ADVERTISEMENT

ಮೀಸಲಾತಿ ಕುರಿತಂತೆ ಸರ್ಕಾರದಿಂದ‌ ಸಂವಿಧಾನಾತ್ಮಕ ಕ್ರಮ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 8:00 IST
Last Updated 24 ಫೆಬ್ರುವರಿ 2021, 8:00 IST
   

ಮಂಗಳೂರು: ಮೀಸಲಾತಿಗಾಗಿ ವಿವಿಧ ಸಮುದಾಯಗಳು ಬೇಡಿಕೆ ಇಡುತ್ತಿವೆ. ಸರ್ಕಾರ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಲಿದೆ.‌ ವೈಜ್ಞಾನಿಕ ಮತ್ತು ಸಂವಿಧಾನಾತ್ಮಕ ಕ್ರಮ ಕೈಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮೀಸಲಾತಿ‌ ಶೇ 50 ಮೀರಬಾರದು ಎಂಬುದು ಸಂವಿಧಾನದ ಆಶಯವೂ ಆಗಿದೆ. ಅದಕ್ಕೆ ಅನುಗುಣವಾಗಿ, ಶೇ 50 ಪರಿಮಿತಿಯಲ್ಲಿ‌ ಅರ್ಹ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲಾಗುವುದು ಎಂದರು.

ತಿರಸ್ಕರಿಸಿದರೂ ಬುದ್ಧಿ ಬಂದಿಲ್ಲ: ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಪುಣರು. ಕಾಂಗ್ರೆಸ್ ಗೆ ಸಮಾಜದ ಕಾಳಜಿ ಇಲ್ಲ. ಕೇವಲ ಒಲೈಕೆ ರಾಜಕಾರಣ ಮಾಡುತ್ತಿದೆ.‌ ಜನರು ತಿರಸ್ಕಾರ ಮಾಡಿದ್ದರೂ ಇನ್ನೂ ಬುದ್ಧಿ ಬಂದಿಲ್ಲ ಎಂದು‌ ಟೀಕಿಸಿದರು.

ADVERTISEMENT

ಪಿಎಫ್ ಐ, ಎಸ್ ಡಿಪಿಐನ ಬಿಟೀಮ್ ಕಾಂಗ್ರೆಸ್. ಅವರ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷವೇ ಕಾರಣ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವರ ವಿರುದ್ಧದ ಪ್ರಕರಣ ಹಿಂಪಡೆಯಲಾಗಿದೆ ಎಂದು ತಿರುಗೇಟು ನೀಡಿದರು.
ಪಿಎಫ್ಐ, ಎಸ್ ಡಿಪಿಐ ನಿಷೇಧಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕ್ರೋಡೀಕರಿಸಲಾಗುತ್ತಿದೆ. ಅವುಗಳ ಆಧಾರದಲ್ಲಿ ಈ ಸಂಘಟನೆಗಳನ್ನು ನಿ಼ಷೇಧಿಸಲಾಗುವುದು. ಈಗಾಗಲೇ ಮುಖ್ಯಮಂತ್ರಿ, ಗೃಹ ಸಚಿವರು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಹೇಳಿದ್ದಾರೆ. ಇದರಲ್ಲಿ ಯಾವುದೇ ಹಿಂಜರಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಿತ್ಯ ಪ್ರಯಾಣಿಕರಿಗೆ ತೊಂದರೆ ಬೇಡ:
ಕೇರಳದಿಂದ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯದ ಕುರಿತು ಪ್ರತಿಕ್ರಿಯಿಸಿದ ಅವರು, ನಿತ್ಯ ಬಂದು ಹೋಗುವವರಿಗೆ ತೊಂದರೆ ಆಗಬಾರದು. ಯಾರು ಇಲ್ಲಿಯೇ ಬಂದು‌ ಉಳಿದುಕೊಳ್ಳುತ್ತಾರೋ ಅಂಥವರಿಗೆ‌ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ಮಾಡಬೇಕು ಎಂದು ಡಾ.‌ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟರು.

ಆರೋಗ್ಯ ಸೇತು ಅ್ಯಪ್ ಮೂಲಕ ಟ್ರ್ಯಾಕಿಂಗ್ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಆರೋಗ್ಯ ಸಚಿವ‌ ಡಾ.ಸುಧಾಕರ ಜೊತೆಗೆ ಚರ್ಚಿಸುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.