ADVERTISEMENT

ಒಳನೋಟ: ಮಳೆ ಬಂದರೆ ದ್ವೀಪವಾಗುವ ಕರಾವಳಿ

ಬೆಂಗಳೂರು–ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತದ ಭೀತಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 2:52 IST
Last Updated 1 ಆಗಸ್ಟ್ 2021, 2:52 IST
ಶಿರಾಡಿ ಘಾಟಿಯಲ್ಲಿ ತಡೆಗೋಡೆ ಇಲ್ಲದಿರುವುದರಿಂದ ಗುಡ್ಡದ ಮಣ್ಣು ಕುಸಿದು ರಸ್ತೆಯ ಮೇಲೆ ಬೀಳುತ್ತಿದೆ.
ಶಿರಾಡಿ ಘಾಟಿಯಲ್ಲಿ ತಡೆಗೋಡೆ ಇಲ್ಲದಿರುವುದರಿಂದ ಗುಡ್ಡದ ಮಣ್ಣು ಕುಸಿದು ರಸ್ತೆಯ ಮೇಲೆ ಬೀಳುತ್ತಿದೆ.   

ಮಂಗಳೂರು: ಮಳೆಯ ಅಬ್ಬರ ಹೆಚ್ಚಾಗುತ್ತಿದ್ದಂತೆಯೇ ಕರಾವಳಿಯು ರಾಜಧಾನಿ ಬೆಂಗಳೂರಿನೊಂದಿಗೆ ಸಂಪರ್ಕ ಕಳೆದುಕೊಳ್ಳುವ ಆತಂಕ ಶುರುವಾಗುತ್ತದೆ. ವಾಣಿಜ್ಯ ಚಟುವಟಿಕೆ, ಜನರ ಓಡಾಟಕ್ಕೆ ಕಡಿವಾಣ ಬೀಳುತ್ತಿದ್ದು, ಹೆದ್ದಾರಿ ಸಂಚಾರವೇ ಸಂಕಟ ತರುತ್ತಿದೆ.

ಎರಡು ವರ್ಷಗಳ ಹಿಂದೆ ಚಾರ್ಮಾಡಿಯಲ್ಲಿ ಭೀಕರ ಭೂಕುಸಿತವಾಗಿ, ರಸ್ತೆಯು ಸಂಪೂರ್ಣ ಬಂದ್‌ ಆಗಿತ್ತು. ಅದಕ್ಕೂ ಮೊದಲು ಶಿರಾಡಿ ಘಾಟಿಯಲ್ಲಿ ಪದೇ ಪದೇ ಭೂಕುಸಿತದಿಂದ ಪ್ರಯಾಣ ಸುರಕ್ಷಿತವಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಮಡಿಕೇರಿ ಮೂಲಕ ಬೆಂಗಳೂರು ಸಂಪರ್ಕಿಸುವ ಸಂಪಾಜೆ ಘಾಟಿಯೂ ಕುಸಿತದ ಆತಂಕ ಎದುರಿಸುತ್ತಲೇ ಇದೆ.

ಚಾರ್ಮಾಡಿಯಲ್ಲಿ ತುರ್ತು ಕಾಮಗಾರಿ ನಡೆಸಲಾಗಿದ್ದು, ಬೆಳಿಗ್ಗೆ 6ರಿಂದ ಸಂಜೆ 7 ಗಂಟೆಯವರೆಗೆ ಲಘು ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಿರಾಡಿ ಘಾಟಿಯಲ್ಲೂ ಲಘು ವಾಹನಗಳ ಓಡಾಟ ಶುರುವಾಗಿದೆ. ಇದೀಗ ಸರಕು ಸಾಗಣೆ ವಾಹನಗಳ ಭಾರ ಸಂಪಾಜೆ ಘಾಟಿ ಮೇಲೆ ಬೀಳುತ್ತಿದ್ದು, ಮತ್ತಷ್ಟು ಮಳೆಯಾದರೆ ಆ ದಾರಿಯೂ ಬಂದ್‌ ಆಗುವ ಸಾಧ್ಯತೆ ಇದೆ ಎನ್ನುವುದು ವಾಹನ ಚಾಲಕರ ಅಭಿಪ್ರಾಯ.

ADVERTISEMENT

ವಾಣಿಜ್ಯ ಚಟುವಟಿಕೆ ಸ್ಥಗಿತ: ಬೆಂಗಳೂರಿನ ಕೈಗಾರಿಕೆಗಳ ಉತ್ಪನ್ನಗಳನ್ನು ಇಲ್ಲಿನ ಎನ್‌ಎಂಪಿಟಿಯ ಮೂಲಕ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಶಿರಾಡಿ ಘಾಟಿ ಮೂಲಕವೇ ಸರಕು ಸಾಗಣೆ ವಾಹನಗಳು ಸಂಚರಿಸುತ್ತಿದ್ದು, ಈ ಘಾಟಿಯಲ್ಲಿ ಸಂಚಾರ ಸ್ಥಗಿತವಾದರೆ, ಬೆಂಗಳೂರಿನ ಕೈಗಾರಿಕೆಗಳು ಸಂಕಷ್ಟ ಎದುರಿಸುವಂತಾಗುತ್ತದೆ.

