ADVERTISEMENT

ಸಾಂಸ್ಕೃತಿಕ ರಂಗಕ್ಕೆ ಬೇಕು ಅವಕಾಶ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 19:45 IST
Last Updated 29 ಆಗಸ್ಟ್ 2021, 19:45 IST

ಕೋವಿಡ್- 19 ಎರಡನೇ ಅಲೆ ನಿಯಂತ್ರಣಕ್ಕೆ ಬಂದು ಜನಜೀವನ ಸಹಜಸ್ಥಿತಿಗೆ ಮರಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಶಾಲಾ ಕಾಲೇಜುಗಳು ಭಾಗಶಃ ಆರಂಭವಾಗಿವೆ. ಸಾರ್ವಜನಿಕ ಸಾರಿಗೆ, ಮೆಟ್ರೊ, ಮಾರುಕಟ್ಟೆ, ಮಾಲ್, ಸಿನಿಮಾ ಹಾಲ್‌ಗಳನ್ನು ಷರತ್ತುಬದ್ಧವಾಗಿ ತೆರೆಯಲು ಅನುಮತಿ ದೊರಕಿದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಆಡಳಿತಗಳು ತಮ್ಮ ಸ್ವಾಮ್ಯದ ರಂಗಮಂದಿರಗಳನ್ನು ಕಲಾತಂಡಗಳಿಗೆ ಇನ್ನೂ ಕೊಡುತ್ತಿಲ್ಲ. ಈ ಬಗ್ಗೆ ಕೇಳಿದರೆ, ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎನ್ನುತ್ತಾರೆ. ಆದರೆನಾಲ್ಕು ರಂಗಾಯಣಗಳು ಚಟುವಟಿಕೆ ಆರಂಭಿಸಿ, ನಾಟಕೋತ್ಸವ, ವಿಚಾರಸಂಕಿರಣ ಮುಂತಾದ ಕಾರ್ಯಕ್ರಮ ಮಾಡುತ್ತಿವೆ.

ರಂಗಶಂಕರ, ಡಾ. ಅಶ್ವಥ್ ಕಲಾಸೌಧ, ನಟನ ಮೈಸೂರು ಮುಂತಾದ ಖಾಸಗಿ ಸಂಸ್ಥೆಗಳ ರಂಗಮಂದಿರಗಳು ಕೋವಿಡ್ ನಿಯಮಗಳನ್ನು ಅನುಸರಿಸಿ ಸಾಂಸ್ಕೃತಿಕ ಚಟುವಟಿಕೆ ನಡೆಸುತ್ತಿವೆ. ಸಂಸ್ಕೃತಿ ಇಲಾಖೆ ನೀಡುವ ವಿವಿಧ ಪ್ರಶಸ್ತಿಗಳನ್ನು, ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿಯನ್ನು ರವೀಂದ್ರ ಕಲಾಕ್ಷೇತ್ರದಲ್ಲೇ ನೀಡಲಾಗಿದೆ. ಆದರೆ ರಂಗತಂಡಗಳಿಗೆ, ಸಂಗೀತ, ನೃತ್ಯ ಕಾರ್ಯಕ್ರಮಗಳಿಗೆ ನೀಡದಿರುವುದು ಕಲಾವಿದರಲ್ಲಿ ಕಸಿವಿಸಿ ಉಂಟುಮಾಡಿದೆ. ಕಲಾಕ್ಷೇತ್ರ, ನಯನ, ಕಲಾಗ್ರಾಮ ಸೇರಿದಂತೆ ಮೈಸೂರಿನ ಕಲಾಮಂದಿರ, ಕಿರು ರಂಗಮಂದಿರ ಹಾಗೂ ಜಿಲ್ಲಾ ರಂಗಮಂದಿರಗಳನ್ನು ಕಲಾವಿದರಿಗೆ ಶೀಘ್ರವಾಗಿ ದೊರಕಿಸಿಕೊಡಬೇಕು. ಇದರಿಂದ ಕೊರೊನಾ ಸಂಕಷ್ಟದಿಂದ ಹತಾಶರಾಗಿರುವ ಕಲಾವಿದರ ಮನಸ್ಸಿಗೆ ಒಂದಷ್ಟು ಸಾಂತ್ವನ, ಚೈತನ್ಯ ಸಿಗಲು ಸಾಧ್ಯ.

–ಶಶಿಧರ ಭಾರಿಘಾಟ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.