
ದಾವಣಗೆರೆ: ಕೋವಿಡ್ ನಿಯಂತ್ರಣಕ್ಕಾಗಿ ಘೋಷಿಸಲಾದ ವಾರಾಂತ್ಯ ಕರ್ಫ್ಯೂವಿಗೆ ಜಿಲ್ಲೆಯ ನಾಗರಿಕರಿಂದ ಶನಿವಾರ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ವಾಣಿಜ್ಯ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದು, ದಿನಸಿ ಅಂಗಡಿಗಳ ಮಾಲೀಕರು ಬೆಳಿಗ್ಗೆ 10ರ ನಂತರ ಸ್ವಯಂಪ್ರೇರಿತರಾಗಿಯೇ ಬಾಗಿಲು ಬಂದ್ ಮಾಡಿದರು.ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಪೊಲೀಸರು ಸಂಚರಿಸಿ, ವ್ಯಾಪಾರಸ್ಥರನ್ನು ಹಾಗೂ ಗ್ರಾಹಕರನ್ನು ಮನೆಗೆ ತೆರಳುವಂತೆ ಸೂಚಿಸಿದರು.
ನಗರದ ಎಲ್ಲಾ ರಸ್ತೆಗಳು ಖಾಲಿಯಾಗಿದ್ದವು. ಜಯದೇವ ವೃತ್ತ, ಅಂಬೇಡ್ಕರ್ ಸರ್ಕಲ್, ಪಿ.ಬಿ. ರಸ್ತೆ, ಗಾಂಧಿ ಸರ್ಕಲ್, ಎಪಿಎಂಸಿ, ಗುಂಡಿ ಸರ್ಕಲ್, ಹಳೇ ದಾವಣಗೆರೆಯ ಬಹುತೇಕ ವೃತ್ತಗಳು, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನು ಪೊಲೀಸರು ಬಂದ್ ಮಾಡಿದ್ದರು.ಮೆಡಿಕಲ್ ಸ್ಟೋರ್ಗಳು ಹೊರತುಪಡಿಸಿ ಎಲ್ಲ ಅಂಗಡಿಗಳು ಮುಚ್ಚಿದವು.ಕರ್ಫ್ಯೂನಿಂದಾಗಿ ಮಕ್ಕಳು ಖಾಲಿ ರಸ್ತೆಯಲ್ಲಿ ಶೆಟ್ಲ್ ಕಾಕ್ ಆಡಿದರು.
ಬೆಳಿಗ್ಗೆಯ ಚಿತ್ರಣ: ಬೆಳಿಗ್ಗೆ 6 ಗಂಟೆಯಿಂದಲೇ 10ರವರೆಗೆವರೆಗೆ ತರಕಾರಿ, ಹಾಲು, ದಿನಪತ್ರಿಕೆ, ದಿನಸಿ ಅಂಗಡಿ, ಬೇಕರಿ ಸೇರಿದಂತೆ ಕಿರಾಣಿ ಅಂಗಡಿಗಳು ತೆರೆದಿದ್ದವು. ಶುಕ್ರವಾರವೇ ಹೆಚ್ಚಿನ ಮಂದಿ ದಿನಸಿ ಖರೀದಿಸಿದ್ದರಿಂದ ಅಷ್ಟೇನು ನೂಕು ನುಗ್ಗಲು ಕಂಡು ಬರಲಿಲ್ಲ. ಆದರೆ ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದು ಕಂಡು ಬಂತು. ಮಾಂಸದ ಅಂಗಡಿಗಳು ತೆರೆದಿರಲಿಲ್ಲ.
ಬೆಳಿಗ್ಗೆ 10ರ ನಂತರ: ಬೆಳಿಗ್ಗೆ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು 10 ಗಂಟೆಯಾಗುತ್ತಿದ್ದಂತೆ ಮನೆ ಸೇರಿದರು. ನಗರದ ವಿವಿಧ ರಸ್ತೆಗಳು, ವೃತ್ತಗಳಲ್ಲಿ ತರೆದಿದ್ದ ಕಿರಾಣಿ ಅಂಗಡಿಗಳನ್ನು ಮಾಲೀಕರು ಮುಚ್ಚಿದರು. ತರಕಾರಿ ವ್ಯಾಪಾರಿಗಳು ಆದಷ್ಟು ವ್ಯಾಪಾರಕ್ಕೆ ತೃಪ್ತಿ ಪಟ್ಟು ಜಾಗ ಖಾಲಿ ಮಾಡಿದರು.ಜನರ ಓಡಾಟ ನಿಲ್ಲಿಸಲು ಪೊಲೀಸರೇ ಬ್ಯಾರಿಕೇಡ್ ತಂದು ರಸ್ತೆಗೆ ಅಡ್ಡಲಾಗಿ ಇಟ್ಟು ಟೇಪ್ ಕಟ್ಟಿದರು.
