ಕೊಪ್ಪಳ: ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ಒಂದೂವರೆ ತಿಂಗಳ ಬಾಣಂತಿ ನೇತ್ರಾವತಿ (28) ಎಂಬುವರು ಭಾನುವಾರ ಮಧ್ಯರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
‘ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದ ನೇತ್ರಾವತಿ ಬಾಣಂತನಕ್ಕೆ ತವರು ಮನೆಗೆ ಬಂದಿದ್ದಳು. ರಾತ್ರಿ ಶೌಚಾಲಯಕ್ಕೆ ಹೊರಟಾಗ, ಹೊರಗಡೆ ಬದಲು ಮನೆಯಲ್ಲೇ ಹೋಗು ಎಂದು ಹೇಳಿ ಮನೆಯವರು ಮಲಗಿಸಿದ್ದರು. ಅಲ್ಲೇ ಮಲಗಿದ್ದಾಳೆ ಎಂದು ಎಲ್ಲರೂ ಭಾವಿಸಿದ್ದರು. ಕೆಲ ಗಂಟೆಗಳಲ್ಲಿ ಮನೆಗೆ ಬಳಿಯಿರುವ ಖಾಲಿ ಜಾಗದಲ್ಲಿ ಸುಟ್ಟಸ್ಥಿತಿಯಲ್ಲಿ ಆಕೆಯ ಶವ ಕಂಡುಬಂದಿದೆ. ಯಾಕೆ ಹೀಗಾಗಿದೆ ಎಂಬುದು ಗೊತ್ತಿಲ್ಲ’ ಎಂದು ಮೃತ ಮಹಿಳೆಯ ಸಂಬಂಧಿ ಹನುಮಂತಪ್ಪ ಮಾಧ್ಯಮದವರಿಗೆ ತಿಳಿಸಿದರು.
ನೇತ್ರಾವತಿ ಹಾಗೂ ಅದೇ ಊರಿನ ಮಂಜುನಾಥ ಕುರಿ 2016ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಪುತ್ರಿಯರು ಮತ್ತು ಇಬ್ಬರು ಪುತ್ರರು ಇದ್ದಾರೆ. ‘ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕಾಗಿ ನನ್ನ ಮಗಳನ್ನು ಕೊಲೆ ಮಾಡಿ ತಂದು ಇಲ್ಲಿ ಎಸೆದಿದ್ದಾರೆ’ ಎಂದು ನೇತ್ರಾವತಿ ತಾಯಿ ಕನಕಮ್ಮ ಕಂಬಳಿ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಯುಗಾದಿಯ ಅಮವಾಸ್ಯೆ ಇದ್ದ ಕಾರಣ ಇದು ನಿಧಿಗಾಗಿ ಮಾಡಿದ ಕೃತ್ಯವಾಗಿರಬಹುದು ಎಂದು ಅನೇಕರು ಶಂಕೆ ವ್ಯಕ್ತಪಡಿಸಿದ್ದರು. ಆದರೆ, ಪೊಲೀಸರು ಇದನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ. ಕೊಲೆ ಹಾಗೂ ಸಾಕ್ಷಿನಾಶದಡಿ ಪ್ರಕರಣ ದಾಖಲಾಗಿದೆ.
‘ಘಟನೆ ಕುರಿತು ಪ್ರಕರಣ ದಾಖಲಾಗಿದೆ. ವಾಮಾಚಾರದ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ನಮಗೆ ಈ ನಿಟ್ಟಿನಲ್ಲಿ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.