ಬೆಂಗಳೂರು, ತುಮಕೂರು, ಕುಣಿಗಲ್‌, ಹಾಸನ, ಚಿಕ್ಕಮಗಳೂರು, ಕುಶಾಲನಗರ, ಮೈಸೂರು ಭಾಗದ ಉದ್ಯಮಿಗಳು ರಫ್ತು ವಹಿವಾಟಿಗೆ ಮಂಗಳೂರಿನ ಎನ್‌ಎಂಪಿಟಿಯನ್ನು ಅವಲಂಬಿಸಿದ್ದಾರೆ. ಎನ್‌ಎಂಪಿಟಿಯು ಎಲ್‌ಪಿಜಿ ಆಮದು ಮಾಡುವ ದೊಡ್ಡ ಬಂದರಾಗಿದ್ದು, ನಿತ್ಯ ಇಲ್ಲಿಂದ ರಾಜ್ಯ, ಇತರೆ ರಾಜ್ಯಗಳಿಗೆ 150ಕ್ಕೂ ಅಧಿಕ ಬುಲೆಟ್‌ ಟ್ಯಾಂಕರ್‌ಗಳು ಸಂಚರಿಸುತ್ತವೆ. ಈ ರಸ್ತೆಯಲ್ಲಿ ಸಂಚಾರ ಸ್ಥಗಿತವಾದರೆ, ವಾಣಿಜ್ಯ ಚಟುವಟಿಕೆಗಳೇ ಸ್ಥಗಿತವಾಗುತ್ತವೆ ಎನ್ನುತ್ತಾರೆ ಕೆನರಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಐಸಾಕ್‌ ವಾಸ್‌.

ಅತ್ತ ಆಗುಂಬೆ ಘಾಟಿಯಲ್ಲೂ ಅಧಿಕ ಮಳೆಯಾದರೆ ಮಣ್ಣು ಕುಸಿತ ಸಹಜ ಎನ್ನವಂತಾಗಿದೆ.

ಶಿರಾಡಿ ಘಾಟಿ ಕಾಮಗಾರಿ ಗುತ್ತಿಗೆ ಪಡೆದಿದ್ದ ಕಂಪನಿ ಆರ್ಥಿಕ ದಿವಾಳಿ ಘೋಷಿಸಿದ್ದು, ಉಪ ಗುತ್ತಿಗೆ ಪಡೆದ ಕಂಪನಿಗಳ ಆರ್ಥಿಕ ಗೊಂದಲದಿಂದ ತಡೆಗೋಡೆ ವಿಳಂಬವಾಗಿದೆ.</p>

-ಎ.ಕೆ. ಜಾನ್‌ಬಾಜ್‌, ಹೆದ್ದಾರಿ ಪ್ರಾಧಿಕಾರದ ಹಾಸನ ವಿಭಾಗದ ಯೋಜನಾ ನಿರ್ದೇಶಕ

***

ಚಾರ್ಮಾಡಿ ಘಾಟಿಯ ಕುಸಿತ ಪ್ರದೇಶದಲ್ಲಿ ಕಾಮಗಾರಿ ನಿರ್ವಹಿಸಲು ಅಂದಾಜು ಪಟ್ಟಿ ತಯಾರಿಸಿ ಪ್ರಸ್ತಾವ ಸಲ್ಲಿಸಲಾಗುವುದು. ತಾತ್ಕಾಲಿಕ ರಕ್ಷಣಾ ಕಾಮಗಾರಿ ನಡೆದಿದೆ.

