ADVERTISEMENT

ಕಾಂಗ್ರೆಸ್‌ನತ್ತ ಪುಟ್ಟಣ್ಣ, ವೈ.ಎಸ್‌.ವಿ. ದತ್ತ ಚಿತ್ತ

ಕಾಂಗ್ರೆಸ್‌ ಸೇರುವುದು ಖಚಿತ: ದತ್ತಾ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 10:00 IST
Last Updated 15 ಡಿಸೆಂಬರ್ 2022, 10:00 IST
 ವೈ.ಎಸ್‌.ವಿ. ದತ್ತ ಹಾಗೂ  ಪುಟ್ಟಣ್ಣ
ವೈ.ಎಸ್‌.ವಿ. ದತ್ತ ಹಾಗೂ ಪುಟ್ಟಣ್ಣ   

ಬೆಂಗಳೂರು/ಚಿಕ್ಕಮಗಳೂರು: ಜೆಡಿಎಸ್‌ ಮುಖಂಡ, ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಮತ್ತು ವಿಧಾನಪರಿಷತ್ ಸದಸ್ಯ ಬಿಜೆಪಿಯ ಪುಟ್ಟಣ್ಣ ಅವರು ಕಾಂಗ್ರೆಸ್‌ ಪಕ್ಷದತ್ತ ಮುಖ ಮಾಡಿದ್ದಾರೆ.

‘ಕಾಂಗ್ರೆಸ್ ಸೇರುವುದು ಖಚಿತ’ ಎಂದು ದತ್ತ ಅವರೇ ಸ್ವತಃ ದೃಢಪಡಿಸಿದ್ದರೆ, ‘ಪುಟ್ಟಣ್ಣ ಅವರಿಗೆ ಪಕ್ಷವನ್ನು ಸೇರುವಂತೆ ಕಾಂಗ್ರೆಸ್‌ ಪಕ್ಷದಿಂದ ಆಹ್ವಾನ ಬಂದಿದೆ’ ಎಂದು ಅವರ ಆಪ್ತ ವಲಯವು ತಿಳಿಸಿದೆ.

‘ಪಕ್ಷವನ್ನು ಅಧಿಕಾರಕ್ಕೆ ತರಲು ತ‌ಮ್ಮನ್ನು, ಸಿ.ಪಿ.ಯೋಗೇಶ್ವರ ಅವರನ್ನು ಚೆನ್ನಾಗಿ ಬಳಸಿಕೊಂಡರು. ಬಳಿಕ ತಮ್ಮನ್ನು ಮರೆತದ್ದೂ ಅಲ್ಲದೇ ನಿರ್ಲಕ್ಷಿಸುತ್ತಿದ್ದಾರೆ’ ಎಂದು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಪುಟ್ಟಣ್ಣ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ADVERTISEMENT

‘ಇದೇ ಕಾರಣದಿಂದ ಪುಟ್ಟಣ್ಣ ಅವರು ಸದ್ಯಕ್ಕೆ ತಟಸ್ಥರಾಗಿ ಉಳಿದಿದ್ದಾರೆ. ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದರಿಂದ, ಮುಂದಿನ ದಿನ ಗಳಲ್ಲಿ ಆ ಪಕ್ಷ ಸೇರುವ ಬಗ್ಗೆ ಒಲವು ಹೊಂದಿದ್ದಾರೆ’ ಎಂದು ಅವರ ಆಪ್ತವಲಯ ತಿಳಿಸಿದೆ. ಪುಟ್ಟಣ್ಣ ಅವರು 2019ರಲ್ಲಿ ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಿದ್ದು, ಪರಿಷತ್ತಿಗೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಕಾಂಗ್ರೆಸ್‌ ಸೇರಲು ತೀರ್ಮಾನಿಸಿದ ಬೆನ್ನಲ್ಲೇ ಪುಟ್ಟಣ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.

‘ಕಾಂಗ್ರೆಸ್‌ ಸೇರ್ಪಡೆ ಖಚಿತ’ (ಚಿಕ್ಕಮಗಳೂರು ವರದಿ):

‘ಕಾಂಗ್ರೆಸ್‌ ಸೇರುವುದು ಖಚಿತ. ಆದರೆ ಯಾವತ್ತು ಎಂಬುದು ಇನ್ನೂ ನಿಗದಿಯಾಗಿಲ್ಲ’ ಎಂದು ಜೆಡಿಎಸ್‌ ಮುಖಂಡ ವೈ.ಎಸ್‌.ವಿ. ದತ್ತ ಅವರು ಹೇಳಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನನಗೆ 70 ವರ್ಷ. ಬಹುಶಃ ಇದು ಕೊನೆಯ ಪರೀಕ್ಷೆ. ಟಿಕೆಟ್‌ ಆಕಾಂಕ್ಷಿಯಾಗಿ ಕಾಂಗ್ರೆಸ್‌ ಸೇರುತ್ತಿಲ್ಲ. ಟಿಕೆಟ್‌ ನೀಡಬೇಕು ಎಂದು ಷರತ್ತು ವಿಧಿಸಿಲ್ಲ. ಜೆಡಿಎಸ್‌ನ ಬಹುತೇಕ ಕಾರ್ಯ ಕರ್ತರು, ಪಕ್ಷಾತೀತವಾಗಿರುವ ಅಭಿಮಾನಿಗಳು, ಕ್ಷೇತ್ರದ ಜನರ ಅಭಿಪ್ರಾಯದಂತೆ ತೀರ್ಮಾನ ಕೈಗೊಂಡಿದ್ದೇನೆ’ ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.