ADVERTISEMENT

ಸಂಗತ: ಆಹಾ ಜಾತಿ... ಜ್ಞಾನಕೇಂದ್ರಗಳಿಗೆಷ್ಟು ಪ್ರೀತಿ!

ವಿಶ್ವವಿದ್ಯಾಲಯಗಳು ಜಾತಿ ವ್ಯವಸ್ಥೆಯ ಕರಿನೆರಳಿನಲ್ಲಿ ಸಿಲುಕಿ ನಲುಗುತ್ತಿವೆ

ರಾಜಕುಮಾರ ಕುಲಕರ್ಣಿ
Published 2 ಜುಲೈ 2021, 18:44 IST
Last Updated 2 ಜುಲೈ 2021, 18:44 IST
   

ಪರಿಚಯದ ಹುಡುಗನೊಬ್ಬ ಕೆಲವು ವರ್ಷಗಳ ಹಿಂದೆ ಪಿಎಚ್.ಡಿ ಪದವಿಗಾಗಿ ವಿಶ್ವವಿದ್ಯಾಲಯವೊಂದರಲ್ಲಿ ಹೆಸರು ನೋಂದಾಯಿಸಿದ್ದ. ಬಹು ಹಿಂದಿ ನಿಂದಲೂ ಡಾಕ್ಟರೇಟ್ ಕನಸು ಕಾಣುತ್ತಿದ್ದವನಿಗೆ ಇದು ಸಹಜವಾಗಿಯೇ ಖುಷಿ ನೀಡಿತ್ತು. ಸಮಾಜವಿಜ್ಞಾನ ವಿದ್ಯಾರ್ಥಿಯಾದ ಅವನಿಗೆ ತನ್ನ ಸಂಶೋಧನೆಯಿಂದ ಸಮಾಜಕ್ಕೊಂದು ವಿಶಿಷ್ಟ ಕೊಡುಗೆ ನೀಡುವ ಆಸೆಯಿತ್ತು. ನಂತರ ಹಲವು ತಿಂಗಳುಗಳ ಕಾಲ ನಮ್ಮಿಬ್ಬರ ನಡುವೆ ಸಂಪರ್ಕ ಇರಲಿಲ್ಲ.

ನನ್ನೂರಿಗೆ ಹೋಗುತ್ತಿದ್ದಾಗೊಮ್ಮೆ ಅನಿರೀಕ್ಷಿತವಾಗಿ ಅವನ ಭೇಟಿಯಾಯಿತು. ಮಾತಿನ ನಡುವೆ, ‘ಎಲ್ಲಿಯವರೆಗೆ ಬಂದಿದೆ ನಿನ್ನ ಸಂಶೋಧನಾ ಕಾರ್ಯ?’ ಎಂದು ಕೇಳಿದ್ದಕ್ಕೆ ಅಳುವೇ ಅವನ ಉತ್ತರವಾಗಿತ್ತು. ಮಾರ್ಗದರ್ಶಕರು ಸಹಕರಿಸುತ್ತಿಲ್ಲವಾದ್ದರಿಂದ ಸಂಶೋಧನಾ ಅಧ್ಯಯನವನ್ನು ಅರ್ಧಕ್ಕೇ ಬಿಟ್ಟುಬಿಡಲು ನಿರ್ಧರಿಸಿರುವುದಾಗಿ ಹೇಳಿದ. ಜೊತೆಗೆ ವಿಶ್ವವಿದ್ಯಾಲಯದಲ್ಲಿ ಜಾತೀಯತೆಯ ಲಾಬಿ ಬಹಳಷ್ಟಿದೆ, ಆ ವಾತಾವರಣದಲ್ಲಿ ಅಧ್ಯಯನ ಸಾಧ್ಯವಾಗುತ್ತಿಲ್ಲವೆಂದು ಅಸಹಾಯಕತೆ ತೋಡಿಕೊಂಡ. ನಿರುತ್ಸಾಹಗೊಳ್ಳದಿರೆಂದು ಧೈರ್ಯ ಹೇಳಿ ಬೀಳ್ಕೊಟ್ಟೆ.

