ADVERTISEMENT

ಆನೆಗಳಿಗಾಗಿ, ರಸ್ತೆಗೆ ಹಲಸು ಸುರಿಯವ ರೈತರು!

ಒಳನೋಟ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 20:34 IST
Last Updated 14 ನವೆಂಬರ್ 2020, 20:34 IST
ಮಲೆನಾಡು ಭಾಗದಲ್ಲಿ ಬೆಳೆ ಉಳಿಸಿಕೊಳ್ಳಲು ರೈತರು ರಸ್ತೆ ಮೇಲೆ ಹಲಸಿನ ಹಣ್ಣು ಸುರಿದಿರುವ ದೃಶ್ಯ
ಮಲೆನಾಡು ಭಾಗದಲ್ಲಿ ಬೆಳೆ ಉಳಿಸಿಕೊಳ್ಳಲು ರೈತರು ರಸ್ತೆ ಮೇಲೆ ಹಲಸಿನ ಹಣ್ಣು ಸುರಿದಿರುವ ದೃಶ್ಯ   

ಹಾಸನ: ಆನೆಗಳು ಕಾಫಿ ತೋಟಕ್ಕೆ ನುಗ್ಗುವುದನ್ನು ತಡೆಯಲು ಸಕಲೇಶಪುರ ತಾಲ್ಲೂಕಿನ ಕೀರೆಹಳ್ಳಿ, ಅಗನಿ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಹಲಸಿನ ಹಣ್ಣುಗಳನ್ನು ತಮ್ಮ ಜಮೀನಿನ ಸುತ್ತಮುತ್ತ ಹಾಗೂ ಕಾಡಿನ ದಾರಿಯಲ್ಲಿ ಸುರಿಯುವ ಮೂಲಕ ಹೊಸ ಉಪಾಯ ಕಂಡುಕೊಂಡಿದ್ದಾರೆ.

ಆಲೂರು, ಸಕಲೇಶಪುರ ಹಾಗೂ ಬೇಲೂರು ತಾಲ್ಲೂಕಿನ ವಿವಿಧೆಡೆ ಆನೆಗಳ ಹಿಂಡು ತೋಟ, ಗದ್ದೆಗಳಿಗೆ ದಾಳಿ ಮಾಡಿ ಬೆಳೆ ನಾಶ ಮಾಡುತ್ತಿದ್ದವು. ಅವುಗಳು ತೋಟಕ್ಕೆ ಬರುವುದನ್ನು ತಪ್ಪಿಸಲು, ರೈತರು ಟ್ರ್ಯಾಕ್ಟರ್‌ಗಳಲ್ಲಿ ಹಲಸಿನ ಹಣ್ಣುಗಳನ್ನು ತುಂಬಿಕೊಂಡು ಬಂದು, ಕಾಡಿನ ದಾರಿಯಲ್ಲಿ ಸುರಿಯುತ್ತಾರೆ. ಆನೆಗಳು ಹಣ್ಣು ತಿಂದು ವಾಪಸ್‌ ಹೋಗುತ್ತವೆ. ಇದರಿಂದ ಬೆಳೆ ನಾಶ ತಪ್ಪುತ್ತದೆ.

ಕಂದಕ ನಿರ್ಮಾಣ, ರೈಲ್ವೆ ಕಂಬಿ ಅಳವಡಿಕೆ, ಜೇನು ಗೂಡು ಬೇಲಿ, ವಾಚ್‌ಟವರ್‌ ಹೀಗೆ ಹಲವು ಕ್ರಮ ಕೈಗೊಂಡರೂ ಬೆಳೆ ಉಳಿಸಲು ಆಗುತ್ತಿಲ್ಲ. ರೈತರು ಒಟ್ಟುಗೂಡಿ ಗದ್ದೆಗಳ ಬಳಿ ರಾತ್ರಿ ಕಾವಲು ಕಾಯುತ್ತಾರೆ. ಪಟಾಕಿ ಸಿಡಿಸಿ, ಜೋರಾಗಿ ಕೂಗುತ್ತಾ, ಡೋಲು ಬಾರಿಸಿದರೂ ಬೆಳೆ ಹಾಳು ಮಾಡುವುದು ನಿಲ್ಲಿಸಿಲ್ಲ.

ADVERTISEMENT

‘ತೋಟದ ಹಲಸಿನ ಹಣ್ಣಿನಿಂದ ಆದಾಯ ಸಿಗದಿದ್ದರೂ ಪರವಾಗಿಲ್ಲ. ಉಳಿದ ಬೆಳೆಯನ್ನಾದರೂ ಉಳಿಸಿಕೊಳ್ಳುತ್ತೇನೆ’ ಎಂದು ಕಿರೇಹಳ್ಳಿ ಕೃಷ್ಣೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.