ADVERTISEMENT

ಹಿಂದುತ್ವದ ಕವಚ ತೊಟ್ಟವರು ಎಲ್ಲಿ ಅಡಗಿದ್ದಾರೆ: ಬೇಳೂರು ಗೋಪಾಲಕೃಷ್ಣ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 10:05 IST
Last Updated 17 ಸೆಪ್ಟೆಂಬರ್ 2021, 10:05 IST
ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು
ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು   

ಶಿವಮೊಗ್ಗ: ಮೈಸೂರಿನಲ್ಲಿ ಪುರಾತನ ಹಿಂದೂ ದೇವಾಲಯ ಕೆಡವಿದ್ದು ಅಕ್ಷಮ್ಯ ಅಪರಾಧ. ಹಿಂದುತ್ವ ಕವಚ ತೊಟ್ಟವರು ಈಗ ಎಲ್ಲಿ ಅಡಗಿದ್ದಾರೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ಕೆಲಸವಾಗಿದ್ದರೆ ಬಿಜೆಪಿಯವರ ಹಾರಾಟ, ಹೋರಾಟಗಳನ್ನು ಊಹಿಸಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ. ಮಾತು ಮಾತಿಗೂ ಬಾಯಿ ನೋವಾಗುವ ಹಾಗೆ ಕಿರುಚಿಕೊಳ್ಳುತ್ತಿದ್ದ ಶೋಭಾ ಕರಂದ್ಲಾಜೆ ಅವರು ಈಗ ಎಲ್ಲಿದ್ದಾರೋ ಗೊತ್ತಿಲ್ಲ. ಹಿಂದೂ ಕವಚ ತೊಟ್ಟವರು ಅಡಗಿಕೊಂಡಿದ್ದಾರೆ. ಸರ್ಕಾರದ ವಿರುದ್ಧ ಧ್ವನಿಯನ್ನು ಎತ್ತುತ್ತಿಲ್ಲ. ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಜಿಲ್ಲೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೂ ನ್ಯಾಯ ಸಿಗುತ್ತಿಲ್ಲ. ಹಲವು ವರ್ಷಗಳಿಂದ ನೆಲೆ ಇಲ್ಲದೆ ಪರಿತಪಿಸುತ್ತಿರುವ ಸಂತ್ರಸ್ತರನ್ನು ಸರ್ಕಾರ ಕೈಬಿಟ್ಟಿದೆ. ಅಂತಹ ಸಂತ್ರಸ್ತರ ಪರವಾಗಿ ಕಾಂಗ್ರೆಸ್‌ ಹೋರಾಟ ನಡೆಸಲಿದೆ ಎಂದರು.

ADVERTISEMENT

ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸಾಗರದ ವ್ಯಕ್ತಿಯೊಬ್ಬರು ನಿಧನ ಹೊಂದಿದ್ದಾರೆ. ಇದಕ್ಕೆ ಕಾರಣ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಇರುವುದು. ವೆಂಟಿಲೇಟರ್ ಇಲ್ಲ ಎಂದರೆ ಹೇಗೆ? ಸದನದಲ್ಲಿ ಶಾಸಕ ಹರತಾಳು ಹಾಲಪ್ಪ ಪ್ರಶ್ನೆ ಮಾಡಿದ್ದರು. ಮುಖ್ಯಮಂತ್ರಿ ವೆಂಟಿಲೇಟರ್ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಆ ದಿನವೇ ವ್ಯಕ್ತಿ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಹೇಳಿದರೂ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗುವುದಿಲ್ಲ ಎಂದರೆ ಹೇಗೆ? ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಮಲೆನಾಡು ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆ ಬಗೆಹರಿದಿಲ್ಲ. ಸಂಸದ ರಾಘವೇಂದ್ರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿಲ್ಲ. ಅವರಿಗೆ ಅಪ್ಪನ ರಾಜೀನಾಮೆಯೇ ಚಿಂತೆಯಾಗಿದೆ. ಅಭಿವೃದ್ಧಿ ಬೇಕಿಲ್ಲ ಎಂದು ಕುಟುಕಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಶಾಂತವೀರನಾಯ್ಕ್, ವೈ.ಎಚ್.ನಾಗರಾಜ್, ಪಂಡಿತ್‌ ವಿ. ವಿಶ್ವನಾಥ್, ಜಿ.ಡಿ. ಮಂಜುನಾಥ್, ಸೋಮಶೇಖರ್ ಬಾವಿಗೆರೆ, ರಾಜ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.