ಜ್ಞಾನಕೇಂದ್ರಗಳಾದ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧರಿಸಿ ಗುಂಪುಗಾರಿಕೆ ವ್ಯಾಪಕವಾಗುತ್ತಿದೆ. ಸಮಾಜದಲ್ಲಿ ಜಾತಿ ವ್ಯವಸ್ಥೆ ಎಷ್ಟೊಂದು ವ್ಯವಸ್ಥಿತವಾಗಿ ವಿಭಿನ್ನ ಸ್ತರಗಳಲ್ಲಿ ಬೆಳೆಯುತ್ತಿದೆ ಎನ್ನುವುದನ್ನು ನೋಡಲು ನಾವು ಬೇರೆಲ್ಲೂ ಹೋಗಬೇಕಿಲ್ಲ. ವಿಶ್ವವಿದ್ಯಾಲಯಗಳೇ ಅಂಥದ್ದೊಂದು ಮಾಹಿತಿಯನ್ನು ಪ್ರಾಯೋಗಿಕವಾಗಿ ತೋರಿಸಿಕೊಡುತ್ತಿವೆ.

ADVERTISEMENT

ಒಂದು ನಿರ್ದಿಷ್ಟ ಜಾತಿಯ ಪ್ರಾಧ್ಯಾಪಕರಿಗೆ ಸಂಶೋಧನಾ ವಿದ್ಯಾರ್ಥಿಯು ಅದೇ ಜಾತಿಯವನೇ ಆಗಿರಬೇಕು. ಕೆಲವರಿಗೆ ಆ ಮಟ್ಟಿಗೆ ಜಾತಿ ಪ್ರೀತಿ. ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಗಣ ಹತ್ತು ಹಲವು ಜಾತಿ, ಉಪಜಾತಿಗಳಾಗಿ ವಿಂಗಡಣೆಗೊಂಡಿದೆ. ತನ್ನ ಜಾತಿಗೆ ಸೇರಿದ ವಿದ್ಯಾರ್ಥಿ ಅದೆಷ್ಟೇ ಅಯೋಗ್ಯನಾದರೂ ಸರಿ ಅಂಥವರನ್ನು ಹಿಡಿದು ತಂದು ಸಂಶೋಧನೆಗೆ ಹಚ್ಚುವ ಪ್ರಭೃತಿಗಳ ಸಂಖ್ಯೆಯೇನೂ ಕಡಿಮೆ ಇಲ್ಲ.

ಆಶ್ಚರ್ಯದ ಸಂಗತಿ ಎಂದರೆ, ಕೆಲವೊಮ್ಮೆ ಕುಲಪತಿಗಳೇ ಈ ಜಾತಿವ್ಯವಸ್ಥೆಗೆ ಕುಮ್ಮಕ್ಕು ಕೊಡುವು ದುಂಟು. ಆಗ, ಕುಲಪತಿಯ ಜಾತಿಗೆ ಸೇರಿದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇಡೀ ವಿಶ್ವವಿದ್ಯಾಲಯವನ್ನೇ ತಮ್ಮ ಹತೋಟಿಗೆ ತೆಗೆದುಕೊಂಡು ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದೂ ಇದೆ. ಹೊರಗೆ ಸಮಾಜದಲ್ಲಿ ಜಾತಿವ್ಯವಸ್ಥೆಯ ನಿರ್ಮೂಲನೆ ಕುರಿತು ಭಾಷಣ ಬಿಗಿಯುವ ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಪ್ರಕಾಂಡ ಪಂಡಿತರು, ಆಂತರ್ಯದಲ್ಲಿ ಅದನ್ನು ಅತ್ಯಂತ ಜೋಪಾನವಾಗಿ ಕಾಯ್ದುಕೊಂಡು ಬರುತ್ತಿರುವುದು, ವೈಚಾರಿಕ ಕ್ರಾಂತಿಯ ನೆಲೆಯೆಂದೇ ನಂಬಿರುವ ವಿಶ್ವವಿದ್ಯಾಲಯಕ್ಕೆ ಮಾಡುತ್ತಿರುವ ದೊಡ್ಡ ಅಪಚಾರ.

