ಕೇಸೆವೆ
ಕೇಸೆವೆ (ನಾ). ಕೆಂಪು ಬಣ್ಣದ ಎಮೆ, -ರೆಪ್ಪೆ.
ಮೇಘನಾದನು ರಾತ್ರಿಯುದ್ಧದಲ್ಲಿ ವಿಷದ ಹಾವಿನ ಪ್ರವಾಹದ ಬಾಣ ಹೂಡಿದನು. ರಾಮಸೇನೆಯ ವೀರ ಸೈನಿಕರ ಚೈತನ್ಯ ಉಡುಗಿ ಹೋಗಿ ಅವರು ನೆಲಕ್ಕೆ ಉರುಳಿದರು. ರಾಮಚಂದ್ರನು ಮೂರ್ಛಿತನಾದನು. ಆಗ ಗರುಡ ತನ್ನ ರೆಕ್ಕೆಗಳಿಂದ ಬೀಸುತ್ತಿದ್ದ ಗಾಳಿಗೆ ನಾಗನ ಬಾಣದ ವಿಷಸರ್ಪಗಳು ಅಲ್ಲಿರದೆ ಹರಿದೋಡಿದವು. ಇಕ್ಷ್ವಾಕು ಕುಲದೀಪನ ಕಣ್ಣುಗಳು ಅರಳಿದವು. ಅಷ್ಟು ಹೊತ್ತಿಗೆ ಬೆಳಗಾದ ಚಿತ್ರಣವನ್ನು ಕುವೆಂಪು ನೀಡುವಾಗ ‘ಕೇಸೆವೆ’ ಪದ ರೂಪಿಸಿ ಹೀಗೆ ಬಣ್ಣಿಸಿದ್ದಾರೆ.
‘ಉಷೆಯ ಕಣ್
ಕೇಸೆವೆದೆರೆದುದಾಶೆಯಂದದಿ ಇಂದ್ರನಾಶೆಯಲಿ.’
ಶಂಕೆವೆಂಕೆ
ಶಂಕೆವೆಂಕೆ (ನಾ). ಸಂಶಯದ ಬೆಂಕಿ
ಸೇನಾನಿ ಮಹಾಪಾರ್ಶ್ವನು ಇಡೀ ರಾತ್ರಿ ವೈರಿಗಳ ಧಾಳಿಯಿಂದ ಲಂಕೆಯನ್ನು ರಕ್ಷಿಸುವನು. ಸೂರ್ಯೋದಯವಾಗಲು ರಾಕ್ಷಸಸೇನೆ ಜಯಘೋಷಿಸುತ್ತ ಲಂಕೆಗೆ ಮರಳುವುದು. ಆದರೆ ವಿಜಯ ಕಾರಣನಾದ ಮಹಾಪಾರ್ಶ್ವನು ಎಲ್ಲೂ ಕಾಣುವುದಿಲ್ಲ. ಅವನ ಬಗ್ಗೆ ರಾವಣನು ಚಿಂತಿಸುತ್ತ ‘ಶಂಕೆವೆಂಕೆ’ಯಲ್ಲಿ ಬೇಯುವನು ಎಂದು ಕುವೆಂಪು ಹೀಗೆ ವರ್ಣಿಸಿದ್ದಾರೆ:
‘ಮೇಣೆನಗೆ ಪೇಸುತ್ತೆ,
ದೇಶಚ್ಯುತಿಯ ಬಹುಕ್ಲೇಶಕ್ಕೆ ತರಿಸಂದು,
ತೊರೆದನೋ ತಾಯ್ಭೂಮಿಯಂ? ಶಂಕೆವೆಂಕೆಯಲಿ
ಬೇಯುತಿರಲಂತು ಲಂಕೇಶ್ವರಂ.’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.