ADVERTISEMENT

ರಂಗಶಂಕರದಲ್ಲಿ ಇಂದು ‘ಜನ ಶತ್ರು’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 3:05 IST
Last Updated 14 ಫೆಬ್ರುವರಿ 2021, 3:05 IST
‘ಜನಶತ್ರು’ ನಾಟಕದ ದೃಶ್ಯ
‘ಜನಶತ್ರು’ ನಾಟಕದ ದೃಶ್ಯ   

‘ಜನಶತ್ರು’ ನಾಟಕ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಹೋರಾಟವನ್ನು, ಆತನ ಅಚಲ ನಿರ್ಧಾರವನ್ನು ಚಿತ್ರಿಸುತ್ತದೆ. ಬಹುಮತದ ಕಾಲದಲ್ಲಿ ವ್ಯಕ್ತಿಯೊಬ್ಬನ ಪ್ರಾಮುಖ್ಯತೆ ಏನು ಎನ್ನುವುದನ್ನೂ ಬಿಂಬಿಸುವಂಥ ಕಥೆಯನ್ನು ಈ ನಾಟಕ ಹೊಂದಿದೆ.

ವ್ಯಕ್ತಿಯೊಬ್ಬನ ನಿರಂತರ ಹೋರಾಟದಿಂದ ಮಾತ್ರ ಬಹುಮತದ ದಬ್ಬಾಳಿಕೆಯಿಂದ ಬಿಡುಗಡೆ ಸಾಧ್ಯ. ಅಂತಹ ಹೊತ್ತಿನಲ್ಲಿ ದನಿಯೆತ್ತುವುದು, ಆ ದನಿ ಅದೆಷ್ಟೇ ಸಣ್ಣದಾಗಿರಲಿ ಪರವಾಗಿಲ್ಲ, ಅಗತ್ಯ ಎನ್ನುವುದನ್ನು ಎಸ್. ಸುರೇಂದ್ರನಾಥ ರಚನೆಯ ‘ಜನಶತ್ರು’ ನಾಟಕ ಮನಗಾಣಿಸುತ್ತದೆ.

ಈ ನಾಟಕ ಒಂದು ರೂಪಕ. ಒಂದು ಕಾಲ್ಪನಿಕ ಊರಿನಲ್ಲಿ ನಡೆಯುವಂತಹ ನಾಟಕ. ಈ ಊರು ಒಂದು ನದಿಯ ದಂಡೆಯ ಮೇಲಿದೆ. ನದಿಯ ದಂಡೆಯ ಮೇಲಿರುವ ಪರಿಣಾಮವಾಗಿ ಇದು ಒಂದು ಔದ್ಯೋಗಿಕ ಪ್ರದೇಶ ಕೂಡಾ ಹೌದು. ನದಿಯ ಆಸುಪಾಸಿನಲ್ಲೇ ಸುಮಾರು ಫ್ಯಾಕ್ಟರಿಗಳು, ಅಥವಾ ಮಿಲ್ಲುಗಳು, ತಲೆಯೆತ್ತಿ ನಿಂತಿವೆ. ಊರನ್ನೂ, ಊರಿನ ನೀರನ್ನೂ, ಊರಿನ ವಾತಾವರಣವನ್ನೂ ನಾಶ ಮಾಡುತ್ತಾ ಬಂದಿವೆ. ಈ ವಿನಾಶದ ವಿರುದ್ಧ ದನಿಯೆತ್ತಲು ಊರಿನ ಮುನಿಸಿಪಾಲಿಟಿ ಆರೋಗ್ಯ ಅಧಿಕಾರಿಯ ಅಗತ್ಯ ಬೀಳುತ್ತದೆ. ಆತ ದನಿಯೆತ್ತಲು ಪ್ರಯತ್ನಿಸುತ್ತಾನೆ. ಆದರೆ ಬಹಿರಂಗ ಸಭೆಯಲ್ಲಿ, ಬಹುಮತದ ಹೆಸರಿನಲ್ಲಿ, ಬಹುಮತದ ಅಧಿಕಾರದ ಅಡಿಯಲ್ಲಿ ಅವನನ್ನು ‘ಜನಶತ್ರು’ ಎಂದು ಘೋಷಿಸಿ ಗಡಿಪಾರು ಮಾಡಲಾಗುತ್ತದೆ. ಈ ನಾಟಕ ಕೇಳುವ ಹಲವು ಪ್ರಶ್ನೆಗಳು - ಡಾಕ್ಟರ್‌ ನಿಜವಾಗಿಯೂ ಜನಶತ್ರುವೇ? ಸತ್ಯ ಯಾರ ಬಳಿ ಇದೆ, ಬಹುಮತದ ಬಳಿಯೋ ಅಲ್ಪಮತದ ಬಳಿಯೋ? ಸತ್ಯ ಆಯುಧವಾದಾಗ ಏನಾಗುತ್ತದೆ... ಅನ್ನುವುದನ್ನು ನಾಟಕ ನೋಡಿಯೇ ಅರಿಯಬೇಕು.

ADVERTISEMENT

ಹೆನ್ರಿಕ್‌ ಇಬ್ಸೆನ್‌ ಅವರ ಆ್ಯನ್‌ ಎನಿಮಿ ಆಫ್‌ ದ ಪೀಪಲ್‌ ಆಧರಿಸಿ ‘ಜನಶತ್ರು’ ನಾಟಕ ಪ್ರದರ್ಶನ: ರಚನೆ ಮತ್ತು ನಿರ್ದೇಶನ: ಎಸ್‌ ಸುರೇಂದ್ರನಾಥ್‌, ರಂಗದ ಮೇಲೆ: ಕೀರ್ತಿಭಾನು, ಬಿ. ವಿ. ಶೃಂಗ,‌ ಗಣೇಶ್‌ ಶೆಣೈ, ರಾಘ್‌ ಅರಸ್‌. ಅನಿಲ್‌ ಬಿ. ಆಯೋಜನೆ ಮತ್ತು ಸಹಯೋಗ:ಇಬ್ಸೆನ್‌ ಅವಾರ್ಡ್ಸ್‌ (ನಾರ್ವೆ), ರಂಗ ಶಂಕರ ಮತ್ತು ಸಂಕೇತ್‌ ನಾಟಕ. ನಾಟಕದ ಅವಧಿ– 70 ನಿಮಿಷಗಳು, ಸ್ಥಳ: ರಂಗಶಂಕರ, ಜೆ.ಪಿ.ನಗರ,ಬೆಂಗಳೂರು. ಫೆ. 13ರಂದು ಮಧ್ಯಾಹ್ನ 3.30 ಮತ್ತು ಸಂಜೆ 7.30. ಟಿಕೆಟ್ ಬೆಲೆ: ₹ 150.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.