ಮಿಬ್ಬರ ನಡುವೆ ಒಳ್ಳೆಯ ಸಂಬಂಧವಿತ್ತು.

ಸಾಹಿತ್ಯಕವಾಗಿ ಹೇಳುವುದಾದರೆ, ನವ್ಯಕಾವ್ಯ ಬಹಳ ಉಚ್ಛ್ರಾಯವಾಗಿದ್ದ ಕಾಲದಲ್ಲಿ ’ನವ್ಯ ಕಾವ್ಯ ಸಂಕೀರ್ಣವಾದುದು, ಬಹಳ ಜಟಿಲವಾದುದು, ಸಂಕೇತ– ಪ್ರತಿಮೆಗಳಿಂದ ಕೂಡಿದ್ದು‘ ಎಂದು ಸಾಮಾನ್ಯ ಸಾಹಿತ್ಯಾಸಕ್ತರು ಹೇಳುತ್ತಿದ್ದರು. ಆ ಸಂದರ್ಭದಲ್ಲಿ ನವ್ಯಶೈಲಿಯಲ್ಲೇ ಜನರನ್ನು ತಲುಪಿದ ಮಹತ್ವದ ಕವಿ ಎಂದರೆ ನಿಸಾರ್ ಅಹಮದ್‌‌.

ಅವರು ಬರೆದದ್ದು ನವ್ಯಶೈಲಿ ಮತ್ತು ನವ್ಯಬಂಧವೇ. ಕೆಲವು ಭಾವಗೀತೆಗಳನ್ನು ಬಿಟ್ಟರೆ, ನವ್ಯಶೈಲಿ ಮತ್ತು ನವ್ಯಬಂಧವೇ. ಆದರೆ, ಅದರೊಳಗೆ ಇದ್ದದ್ದು ನವೋದಯದ ಆಶಯಗಳು, ಜತೆಗೆ ಸಾಮಾಜಿಕ ಆಶಯಗಳು. ನವ್ಯಶೈಲಿಯಲ್ಲೇ ಜನರನ್ನು ತಲುಪುವಂತಹ ಕಾವ್ಯ ಬರೆಯುವ ಮೂಲಕ ನವ್ಯದ ಜಟಿಲತೆಯನ್ನು ಒಡೆದ ಕವಿ ಅವರು. ಜಟಿಲತೆಯ ಆಚೆಗೆ ಜನರೊಟ್ಟಿಗೆ ಸಾಹಿತ್ಯ ಸಂಬಂಧವನ್ನು ಸ್ಥಾಪನೆ ಮಾಡಿದ್ದು ನವ್ಯಸಾಹಿತ್ಯದ ಸಂದರ್ಭದಲ್ಲಿ ಬಹಳ ವಿಶೇಷವಾದುದು.

ADVERTISEMENT

ಅವರ ‘ಸವತಿ ಮಕ್ಕಳು’ ಕವಿತೆ ಆಧರಿಸಿಯೇ ‘ಸವತಿ ಮಕ್ಕಳ ಸಂವೇದನೆ’ ಎನ್ನುವ ಲೇಖನ ಬರೆದಿದ್ದೆ. ಅಂದರೆ ಈ ದೇಶದಲ್ಲಿ ಇದ್ದೂ ನಾನು ಪರಕೀಯ ಎನಿಸುತ್ತಿದೆಯಲ್ಲ ಎನ್ನುವ ವೇದನೆ ಅವರ ‘ನಾನೆಂಬ ಪರಕೀಯ’ ಕವನ ಸಂಕಲನದಲ್ಲಿಕಾಣಿಸುತ್ತದೆ. ಇದರಲ್ಲಿನ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಕವಿತೆ ಧಾರ್ಮಿಕ ಸಂದರ್ಭದಲ್ಲಿ ಕೆಲವರ ವರ್ತನೆ ಕುರಿತದ್ದಾಗಿರಬಹುದು, ಒಂದು ಪದ್ಯದಲ್ಲಿ ಮೂಲಭೂತವಾದಿಗಳು ಇಸ್ಲಾಂನಲ್ಲಿದ್ದರೂ ಟೀಕಿಸುತ್ತಾರೆ, ಬೇರೆ ಕಡೆ ಇದ್ದರೂ ಟೀಕೆ ಮಾಡಿದ್ದಾರೆ.ನಿತ್ಯೋತ್ಸವದ ಕವಿ ಎಂದು ಪ್ರಸಿದ್ಧಿ ಆಗಿದ್ದರೂ ಅವರ ಕೆಲವು ಕವಿತೆಗಳಲ್ಲಿ ಇದ್ದ ರಾಜಕೀಯ ಪ್ರಜ್ಞೆ ಮಹತ್ವದ್ದು.ಅವರಲ್ಲಿ ಉತ್ಸವ ಅಷ್ಟೇ ಅಲ್ಲ, ಸಮಕಾಲೀನ ಸಂದರ್ಭದ ವಿದ್ಯಮಾನಗಳ ಬಗೆಗೆ ವಿಷಾದವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.