ಪುಣೆ: ಆಹಾರದ ಪೊಟ್ಟಣ ಕೊಡಲೆಂದು ಮನೆಗೆ ಬಂದ ‘ಜೊಮೆಟೊ’ ಹುಡುಗ ವಾಪಾಸ್ ಹೋಗುವಾಗ ಮನೆಯಲ್ಲಿದ್ದ ನಾಯಿಮರಿ ಹೊತ್ತೊಯ್ದಿರುವ ಸಂಗತಿ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಂದನಾ ಶಾ ಟ್ವಿಟರ್ನಲ್ಲಿ ಈ ಘಟನೆ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಸೋಮವಾರ ಮಧ್ಯಾಹ್ನ ಮನೆಗೆ ಆಹಾರದ ಪೊಟ್ಟಣ ಕೊಟ್ಟು ಹೋಗಲೆಂದು ಬಂದ ಜೊಮೆಟೊ ಡೆಲಿವರಿ ಬಾಯ್ ವಾಪಸ್ ಹೋಗುವಾಗ ಮುದ್ದಿನ ನಾಯಿಮರಿ ‘ದೊತ್ತು’ವನ್ನೂ ಜೊತೆಗೆ ಕರೆದೊಯ್ದ ಎನ್ನುವುದು ಅವರ ಆರೋಪ.
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ನಾಪತ್ತೆಯಾಗುವ ಮೊದಲು ‘ದೊತ್ತು’ ಆಕೆಯ ಮನೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಫ್ಯಾಕ್ಟರಿ ಸಂಕೀರ್ಣದಲ್ಲಿ ಆಡಿಕೊಂಡಿದ್ದ ಸಂಗತಿ ಬೆಳಕಿಗೆ ಬಂದಿತ್ತು.
ಹಲವು ಗಂಟೆಗಳವರೆಗೆ ನಾಯಿಮರಿ ನಾಪತ್ತೆಯಾದ ನಂತರ ಬೇಸರಗೊಂಡ ದಂಪತಿ ಹುಡುಕಾಡಿದರು. ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಹತ್ತಿದರು. ಪೊಲೀಸರು ನಾಯಿಮರಿ ಹುಡುಕಿಕೊಡುವ ಭರವಸೆ ಕೊಟ್ಟರು.
ಆತಂಕಗೊಂಡ ಶಾ ಅವರ ತಮ್ಮ ಮನೆಯ ಸಮೀಪ ಇರುವ ಆಹಾರ ಸರಬರಾಜು ಮಾಡುವ ಹುಡುಗರಲ್ಲಿ ವಿಚಾರಿಸಿದ್ದಾರೆ. ಒಬ್ಬ ಹುಡುಗ ‘ದೋತ್ತು‘ವನ್ನು ಗುರುತು ಹಿಡಿದು ಇದನ್ನು ನನ್ನ ಸಹೋದ್ಯೋಗಿ ತೆಗೆದುಕೊಂಡು ಹೋಗಿದ್ದಾನೆ ಎಂದು ಮಾಹಿತಿ ನೀಡಿದ್ದಾನೆ.
ಶಾ ಅವರು ಮಾಹಿತಿ ನೀಡಿದ ಹುಡುಗನ ಜೊತೆ ದೋತ್ತುವಿನ ಫೋಟೊ ತೆಗೆದುಕೊಂಡು ಕೆಲ ಜೊಮೆಟೊ ಸಿಬ್ಬಂದಿಗಳನ್ನು ಸಂಪರ್ಕಿಸುತ್ತಾರೆ. ಆಗ ದೋತ್ತುವನ್ನು ತೆಗೆದುಕೊಂಡು ಹೋಗಿದ್ದು ತುಷಾರ್ ಎಂಬುದು ಗೊತ್ತಾಗುತ್ತದೆ.
ತುಷಾರ್ ಮೊಬೈಲ್ ನಂಬರ್ ಪಡೆದು ಅವನಿಗೆ ಫೋನ್ ಮಾಡುತ್ತಾರೆ. ದೋತ್ತುವನ್ನು ವಾಪಾಸು ನೀಡು ಕೇಳಿದಾಗ, ತುಷಾರ್ ಗಾಬರಿಗೊಂಡು ಕ್ಷಮೆಯಾಚಿಸುತ್ತಾನೆ. ಬಳಿಕ ದೋತ್ತುವನ್ನು ತಮ್ಮ ಊರಿಗೆ ಕಳುಹಿಸಿರುವುದಾಗಿ ತುಷಾರ್ ಹೇಳಿದ ಎಂದು ಶಾ ಟ್ವೀಟ್ ಮಾಡಿದ್ದಾರೆ.
ದೋತ್ತುವನ್ನು ನೀಡಿದರೆ ನಿನಗೆ ಹಣ ನೀಡುತ್ತೇವೆ ಎಂದು ಕೋರಿದರೂ ತುಷಾರ್ ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದ. ಪದೇ ಪದೇ ಫೋನ್ ಮಾಡಿದ ಬಳಿಕ ಅವನು ಮೊಬೈಲ್ ಆಫ್ ಮಾಡಿಕೊಂಡ ಎಂದು ಶಾ ಹೇಳಿದ್ದಾರೆ.
ಶಾ ಅವರು ಜೊಮೆಟೊ ಕಂಪನಿಯನ್ನು ಸಂಪರ್ಕಿಸಿ ‘ಆಕ್ಟೋಬರ್ 7 ರಂದು ನಿಮ್ಮ ಕಂಪನಿಯ ತುಷಾರ್ ಎಂಬ ಹುಡುಗ ನಮ್ಮ ಮನೆಗೆ ಆಹಾರ ನೀಡಲು ಬಂದಾಗ ನಾಯಿಮರಿಯನ್ನು ತೆಗೆದುಕೊಂಡು ಹೋಗಿದ್ದಾನೆ.ಅದನ್ನು ಮರಳಿಸುವಲ್ಲಿ ಸಹಾಯ ಮಾಡಿ ಎಂದು ಮನವಿ ಮಾಡುತ್ತಾರೆ.ನಿಮ್ಮ ವಿಳಾಸ, ಆಹಾರ ಸರಬರಾಜಿನ ಮಾಹಿತಿ ನೀಡಿದರೆ ನಾವು ನಿಮಗೆ ಸಹಾಯ ಮಾಡಬಲ್ಲೆವು ಎಂದುಜೊಮೆಟೊ ಕಂಪನಿಯ ಸಿಬ್ಬಂದಿ ಮೈಕ್ರೊಬ್ಲಾಗಿಂಗ್ನಲ್ಲಿ ಪ್ರತಿಕ್ರಿಯಿಸುತ್ತಾರೆ.
ಕೊನೆಗೆ ಶಾ ಅವರು ತಮ್ಮ ಪತಿಯೊಂದಿಗೆ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿನಾಯಿಮರಿ ಹುಡುಕಿಕೊಡುವ ಭರವಸೆ ಕೊಟ್ಟಿದ್ದಾರೆ ಎಂದುವಂದನಾ ಶಾ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.