ಅನಗತ್ಯವಾಗಿ ಸಂಚರಿಸುವವರಿಗೆ ದಂಡ: ಜನರು ಅನಗತ್ಯವಾಗಿ ಸಂಚರಿಸದಂತೆ ಪೊಲೀಸರು ಧ್ವನಿವರ್ಧಕದ ಮೂಲಕ ಎಚ್ಚರಿಸುತ್ತಿದ್ದುದು ಕಂಡು ಬಂತು. ಆದರೂ ಕೆಲವರು ಅನಗತ್ಯವಾಗಿ ರಸ್ತೆಗೆ ಬಂದವರನ್ನು ಪೊಲೀಸರು ತಡೆದು ದಂಡ ವಿಧಿಸಿದರು.ದಾವಣಗೆರೆ ನಗರದ ಚಾಮರಾಜಪೇಟೆ ಸರ್ಕಲ್ನಲ್ಲಿ ಬೈಕ್ನಲ್ಲಿಸುತ್ತುತ್ತಿದ್ದ ಯುವಕರನ್ನುಹಿಡಿಯಲು ಯತ್ನಿಸಿದಾಗ ಪೊಲೀಸರು ಲಾಠಿ ಎಸೆದ ಪ್ರಸಂಗವೂ ಜರುಗಿತು. ಕರ್ಫ್ಯೂ ಇದ್ದರೂ ಚಾಮರಾಜಪೇಟೆಯ ಫೈನಾನ್ಸ್ ಕಚೇರಿ ತೆರೆದಿದ್ದು, ಪೊಲೀಸರು ಮುಚ್ಚಿಸಿದರು.
ಕೆಎಸ್ಆರ್ಟಿಸಿ ಬಾರದ ಜನ: ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸಿದರೂ ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಇದ್ದರು. ಬಸ್ ನಿಲ್ದಾಣದಲ್ಲಿ ಚಾಲಕರು ಪ್ರಯಾಣಿಕರಿಗಾಗಿ ಕಾದು ಕುಳಿತಿದ್ದರು.ಬಂದಷ್ಟೇ ಪ್ರಯಾಣಿಕರನ್ನು ಕರೆದುಕೊಂಡು ಹೋದರು. ಖಾಸಗಿ ಬಸ್ಗಳು ಸಂಚಾರ ಸ್ಥಗಿತಗೊಳಿಸಿದ್ದವು.
‘ಮಾಮೂಲಿ ದಿನಗಳಲ್ಲಿ ಹರಿಹರದ ಕಡೆಗೆ ಸಂಚರಿಸುವ ಬಸ್ಗಳು 5 ನಿಮಿಷಕ್ಕೆ ಭರ್ತಿಯಾಗುತ್ತಿದ್ದವು. ಆದರೆ ಒಂದು ಗಂಟೆಯಿಂದ ಕಾದರೂ 10 ಜನ ಬಂದಿಲ್ಲ’ ಎಂದು ಚಾಲಕರೊಬ್ಬರು ಹೇಳಿದರು.ಗ್ರಾಮಾಂತರ ಭಾಗಗಳಿಂದ ನಗರಕ್ಕೆ ಬರುವವರ ಸಂಖ್ಯೆ ತೀರಾ ಕಡಿಮೆ ಇತ್ತು. ಇದರಿಂದ ಬಸ್ ಸಂಚಾರವೂ ಕಡಿಮೆಯಾಗಿತ್ತು.
ಲಾಠಿ ಹಿಡಿದ ತಹಶೀಲ್ದಾರ್
ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಬಿ.ಎನ್. ಗಿರೀಶ್ ಅವರು ಎಪಿಎಂಸಿ ಮಾರುಕಟ್ಟೆ ಹೋಗಿ ಲಾಠಿ ಹಿಡಿದು ಅಲ್ಲಿ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸಿದರು. ಕರ್ಫ್ಯೂ ನಿಮಿತ್ತ ಎಪಿಎಂಸಿಗೆ ರಜೆ ಘೋಷಿಸಿದ್ದರೂ ಅಲ್ಲಿನ ವ್ಯಾಪಾರಿಗಳು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿದ್ದರು. ಇದನ್ನು ಕಂಡ ತಹಶೀಲ್ದಾರ್ ಬಾಗಿಲುಗಳನ್ನು ಮುಚ್ಚಿಸಿದರು. ಕೆಟಿಜೆ ನಗರ ಠಾಣೆಯ ಎಸ್ಐ ವೀರೇಶ್ ಅವರು ತಹಶೀಲ್ದಾರ್ ಅವರ ಜೊತೆಯಲ್ಲಿದ್ದರು.
ಇದಾದ ಬಳಿಕ ಕೆ.ಆರ್. ಮಾರುಕಟ್ಟೆ, ಗಡಿಯಾರ ಕಂಬಕ್ಕೆ ಹೋದ ತಹಶೀಲ್ದಾರ್ ಅವರು ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಇಲ್ಲದೇ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.