
ಚಿತ್ರ: ಗುರು ನಾವಳ್ಳಿ
ಇಂಥ ಅನುಭವ ನಮ್ಮೆಲ್ಲರಿಗೂ ಆಗಿಯೇ ಇರುತ್ತದೆ. ಪ್ರತಿಯೊಬ್ಬರಿಗೂ ಜೀವನದ ಯಾವುದೋ ಒಂದು ಹಂತದಲ್ಲಿ ‘ನಿಂತು ಹೋಗಿಬಿಟ್ಟಿದ್ದೇವೇನೋ, ಸಂಪೂರ್ಣ ಸೋತು ಹೋಗಿದ್ದೇವೆ’ ಎಂದೆಲ್ಲ ಕಾಡಲಾರಂಭಿಸಿರುತ್ತದೆ. ಆದರೆ, ನಿಜವಾಗಿ ನೋಡಿದರೆ, ಅದು ಹಾಗಲ್ಲ. ನಮ್ಮ ಜೀವನ ನಿಂತೂ ಹೋಗಿರುವುದಿಲ್ಲ, ಸೋತೂ ಇರುವುದಿಲ್ಲ. ಅಸಲಿಗೆ ಜೀವನದಲ್ಲಿ ಸೋಲು ಎಂಬುದೇ ಇಲ್ಲ. ಪ್ರತಿ ಸೋಲೂ ಮುಂದಿನ ದಿಟ್ಟ ಹೆಜ್ಜೆ ಎತ್ತಿ ಇಡಲು ಅಗತ್ಯ ಸಿದ್ಧತೆಗೆ ಸಿಕ್ಕ ಸವುಡು ಅಷ್ಟೇ. ಹಾಗೆ ನಾವು ನಿಲ್ಲುವ ಕ್ಷಣವೇ ಮುಂದಿನ ಹೆಜ್ಜೆಗೆ ಬೇಕಾದ ದೃಢತೆ, ಶಕ್ತಿಯನ್ನು ಕಲೆಹಾಕುವ ಸಮಯ.
ಪ್ರತಿ ಬೆಳಗಿನ್ನು ಜೀವನವನ್ನು ಹೊಸತಾಗಿ ಆರಂಭಿಸುವ ಅವಕಾಶ ನೀಡುವ ಕ್ಷಣ. ಬದುಕಿನ ಮಗ್ಗಲು ಬದಲಿಸಿ ಪುನಃ ಪ್ರಾರಂಭಿಸುವ ಶಕ್ತಿ ನಮ್ಮೊಳಗೇ ಇದೆ. ಇಂದು ಆ ಶಕ್ತಿಯನ್ನು ನೆನಪಿಸುವ ದಿನ. ಇಂದು ನಮ್ಮ ಕನಸುಗಳಿಗೆ ಹೊಸ ಶಬ್ದ ಕೊಡುವ ದಿನ. ಇಂದು ನಮ್ಮ ನಂಬಿಕೆಗೆ ರೆಕ್ಕೆಗಳನ್ನು ಕಟ್ಟುವ ದಿನ.
ಹೌದು, ಇವತ್ತು (ಜನವರಿ 2) ಕ್ಯಾಲೆಂಡರ್ನ ಪ್ರಕಾರ ಸ್ಫೂರ್ತಿ ಅಥವಾ ಪ್ರೇರಣಾ ದಿನ. ಈ ದಿನವು ನಮ್ಮೊಳಗಿನ ಸಾಮರ್ಥ್ಯ, ಕನಸು, ಮೌಲ್ಯ, ಶಕ್ತಿ ಇವೆಲ್ಲವನ್ನೂ ಒಗ್ಗೂಡಿಕೊಳ್ಳುವ ಅವಕಾಶ.
