ADVERTISEMENT

ಈ ಅಯೋಗ್ಯತನಕ್ಕೆ ಏಕೆ ಮಂತ್ರಿಗಿರಿ: ಬಿ.ಸಿ.ಪಾಟೀಲ್‌ಗೆ ಕಾಂಗ್ರೆಸ್‌ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2021, 11:06 IST
Last Updated 24 ಜೂನ್ 2021, 11:06 IST
ಕೃಷಿ ಸಚಿವ ಬಿ.ಸಿ.ಪಾಟೀಲ್‌
ಕೃಷಿ ಸಚಿವ ಬಿ.ಸಿ.ಪಾಟೀಲ್‌   

ಬೆಂಗಳೂರು: ಬಿತ್ತನೆ ಬೀಜ, ಗೊಬ್ಬರ ಸಿಗದೆ ರೈತರು ಪರದಾಡುತ್ತಿರುವ ಸಮಯದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಚಾದರ ಹೊದ್ದು ಮಲಗಿದ್ದಾರೆ. ಈ ಅಯೋಗ್ಯತನಕ್ಕೆ ಏಕೆ ಮಂತ್ರಿಗಿರಿ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಈ ವಿಚಾರವಾಗಿ ಗುರುವಾರ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, 'ಆಕ್ಸಿಜನ್, ಲಸಿಕೆಗಳ ನಂತರ ಈ ಸರ್ಕಾರದ 'ಇಲ್ಲ'ಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿರುವುದು ಗೊಬ್ಬರ, ಬಿತ್ತನೆ ಬೀಜ. ಈ ಹದವಾದ ಮುಂಗಾರಿನ ವಾತಾವರಣದಲ್ಲಿ ರೈತರು ಬೆಳೆ ಹಾಕಲು ತುರಾತುರಿಯಲ್ಲಿದ್ದರೂ ಬಿತ್ತನೆ ಬೀಜ, ಗೊಬ್ಬರ ಸಿಗದೆ ಪರದಾಡುತ್ತಿದ್ದಾರೆ, ಕೃಷಿ ಸಚಿವ ಬಿ.ಸಿ.ಪಾಟೀಲ್‌ ಚಾದರ ಹೊದ್ದು ಮಲಗಿದ್ದಾರೆ. ಈ ಅಯೋಗ್ಯತನಕ್ಕೆ ಏಕೆ ಮಂತ್ರಿಗಿರಿ' ಎಂದು ಪ್ರಶ್ನಿಸಿದೆ.

'ಬಿತ್ತನೆ ಬೀಜಗಳ ಸಮರ್ಪಕ ಪೂರೈಕೆ ಮಾಡದೆ ಸರ್ಕಾರವೇ ಕಾಳಸಂತೆಯನ್ನು ಪ್ರೋತ್ಸಾಹಿಸುತ್ತಿದೆ. ರೈತರು ಅನಿವಾರ್ಯವಾಗಿ ಬೀಜಗಳನ್ನು ದುಪ್ಪಟ್ಟು ಬೆಲೆಗೆ ಕಾಳಸಂತೆಯಲ್ಲಿ ಖರೀದಿಸಿ ಮೋಸ ಹೋಗುತ್ತಿದ್ದಾರೆ. ರೈತರ ಈ ಸಮಸ್ಯೆಗಳನ್ನು ಚಿಂತಿಸದ ಬಿಜೆಪಿ ಸರ್ಕಾರಕ್ಕೆ ಹಾಗೂ ಮಂತ್ರಿಗಳಿಗೆ ಕುರ್ಚಿ ಕದನ ಒಂದೇ ಪ್ರಾಧಾನ್ಯತೆಯಾಗಿದೆ' ಎಂದು ಕಾಂಗ್ರೆಸ್‌ ಟೀಕಿಸಿದೆ.

ADVERTISEMENT

'ರೈತರಿಗೆ ಬೆಳೆ ವಿಮೆಯಲ್ಲಿ ಮೋಸವಾಗಿದೆ. ಹಿಂದಿನ ನೆರೆ ಪರಿಹಾರ ಇಲ್ಲ. ಲಾಕ್‌ಡೌನ್‌ನಲ್ಲಿ ಬೆಳೆ ನಷ್ಟವಾಗಿದೆ. ಲಾಕ್‌ಡೌನ್ ಪರಿಹಾರವೂ ಸಿಕ್ಕಿಲ್ಲ. ಕೃಷಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಗೊಬ್ಬರದ ಪೂರೈಕೆಯಾಗಿಲ್ಲ. ಈ ಭ್ರಷ್ಟ ಬಿಜೆಪಿ, ರೈತರನ್ನು ಆತ್ಮಹತ್ಯೆಯ ಪರಿಸ್ಥಿತಿಗೆ ದೂಡಿ 'ಹೇಡಿಗಳು' ಎಂದು ದೂಷಿಸುತ್ತದೆ' ಎಂಬುದಾಗಿ ಕಾಂಗ್ರೆಸ್‌ ಪಕ್ಷವು ಹರಿಹಾಯ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.