ಕೂಡ್ಲಿಗಿ: ಒಂದುವರೆ ಎಕರೆ ತೋಟದಲ್ಲಿ ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆದು ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದಾರೆ ತಾಲ್ಲೂಕಿನ ಕಕ್ಕುಪ್ಪಿ ಗ್ರಾಮದ ರೈತ ಎಂ. ಬಸವರಾಜ.
ಕೃಷಿ ತಜ್ಞ ಸುಭಾಷ ಪಾಳೇಕರ್ ಅವರಿಂದ ಕೃಷಿ ಪದ್ಧತಿಯನ್ನೇ ಬದಲಿಸಿಕೊಂಡ ಬಸವರಾಜ, ಈಗ ಯಶಸ್ವಿ ರೈತರಾಗಿ ಹೊರ ಹೊಮ್ಮಿದ್ದಾರೆ.
ತನ್ನ ಪಾಲಿನ ಒಂದುವರೆ ಭೂಮಿಯಲ್ಲಿ ವೀಳ್ಯದೆಲೆ ತೋಟ, ವಿವಿಧ ಜಾತಿಯ ಹಣ್ಣುಗಳನ್ನು ಬೆಳೆಸಿದ್ದಾರೆ. ಅವರೇ ಖುದ್ದಾಗಿ ತಯಾರಿಸಿದ ಸಾವಯವ ಗೊಬ್ಬರವನ್ನು ಹೊಲಕ್ಕೆ ಹಾಕಿ, ಔಷಧ ಸಿಂಪರಣೆ ಮಾಡಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ.
ಹಸುಗಳನ್ನು ಸಾಕಿ ಹೈನುಗಾರಿಕೆ ಮಾಡುತ್ತಿದ್ದಾರೆ. ಐದು ಹಸುಗಳನ್ನು ಸಾಕಿರುವ ಇವರು, ನಿತ್ಯ 60 ಲೀಟರ್ ಹಾಲು ಕರಿಯುತ್ತಾರೆ. ಹಸುಗಳ ಪಾಲನೆ ಪೋಷಣೆ ಅತ್ಯುತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ. ಹೈಡ್ರೊ ಸಿಸ್ಟಮ್ನಲ್ಲಿ ಮೆಕ್ಕೆಜೋಳದ ಹುಲ್ಲು ಬೆಳೆದು, ಹಸುಗಳಿಗೆ ಪೂರೈಸುತ್ತಿದ್ದಾರೆ. ಹೀಗಾಗಿ ಅವುಗಳು ಆರೋಗ್ಯಯುತವಾಗಿ ಇರುವುದರ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಕೊಡುತ್ತಿವೆ.
ಹಸುಗಳ ಸಗಣಿಯಿಂದ ಗೋಬರ್ ಗ್ಯಾಸ್ ಉತ್ಪಾದಿಸಿ, ಅದರಿಂದಲೇ ಅಡುಗೆ ಸೇರಿದಂತೆ ಇತರೆ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಹತ್ತು ವರ್ಷಗಳಿಂದ ಒಮ್ಮೆಯೂ ಅವರ ಮನೆಯಲ್ಲಿ ಎಲ್.ಪಿ.ಜಿ. ಗ್ಯಾಸ್ ಬಳಸಿಲ್ಲ. ಗೋಬರ್ ಗ್ಯಾಸ್ನಿಂದ ಎರೆಹುಳು ಸಾವಯವ ಗೊಬ್ಬರ ತಯಾರಿಸಿ, ಹೊಲಕ್ಕೆ ಹಾಕುತ್ತಿದ್ದಾರೆ. ಸಾವಯವದಲ್ಲಿ ಸಿರಿಧಾನ್ಯಗಳನ್ನು ಬೆಳೆಸುತ್ತಿದ್ದಾರೆ. ಅದನ್ನು ಅವರೇ ಸಂಸ್ಕರಣೆ ಮಾಡಿ, ಮಾರುಕಟ್ಟೆಗೆ ಪೂರೈಸುತ್ತಿದ್ದಾರೆ. ಇದರಿಂದ ವಾರ್ಷಿಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಬಸವರಾಜ ಅವರ ಎಲ್ಲ ಕೃಷಿ ಹಾಗೂ ಹೈನುಗಾರಿಕೆ ಕೆಲಸದಲ್ಲಿ ಅವರ ಪತ್ನಿ ಶಾಂತಮ್ಮ ಸಾಥ್ ನೀಡುತ್ತಿದ್ದಾರೆ. ಅವರ ಒಂದುವರೆ ಎಕರೆ ಜಮೀನಿನಲ್ಲಿ ಮಾಡಿರುವ ಸಾಧನೆ ನೋಡಲು ನೆರೆ ಗ್ರಾಮದವರು ಭೇಟಿ ಕೊಡುತ್ತಾರೆ. ರೈತರ ಸಂಘಟನೆ, ಅವರ ಹಕ್ಕುಗಳ ಪ್ರಶ್ನೆ ಬಂದಾಗ ಹಿಂದು ಮುಂದು ನೋಡದೇ ಹೋರಾಟದಲ್ಲಿ ಭಾಗವಹಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.