ಹಾಗೆಂದು ನಮ್ಮೊಳಗೆ ಹುರುಪು ತುಂಬಲು, ಬೆನ್ನು ತಟ್ಟಿ ಪ್ರೋತ್ಸಾಹಿಸಲು ಈ ಸಮಾಜದಲ್ಲಿ ಬೇರಾವುದೋ ಮಂದಿ ಕಾದು ಕುಳಿತಿರುವುದಿಲ್ಲ ಅಥವಾ ಯಾರಿಗೂ ಅಷ್ಟೆಲ್ಲ ಸವುಡೂ ಇಲ್ಲ ಹಾಗೂ ಬೇಕಿದ್ದರೆ ಪರ್ಸನಾಲಿಟಿ ಡೆವಲಪ್ಮೆಂಟ್ ಕೋರ್ಸ್ಗಳ ಹೆಸರಿನ ಬ್ಯಸಿನೆಸ್ ಸೆಂಟರ್ಗಳಿವೆ. ಇಲ್ಲವೇ ಕೌನ್ಸೆಲಿಂಗ್ ಸೆಂಟರ್ಗಳಲ್ಲಿನ ಆಪ್ತ ಸಮಾಲೋಚಕರೂ ಸಿಗುತ್ತಾರೆ. ಆದರೆ ನೆನಪಿಡಿ, ನಿಮಗೆ ನಿಮಗಿಂತ ಒಳ್ಳೆಯ ಆಪ್ತ ಸಮಾಲೋಚಕರು ಮತ್ತೊಬ್ಬರಿಲ್ಲ. ನಿಮಗೆ ನೀವೇ ಗುರು, ನಿಮ್ಮದೇ ಗುರಿ.
ಜೀವನದ ಯಾವುದೇ ಸವಾಲುಗಳಿರಲಿ, ನಿಮ್ಮಲ್ಲಿ ‘ಬೆಳೆಯುವ ಹಂಬಲ’ ಇದ್ದರೆ, ನಿಮ್ಮ ದಾರಿಗೆ ನೀವೇ ಬೆಳಕು ಬೀರಿಕೊಳ್ಳುತ್ತ ಸಾಗುವುದು ಅನಿವಾರ್ಯ. ಜತೆಗೆ ಒಂದಷ್ಟು ಸ್ಫೂರ್ತಿ ಹೊರಗಿನಿಂದ ಬರಬಹುದು. ಆದರೆ ನಿಜವಾದ ಶಕ್ತಿ ನಿಮ್ಮೊಳಗೇ ಇದೆ. ಅದನ್ನು ಗುರುತಿಸಿಕೊಳ್ಳಲು ಒಂದಷ್ಟು ಟಿಪ್ಸ್ ಇಲ್ಲಿವೆ; ನಿಮಗಾಗಿ.
1. ದಿನಕ್ಕೊಂದು ಸಣ್ಣ ಗುರಿ ಇರಲಿ
ಸಣ್ಣ ಗುರಿಗಳ ಸಾಧನೆ ದೊಡ್ಡ ಆತ್ಮವಿಶ್ವಾಸಕ್ಕೆ ಕಾರಣ. ‘ಇಂದು ನಾನು ಏನು ಮಾಡಬೇಕು?‘ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಬೆಳಗೆದ್ದ ತಕ್ಷಣ ಕಂಡುಕೊಳ್ಳಿ.
2. ನಿಮ್ಮ ಸಾಧನೆಗಳನ್ನು ನೀವೇ ಗುರುತಿಸಿ
ಎಷ್ಟು ಚಿಕ್ಕದಾಗಿದ್ದರೂ, ಸಾಧನೆಯನ್ನೇ ಸಂಭ್ರಮಿಸಿ. ಅದು ನಿಮ್ಮ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ; ಪುನರುಜ್ಜೀವನಗೊಳಿಸುತ್ತದೆ.
3. ನೆಗೆಟಿವಿಟಿಯನ್ನು ಫಿಲ್ಟರ್ ಮಾಡಿ
ಎಲ್ಲರ ಮಾತು ಕೇಳಬೇಕೆಂದಿಲ್ಲ. ನಿಮಗೆ ಶಕ್ತಿ ಕೊಡುವವರನ್ನು ಮಾತ್ರ ಹತ್ತಿರ ಇಟ್ಟುಕೊಳ್ಳಿ. ಅವರ ಮಾತಿಗೆ ಕಿವಿಯಾಗಿ. ಸದಾ ಒಳ್ಳೆಯ ಸಂಗತಿಗಳೇ ನಿಮ್ಮನ್ನು ತಲುಪಲಿ.
