ADVERTISEMENT

ಅನಂತೈಶ್ವರ್ಯದ ಪದ್ಮನಾಭ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಮಿನುಗು ಮಿಂಚು

ಪದ್ಮನಾಭಸ್ವಾಮಿ ದೇವಸ್ಥಾನ ಎಲ್ಲಿದೆ?
ಕೇರಳದ ತಿರುವನಂತಪುರದ ಪೂರ್ವ ಬಂದರಿನಲ್ಲಿ ಈ ದೇವಾಲಯವಿದೆ. ಇದು 108 `ದಿವ್ಯ ದೇಶಮ್~ (ವಿಷ್ಣುವಿನ ಪವಿತ್ರ ವಾಸ ಸ್ಥಾನ)ಗಳಲ್ಲಿ ಒಂದು.

ದೇವಾಲಯವನ್ನು ಯಾರು ನಿರ್ವಹಣೆ ಮಾಡುತ್ತಾರೆ?
ಎಂಟನೇ ಶತಮಾನಕ್ಕೆ ಸೇರಿದ ಈ ದೇವಾಲಯ ಅತ್ಯಂತ ಪುರಾತನವಾದ ತಿರುವಾಂಕೂರು ರಾಜಮನೆತನದ ನಿರ್ವಹಣೆಯಲ್ಲಿದೆ. ಈ ಮನೆತನದ ಸಂಸ್ಥಾಪಕ ರಾಜ ಮಾರ್ತಾಂಡ ವರ್ಮಾ, ತನ್ನ ಸಾಮ್ರಾಜ್ಯವನ್ನು 1750ರಲ್ಲಿ ಪದ್ಮನಾಭಸ್ವಾಮಿ ದೇವರಿಗೆ ಅರ್ಪಿಸಿದ. ಪದ್ಮನಾಭ ದಾಸ ಎಂದು ಬಿರುದಾಂಕಿತನಾದ ಈ ರಾಜ ದೇವರ ಸೇವಕನಾಗಿ ಸಾಮ್ರಾಜ್ಯ ಆಳಿದ. 1949ರಲ್ಲಿ ತಿರುವಾಂಕೂರು ಭಾರತದೊಂದಿಗೆ ವಿಲೀನವಾದಾಗ ರಾಜಮನೆತನ ದೇಗುಲದ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಂಡಿತು.

ADVERTISEMENT

ಇಲ್ಲಿನ ವಾಸ್ತುಶಿಲ್ಪದ ವೈಶಿಷ್ಟ್ಯವೇನು?
ತಿರುವನಂತಪುರದಲ್ಲಿ ಚೇರ ರಾಜಮನೆತನ ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು. ಬಳಿಕ ಆಡಳಿತಗಾರರು ದೇವಾಲಯದ ರಚನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರು. ಇದು ಕೇರಳ ಮತ್ತು ದ್ರಾವಿಡ ಮಿಶ್ರಣ ಶೈಲಿಯ ಮನಮೋಹಕ ದೇವಾಲಯವಾಗಿದೆ.

ಇಲ್ಲಿನ ಪ್ರಧಾನ ದೇವರು ಯಾರು?
ಈ ದೇವಾಲಯದಲ್ಲಿ ವಿಷ್ಣುವನ್ನು ಆರಾಧಿಸಲಾಗುತ್ತದೆ. ಐದು ಹೆಡೆಯ ಹಾವಿನ ಮೇಲೆ ವಿಷ್ಣು ಮಲಗಿರುವ ಅಪರೂಪದ ಭಂಗಿಯ ಮೂರ್ತಿಯಿದು. `ಅನಂತಶಯನ~ ಎಂದು ಕರೆಯಲಾಗುವ ಈ ಭಂಗಿಯಿಂದಲೇ ಈ ನಗರಕ್ಕೆ ತಿರುವನಂತಪುರ ಎಂಬ ಹೆಸರು ಬಂದಿದೆ. ಈ ಮೂರ್ತಿಯ ಒಳಭಾಗಗಳು 12,008 ಸಾಲಗ್ರಾಮದ ಸಾಲುಗಳಿಂದ ಅಲಂಕೃತವಾಗಿದೆ. ಇವುಗಳನ್ನು ನೇಪಾಳದ ಗಂಡಕಾಯಿ ನದಿಯಿಂದ ವಿಶೇಷವಾಗಿ ತರಿಸಿದ್ದು ಎನ್ನಲಾಗಿದೆ.

ಜೂನ್ 2011ರಲ್ಲಿ ಈ ದೇವಸ್ಥಾನದಲ್ಲಿ ಪತ್ತೆಯಾದ ಸಂಪತ್ತು ಎಷ್ಟು?
ದೇಗುಲದ ನೆಲಮಾಳಿಗೆಯ ಕೋಣೆಗಳಲ್ಲಿರುವ ಸಂಪತ್ತನ್ನು ಲೆಕ್ಕಹಾಕುವಂತೆ ಸುಪ್ರೀಂಕೋರ್ಟ್ ಆದೇಶಿಸಿತು. ಹೀಗೆ ತೆರೆದ ಕೋಣೆಗಳಿಂದ ಲೆಕ್ಕಹಾಕಿದ ಸಂಪತ್ತಿನ ಮೌಲ್ಯ 1,00,000 ಕೋಟಿ ರೂ. ಪತ್ತೆಯಾದ ಸಂಪತ್ತಿನಲ್ಲಿ 18ನೇ ಶತಮಾನದ ನೆಪೋಲಿಯನ್ ಕಾಲದ ನಾಣ್ಯಗಳು, ಸಾವಿರಕ್ಕೂ ಅಧಿಕ ಅತ್ಯಮೂಲ್ಯ ಹರಳು ಮತ್ತು ಆಭರಣಗಳಿಂದ ತಯಾರಿಸಿದ ಪದ್ಮನಾಭಸ್ವಾಮಿಯ ಚಿನ್ನದ ವಿಗ್ರಹವೂ ಸೇರಿತ್ತು. ದೇವಾಲಯದ ಕೆಲವು ಕೋಣೆಗಳ ಬಾಗಿಲನ್ನು ಸುಮಾರು 140 ವರ್ಷದಿಂದಲೂ ತೆರೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.