ನೋವ್ಗರ
ನೋವ್ಗರ (ನಾ). ನೋವಿನ ವಿಷ
ಇಂದ್ರಜಿತು ಮರಣ ಹೊಂದಲು ಪತ್ನಿ ತಾರಾಕ್ಷಿ ಅಗ್ನಿ ಪ್ರವೇಶ ಮಾಡಲು ನಿಶ್ಚಯಿಸುವಳು. ಅದನ್ನು ಕೇಳಿ ಅಲ್ಲಿಗೆ ಬಂದ ರಾವಣನನ್ನು ಕುರಿತು ಅನಲೆ ಹೇಳುವ ಮಾತಿನ ಸಂದರ್ಭದಲ್ಲಿ ಕುವೆಂಪು ‘ನೋವ್ಗರ’ ಪದವನ್ನು ಹೀಗೆ ಪ್ರಯೋಗಿಸಿದ್ದಾರೆ.
‘ಸಖೀ,
ಮಾವನದೊ! ಸುತನ ಸಾವಿನ ಸಿಡಿಲ್ ಬಡಿದುಸಿರ್
ಕಟ್ಟಿದೋಲುಸಿಕನಿರ್ಪನ್, ನಿನ್ನ ನೋವ್ಗರಂ
ತನಗೆರಗಿದಂತೆ!’
ಗೆಲ್ವೆಣ್ಣು
ಗೆಲ್ವೆಣ್ಣು (ನಾ). ಜಯವನಿತೆ
ಯುದ್ಧರಂಗದಲ್ಲಿ ಸ್ನೇಹಿತರಾದ ವಹ್ನಿ ಮತ್ತು ರಂಹರು ಪರಸ್ಪರ ಮಾತನಾಡುತ್ತಿರುತ್ತಾರೆ. ‘ಇಂದು ಏಕೆ ನಮ್ಮವರ ಕೈ ಸೋಲುತ್ತಿದೆ?’ ಎಂಬ ವಹ್ನಿಯ ಪ್ರಶ್ನೆಗೆ ರಂಹ ನೀಡುವ ಉತ್ತರದಲ್ಲಿ ಕುವೆಂಪು ‘ಗೆಲ್ವೆಣ್ಣು’ ಪದರೂಪಿಸಿ ಹೀಗೆ ಪ್ರಯೋಗಿಸಿದ್ದಾರೆ:
‘ಸೋಲೊಮ್ಮೆ ಗೆಲುವೊಮ್ಮೆ, ಗೆಲ್ವೆಣ್ಣಿಗದೆ ಹೆಮ್ಮೆ!’
ಗೂಬೆಗತ್ತಲು
ಗೂಬೆಗತ್ತಲು (ನಾ). ಗೂಬೆಗಳಿಗೆ ಹಿತವಾಗಿರುವ ಕತ್ತಲು; ಕಗ್ಗತ್ತಲು
ರಾವಣನು ನಡುರಾತ್ರಿ ಮಹಾದುರ್ಗೆಯ ಧ್ಯಾನದಲ್ಲಿದ್ದಾಗ ಮನೋಮಯ ಸಮಾಧಿಗೆ ಒಳಗಾಗುವನು. ಆ ಕನಸಿನಲ್ಲಿ ಧಾನ್ಯಮಾಲಿಯನ್ನು ಕಂಡು ಪ್ರಶ್ನಿಸುವ ನುಡಿಯಲ್ಲಿ ಕುವೆಂಪು ಅವರು ‘ಗೂಬೆಗತ್ತಲು’ ಪದರಚಿಸಿ ಹೀಗೆ ಪ್ರಯೋಗಿಸಿದ್ದಾರೆ.
‘ಅದಾರಲ್ಲಿ?
ಧಾನ್ಯಮಾಲಿನಿ! ಅದೇಕಿಲ್ಲಿ ನೀನೀ ಪಾಳು
ದೇಗುಲದಿ? ಏನ್ಗೆಯ್ವೆಯೀ ಗೂಬೆಗತ್ತಲೊಳ್
ನೀನೋರ್ವಳೆಯೆ, ಪ್ರಿಯೆ?’
ಈ ಅಂಕಣ ಇಲ್ಲಿಗೆ ಮುಗಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.