4. ಹೊಸ ವಿಚಾರಗಳನ್ನು ಪ್ರಯೋಗಿಸಿ
ಕ್ರಿಯಾಶೀಲ ಯೋಚನೆ ಹೊಸ ಅನುಭವಗಳಿಂದ ಮಾತ್ರವೇ ಬರುತ್ತದೆ. ಪುಸ್ತಕ ಓದಿ, ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಪ್ರತಿಯೊಂದರ ಬಗ್ಗೆ ‘ಇದು ಹೀಗೇಕೆ‘ ಎಂದು ಪ್ರಶ್ನಿಸುವುದನ್ನು ರೂಢಿಸಿಕೊಳ್ಳಿ.
5. ನಿಮಗೆ ನೀವೇ ಮುಖ್ಯ, ಹುಷಾರಾಗಿರಿ!
ಸದೃಢ ಶರೀರ ಮತ್ತು ಶಾಂತ ಹಾಗೂ ಸ್ವಚ್ಛ ಮನಸ್ಸುಗಳು ಯಾವುದೇ ಸಾಧನೆಗೂ ಅತಿ ಮುಖ್ಯ. ದೇಹ–ಮನಸುಗಳು ಒಟ್ಟಿಗೆ ಕೆಲಸ ಮಾಡಿದರೆ ಮಾತ್ರ ಸಂಪೂರ್ಣ ಶಕ್ತಿ ಬರುತ್ತದೆ. ಸೂಕ್ತ ಸಮಯದಲ್ಲಿ ಆಹಾರ, ನಿದ್ರೆ, ವ್ಯಾಯಾಮ – ಇವುಗಳನ್ನು ಗೌರವಿಸಿ, ಪಾಲಿಸಿ.
6. ನಿಮಗೆ ನೀವೇ ಸಾಟಿ; ಹೋಲಿಕೆ ಇನ್ನೊಬ್ಬರಿಗೆ ಅಲ್ಲ
Comparison is a thief of joy. ನೀವು ನಿನ್ನೆ ಇದ್ದುದಕ್ಕಿಂತ ಎಲ್ಲದರಲ್ಲೂ ತುಸು ಚೆನ್ನಾಗಿ ಆಗಿದ್ದರೆ, ನೀವು ಯಶಸ್ಸಿನತ್ತ ಸಾಗುತ್ತಿದ್ದೀರೆಂದೇ ಅರ್ಥ. ನಿಮ್ಮ ಸಾಧನೆಯ ಮಾನದಂಡ ನೀವು ಮಾತ್ರ; ಬೇರೆಯವರಲ್ಲ.
7. ಧೈರ್ಯಂ ಸರ್ವ ಸಾಧನಂ; ಜಸ್ಟ್ ಮುನ್ನುಗ್ಗಿ
ಪರೀಕ್ಷೆಗಳು ಬಂದಾಗ ಹಿಂದೆಗೆಯದೇ ಅಲ್ಲೇ ನಿಂತು ಯೋಚಿಸುವವನು ಜ್ಞಾನಿ ಎನಿಸಿಕೊಳ್ಳುತ್ತಾನೆ. ಸವಾಲು ಬಂದರೆ ಹೆದರಬೇಡಿ. ಸವಾಲೇ ನಿಮ್ಮ ಶಕ್ತಿ ಪರೀಕ್ಷಿಸಲು ಬಂದ ಶಿಕ್ಷಕ. ನುಗ್ಗುತ್ತಿರಿ; ಏನಾದರಾಗಲಿ.
ಜೀವನ ಎಂಬುದು ಒಂದೇ ಸಲ ಸಿಕ್ಕರೂ, ಅವಕಾಶಗಳು ಸಾಲುಗಟ್ಟಿ ಬರುತ್ತವೆ. ಅವನ್ನು ಗುರುತಿಸುವುದು ನಮ್ಮದೇ ಹೊಣೆ. ಪ್ರೇರಣೆ ಎಂಬುದು ಕ್ಷಣ ಕ್ಷಣದ ಉಸಿರಾಟದಂತೆ. ಪ್ರತಿ ಉಸಿರಿಗೂ ನಮ್ಮನ್ನು ನಾವು ಪ್ರೇರೇಪಿಸಿಕೊಳ್ಳೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.