ಇಂಥ ಪರಿಸ್ಥಿತಿಯಲ್ಲಿ, ನಿರುಪಯುಕ್ತ ವಿಷಯಗಳ ಮೇಲೇ ಹೆಚ್ಚಿನ ಸಂಶೋಧನಾ ಪ್ರಬಂಧಗಳು ಪ್ರಕಟಗೊಳ್ಳುತ್ತಿವೆ. ಸಾಹಿತ್ಯ, ಸಂಗೀತ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳನ್ನು ಜಾತಿಯ ಚೌಕಟ್ಟಿಗೆ ಸೀಮಿತಗೊಳಿಸಿ ಸಂಶೋಧನೆ ಮಾಡಲಾಗುತ್ತಿದೆ.

ಈ ಜಾತಿಪ್ರೀತಿ ನಮ್ಮ ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳನ್ನು ಅದು ಹೇಗೆ ಕುರುಡರನ್ನಾಗಿಸಿದೆ ಎನ್ನುವುದಕ್ಕೆ ಒಂದು ಉದಾ ಹರಣೆ: ಕೆಲವು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಬ್ಬ ಸಂಶೋಧನಾ ವಿದ್ಯಾರ್ಥಿಯ ಪರಿಚಯವಾಯಿತು. ಕನ್ನಡ ಸಾಹಿತ್ಯದ ಮೇಲೆ ಸಂಶೋಧನೆ ಮಾಡುತ್ತಿದ್ದ ಆತ, ಒಂದು ನಿರ್ದಿಷ್ಟ ಜಾತಿಗೆ ಸೇರಿದ ಕಥೆಗಾರರ ಕುರಿತು ಸಂಶೋಧನೆ ಮಾಡುತ್ತಿರುವುದಾಗಿ ಹೇಳಿದ. ಅದರ ವಿಷಯ ವ್ಯಾಪ್ತಿ ಬಹಳ ಸೀಮಿತವಾಗಿರುವುದಾಗಿ ಅಳಲು ತೋಡಿ ಕೊಂಡ. ಹಾಗಾದರೆ ಜಾತಿ ಬದಲು ಭೌಗೋಳಿಕ ವ್ಯಾಪ್ತಿಯನ್ನು ಆಧಾರವಾಗಿ ಇಟ್ಟುಕೊಳ್ಳಬಹುದಲ್ಲ ಎಂದು ಸಲಹೆ ನೀಡಿದೆ. ಮಾರ್ಗದರ್ಶಕರಿಗೆ ತಮ್ಮ ಜಾತಿ ಕುರಿತು (ಸಂಶೋಧನಾ ವಿದ್ಯಾರ್ಥಿಯೂ ಅದೇ ಜಾತಿಗೆ ಸೇರಿದವನು) ಅತ್ಯಂತ ಅಭಿಮಾನ ಇರುವುದರಿಂದ ವಿಷಯ ಬದಲಾವಣೆಗೆ ಸಮ್ಮತಿಸುತ್ತಿಲ್ಲವೆಂದು ಹೇಳಿದನಲ್ಲದೆ, ಬೇರೆ ಜಾತಿಗೆ ಸೇರಿದ ಬರಹಗಾರರನ್ನು ಸಂಶೋಧನೆಗೆ ಪರಿಗಣಿಸುವುದಿರಲಿ ಅವರ ಪುಸ್ತಕಗಳನ್ನೂ ಓದದಂತೆ ಎಚ್ಚರಿಸಿರುವರೆಂದು ಹೇಳಿದ. ಒಟ್ಟಿನಲ್ಲಿ, ಜಾತಿ ವ್ಯವಸ್ಥೆಯ ವಿರುದ್ಧ ವೈಚಾರಿಕ ಪ್ರತಿಭಟನೆಗಿಳಿಯಬೇಕಿದ್ದ ವಿಶ್ವವಿದ್ಯಾಲಯಗಳೇ ಆ ವ್ಯವಸ್ಥೆಯನ್ನು ರಕ್ಷಿಸಿಕೊಂಡು ಬರುತ್ತಿವೆ.