-ಕೃಷ್ಣಕುಮಾರ್, ರಾಷ್ಟ್ರೀಯ ಹೆದ್ದಾರಿ ಎಇಇ

***

ಅವೈಜ್ಞಾನಿಕ ಕಾಮಗಾರಿ

ಸಕಲೇಶಪುರ: ಹಾಸನದಿಂದ ಮಾರನಹಳ್ಳಿವರೆಗೆ ಚತುಷ್ಪಥ ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದ್ದು, ಸಕಲೇಶಪುರದಿಂದ ಮಾರನಹಳ್ಳಿವರೆಗಿನ ಕಾಮಗಾರಿ 2017 ರಿಂದ ನನೆಗುದಿಗೆ ಬಿದ್ದಿದೆ. ಗುಡ್ಡಗಳನ್ನು ಕಡಿದು ರಸ್ತೆ ವಿಸ್ತರಣೆ ಮಾಡಲಾಗಿದ್ದು, ತಡೆಗೋಡೆ ನಿರ್ಮಾಣ ಮಾಡದೆ ಇರುವುದರಿಂದ 2018 ರಿಂದ ನಿರಂತರವಾಗಿ ಭೂ ಕುಸಿತ ಆಗುತ್ತಲೇ ಇದೆ. 2019ರಲ್ಲಿ ದೊಡ್ಡತಪ್ಪಲೆ ಬಳಿ ಗುಡ್ಡ ಕುಸಿದು ಮೂರು ತಿಂಗಳು ಸಂಚಾರ ಬಂದ್‌ ಆಗಿತ್ತು.

‘ಭೂ ಕುಸಿತಕ್ಕೆ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ. ತಡೆಗೋಡೆ ನಿರ್ಮಾಣ ಮಾಡದೆ, ಇಳಿಜಾರಿನಲ್ಲಿ ಗುಡ್ಡ ಕತ್ತರಿಸದೆ, 90 ಡಿಗ್ರಿ ಕತ್ತರಿಸಲಾಗಿದೆ. ಪ್ರಕೃತಿ ವಿಕೋಪಕ್ಕಿಂತಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಭೂಕುಸಿತ ಸಮಸ್ಯೆ ಎದುರಾಗಿದೆ’ ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹೇಳುತ್ತಾರೆ.

ಅಪಾಯದಲ್ಲಿ ರಾಷ್ಟ್ರೀಯ ಹೆದ್ದಾರಿ

ಮಡಿಕೇರಿ: ಮಡಿಕೇರಿ, ಸಂಪಾಜೆಯ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ 2018ರಲ್ಲಿ ಮದೆನಾಡು, ಮದೆ, ಕಾಟಕೇರಿಯ ಬಳಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿ ವಾಹನ ಸಂಚಾರ ಬಂದ್‌ ಆಗಿತ್ತು. ಭೂಕುಸಿತವಾಗಿದ್ದ ಸ್ಥಳಗಳಲ್ಲಿ ಮರಳಿನ ಚೀಲವಿಟ್ಟು ರಸ್ತೆ ಮಾಡಲಾಗಿತ್ತು. ಮತ್ತೆ ಭಾರಿ ಮಳೆ ಸುರಿದರೆ ಮರಳಿನ ಚೀಲಗಳು ಉರುಳಿ ಹೆದ್ದಾರಿ ಕುಸಿಯುವ ಆತಂಕವಿದೆ.

ಕೇಂದ್ರ ಸರ್ಕಾರದಿಂದ ₹ 58.8 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ, ಕುಸಿದ ಸ್ಥಳಗಳಲ್ಲಿ ತಡೆಗೋಡೆ ನಿರ್ಮಾಣ ಕುಂಟುತ್ತಾ ಸಾಗುತ್ತಿದೆ. ಈ ವರ್ಷದ ಮಳೆಗಾಲದಲ್ಲೂ 2ನೇ ಮೊಣ್ಣಂಗೇರಿಯಿಂದ ಮದೆನಾಡು ತನಕ ಅಲ್ಲಲ್ಲಿ ರಸ್ತೆಯಲ್ಲೇ ಜಲ ಉಕ್ಕುತ್ತಿದೆ. ಕರ್ತೋಜಿ ಬಳಿ ಬಿರುಕು ಕಾಣಿಸಿಕೊಂಡಿದೆ.

‘ಮತ್ತೆ ಬಿರುಕು ಕಾಣಿಸಿಕೊಂಡು ಹೆದ್ದಾರಿ ಅಪಾಯ ಸ್ಥಿತಿಯಲ್ಲಿದ್ದು, ಲಾರಿಗಳಲ್ಲಿ ನಿಗದಿಗಿಂತ ಹೆಚ್ಚಿನ ಸರಕು ಸಾಗಣೆ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಶಾಸಕ ಕೆ.ಜಿ.ಬೋಪಯ್ಯ ಆಗ್ರಹಿಸಿದ್ದಾರೆ.

ಪೂರಕ ಮಾಹಿತಿ: ಚಿದಂಬರ ಪ್ರಸಾದ (ಮಂಗಳೂರು), ಆದಿತ್ಯ ಕೆ.ಎ. (ಮಡಿಕೇರಿ), ಸುನಿಲ್‌ ಕೆ.ಎಸ್‌. (ಹಾಸನ) ಜಾನೇಕೆರೆ ಆರ್‌. ಪರಮೇಶ್‌ (ಸಕಲೇಶಪುರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.