ಬಂಧನ ಮನುಷ್ಯರಿಗಷ್ಟೇ, ಪ್ರಕೃತಿಗಲ್ಲ. ಮನುಷ್ಯಲೋಕದ ತಲ್ಲಣಗಳೇನೇ ಇರಲಿ, ಪ್ರಕೃತಿಯಲ್ಲಿ ಹಸಿರು ಚಿಗುರುತ್ತದೆ, ಹೂವು ಅರಳುತ್ತದೆ, ಪರಿಸರ ಮೈಚಳಿ ಬಿಟ್ಟು ಕಿಲಕಿಲ ನಗುತ್ತದೆ. 40 ದಿನಗಳ ಮೊದಲ ಹಂತದ ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಬೆಂಗಳೂರಿನಲ್ಲಿ ಆದದ್ದೂ ಅದುವೇ.60 ಲಕ್ಷಕ್ಕೂ ಹೆಚ್ಚು ವಾಹನಗಳು ದಿನರಾತ್ರಿ ಎನ್ನದೆ ಎಡೆಬಿಡದೆ ಉಗುಳುತ್ತಿದ್ದ ವಾಹನಗಳ ಹೊಗೆ ಒಮ್ಮಿಂದೊಮ್ಮೆಲೆ ಇಲ್ಲವಾಯಿತು. ಕೈಗಾರಿಕೆಗಳ ಚಿಮಣಿಗಳೂ ಸ್ತಬ್ಧಗೊಂಡವು. ಸ್ವಚ್ಛ ಹವೆ, ಸ್ಚಚ್ಛಂದ ಹಕ್ಕಿಗಳು, ಸ್ವರ್ಗೀಯ ಸೌಂದರ್ಯ. ’ಗಾರ್ಡನ್ ಸಿಟಿ‘ಯ ಗಿಡಮರಗಳು ಸಂತೋಷದಿಂದ ತೊನೆದಾಡಿದವು. ನಡುನಡುವೆ ಸುರಿದ ಮಳೆಯೂ ನೆಲದ ಹಸಿರಿಗೆ ಉಸಿರು ನೀಡಿತು. ಬೆಂಗಳೂರಿಗೆ ಹಳೆಯ ನೆನಪುಗಳು ಮರುಕಳಿಸಿದಂತೆ ಹೊಸ ರೂಪ ಬಂತು.ಬೆಂಗಳೂರಿನ ಜೀವದುಸಿರಾದ ಕಬ್ಬನ್ ಪಾರ್ಕ್, ಲಾಲ್ಬಾಗ್ಗಳು ಮೈಮುರಿದದ್ದೇ ಛಾಯಾಗ್ರಾಹಕರಿಗೆ ರೋಮಾಂಚನ. ರಸ್ತೆ, ಫ್ಲೈಓವರ್ ಎಲ್ಲದರ ಸುತ್ತ ಹೂವಿನ ಚಿತ್ತಾರ. ಪ್ರಕೃತಿಯ ಬಣ್ಣದೋಕುಳಿ. ಸೂರ್ಯನೂ ತನ್ನ ರಥವನ್ನೇರಿ ಕಿರಣಗಳ ಸಾಲುಗಳನ್ನು ಮಿಂಚಿಸಿದ. ಇನ್ನು ಕ್ಯಾಮೆರಾ ಕಣ್ಣು ಸುಮ್ಮನಿರುವುದುಂಟೆ..? ಛಾಯಾಗ್ರಾಹಕರು ಲಾಕ್ಡೌನ್ ಅವಧಿಯಲ್ಲಿ ಕ್ಲಿಕ್ಕಿಸಿದ ವಿಭಿನ್ನ ಕಣ್ಣೋಟಗಳು ಇಲ್ಲಿವೆ. ಇವು ಲಾಕ್ಡೌನ್ ಅವಧಿಯ ಚಿತ್ರಗಳು ಮಾತ್ರವಲ್ಲ, ಲಾಕ್ ಬಿಚ್ಚಿಕೊಂಡು ಮೈನೆರೆದ ಚಿತ್ರಗಳೂ ಹೌದು.