ಕೆಲವು ವರ್ಷಗಳ ಹಿಂದೆ ಸಂಗೀತಗೋಷ್ಠಿಯೊಂದಕ್ಕೆ ಹೋಗಿದ್ದೆ. ಸಂಗೀತಗಾರರಲ್ಲಿ ಬಹುತೇಕರು ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳಲ್ಲಿ ಕಲಿತು ಬಂದವರಾಗಿದ್ದರು. ಎಲ್ಲರಿಗೂ ‘ವೀರೇಶ್ವರ ಪುಣ್ಯಾಶ್ರಮ’ದಲ್ಲಿ ಕಲಿತು ಬಂದ ಅಭಿಮಾನವಿತ್ತು. ಮಾತಿನ ನಡುವೆ ಅವರು ಹೇಳಿದ ವಿಷಯಗಳಲ್ಲಿ ನನ್ನನ್ನು ಅನೇಕ ದಿನ ಕಾಡಿದ ಸಂಗತಿ ಎಂದರೆ, ಆಶ್ರಮದಲ್ಲಿ ಗುರುಗಳು ಪ್ರತಿಯೊಬ್ಬ ಶಿಕ್ಷಣಾರ್ಥಿಯನ್ನೂ ಆತನ ಊರಿನ ಹೆಸರಿನಿಂದ ಕರೆಯುತ್ತಿದ್ದರಂತೆ. ವಿದ್ಯಾರ್ಥಿಯ ಮನೆತನದ ಹೆಸರನ್ನು ತಪ್ಪಿಯೂ ಬಳಸುತ್ತಿರಲಿಲ್ಲವಂತೆ. ಮನೆತನದ ಹೆಸರು ಜಾತಿಸೂಚಕವಾಗಿರುವುದರಿಂದ ಆಶ್ರಮದಲ್ಲಿ ಜಾತಿವ್ಯವಸ್ಥೆ ಯೊಂದು ಅನಾವರಣಗೊಳ್ಳುವುದು ಗುರುಗಳಿಗೆ ಇಷ್ಟವಿರಲಿಲ್ಲವಂತೆ. ಹೀಗೆ ಜಾತಿ ವ್ಯವಸ್ಥೆಯಿಂದ ದೂರವಿರುವುದರಿಂದಲೇ ಇವತ್ತಿಗೂ ವೀರೇಶ್ವರ ಪುಣ್ಯಾಶ್ರಮವು ರಾಜ್ಯದ ರಾಜಕೀಯ ಸ್ಥಿತಿಗತಿಯನ್ನು ನಿರ್ಧರಿಸುವ ಮಟ್ಟಕ್ಕೆ ಪ್ರಾಮುಖ್ಯ ಪಡೆದಿಲ್ಲ!

ಜಾತಿ ಹೆಸರಿನಿಂದ ವಿದ್ಯಾರ್ಥಿಗಳನ್ನು ಕೂಗಿ ಕರೆಯುವ ನಮ್ಮ ಪ್ರಾಧ್ಯಾಪಕರು, ವೀರೇಶ್ವರ ಪುಣ್ಯಾಶ್ರಮಕ್ಕೊಮ್ಮೆ ಭೇಟಿ ನೀಡುವುದೊಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.