ADVERTISEMENT

ಕೊರೊನಾ ಕಾಲದಲ್ಲಿ ಪೊಲೀಸರ ಕವನ

ಪೊಲೀಸ್‌ ಅಧಿಕಾರಿಯ ವಿಭಿನ್ನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 5:38 IST
Last Updated 16 ಜೂನ್ 2020, 5:38 IST
ಕವನ ಸಂಕಲನದ ಮುಖಪುಟ
ಕವನ ಸಂಕಲನದ ಮುಖಪುಟ   

ಟ್ರಾಫಿಕ್ ಇನ್ಸ್‌ಪೆಕ್ಟರ್‌ರೊಬ್ಬರು ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಬೆಂಗಳೂರು ರಸ್ತೆ ಮತ್ತು ಟ್ರಾಫಿಕ್‌ನಲ್ಲಿ ಕಂಡುಬಂದ ದೃಶ್ಯ ಹಾಗೂ‌ ಅನುಭವಗಳಿಗೆ ಕವಿತೆಗಳ ರೂಪ ನೀಡಿದ್ದಾರೆ.

ಶಿವಾಜಿನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಡಾ. ಅನಿಲ್‌ಕುಮಾರ್‌ ಪಿ.ಗ್ರಾಮ ಪುರೋಹಿತ್ಅವರುಲಾಕ್‌ಡೌನ್ ಸಂದರ್ಭದಲ್ಲಿ ವೃತ್ತಿ ಜೀವನ ಹಾಗೂ ದೈನಂದಿನ ಕರ್ತವ್ಯದಲ್ಲಿ ಎದುರಿಸಿದ ಸನ್ನಿವೇಶ ಗಳನ್ನು ಇಟ್ಟುಕೊಂಡು ಕವನಗಳನ್ನು ರಚಿಸಿದ್ದಾರೆ.

ಆ ಎಲ್ಲ ಕವನಗಳನ್ನು ಸೇರಿಸಿ‘ಕೋವಿಡ್‌–19 ಕರಾಳ ನೆರಳಿನ ದಿನಗಳಲ್ಲಿ ...’ ಎಂಬ ಶೀರ್ಷಿಕೆಯಡಿ ಕವನ ಸಂಕಲವನ್ನೇ ಹೊರತಂದಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಜೀವದ ಹಂಗು ತೊರೆದು ಕೊರೊನಾ ಸೋಂಕು ವಿರುದ್ಧ ಹೋರಾಡಿದ ಕೊರೊನಾ ವಾರಿಯರ್ಸ್‌ಗೆ ಈ ಕವನ ಸಂಕಲನವನ್ನು ಅರ್ಪಿಸಲಾಗಿದೆ.

ADVERTISEMENT

ಈ ಸಂಕಲನದಲ್ಲಿ 50 ಕವಿತೆಗಳಿವೆ. ಎಲ್ಲವೂ ಕೊರೊನಾ ಸೋಂಕು ಮತ್ತು ಅದರ ಸುತ್ತಲಿನ ವಿಷಯಕ್ಕೆ ಸಂಬಂಧಿಸಿವೆ. ಕೊರೊನಾ ವೈರಸ್‌ನೊಳಗೆ ಸಿಲುಕಿರುವ ಮಾನವ, ಅದರಿಂದ ಬಿಡಿಸಿಕೊಂಡು ಹೊರಬರಲು ನಡೆಸಿರುವ ಹೋರಾಟ ಮುಖಪುಟವನ್ನು ಅಲಂಕರಿಸಿದೆ.

ಲಾಕ್‌ಡೌನ್‌ ಅವಧಿಯಲ್ಲಿ ರಸ್ತೆ ಮೇಲೆ ನಡೆಯುತ್ತಿದ್ದ ಪ್ರಹಸನಗಳೇ ಈ ಕವನ ಸಂಕಲನಕ್ಕೆ ಆಹಾರ. ಪಾಸ್‌ ಇಲ್ಲದೆ, ಮಾಸ್ಕ್‌ ಧರಿಸದೆ ರಸ್ತೆಗಳಿದ ವಾಹನ ಸವಾರರು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಾಗ ತಪ್ಪಿಸಿಕೊಳ್ಳಲು ಆಡುವ ನಾಟಕ, ಕಟ್ಟುವ ಕತೆಗಳನ್ನು ಕವನಗಳ ರೂಪಕ್ಕೆ ಇಳಿಸಿದ್ದಾರೆ.

ಲಾಕ್‌ಡೌನ್‌ನಲ್ಲಿ ರಸ್ತೆಗಳ ಮೇಲೆ ಜನರು ಯಾವ ರೀತಿ ಚಿತ್ರ, ವಿಚಿತ್ರವಾಗಿ ವರ್ತಿಸುತ್ತಿದ್ದರು. ಕೊರೊನಾ ಸೋಂಕು ತಗಲುವ ಭಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಅವರನ್ನೆಲ್ಲ ನಿಭಾಯಿಸಲು ಪರದಾಡುತ್ತಿದ್ದ ಪ್ರಸಂಗಗಳನ್ನು ರಸವತ್ತಾಗಿ ಹೇಳಿದ್ದಾರೆ.

ಖಾಕಿ ಧರಿಸಿದ್ದರೂ ಗ್ರಾಮಪುರೋಹಿತ್‌ ಅವರದ್ದು ಕವಿಮನಸ್ಸು. ಸಂಚಾರ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಈಗಾಗಲೇ ಅನೇಕ ಕತೆ, ಕವನ ಸಂಕಲನಗಳನ್ನು ಹೊರತಂದಿದ್ದಾರೆ.

ಗಿಳಿವಿಂಡು

ಶಿವಾಜಿ ನಗರ ಸಂಚಾರ ಪೊಲೀಸ್‌ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಕಿರುಪರಿಚಯ ಮತ್ತು ಅನಿಸಿಕೆಗಳಿರುವ ‘ಗಿಳಿವಿಂಡು’ ಎಂಬ ಹೊತ್ತಿಗೆ ಹೊರತಂದಿದ್ದಾರೆ. ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಈ ಹೊತ್ತಿಗೆಯನ್ನು ಪ್ರಕಟಿಸಿದೆ.

ಎಲ್ಲ ಸಿಬ್ಬಂದಿಯ ಸಮಗ್ರ ಪರಿಚಯ, ಶೈಕ್ಷಣಿಕ ಹಿನ್ನೆಲೆ, ವೃತ್ತಿ ಜೀವನದಲ್ಲಿಯ ವಿಶೇಷ ಸಾಧನೆಗಳ ವಿವರ, ಕುಟುಂಬ ಸದಸ್ಯರೊಂದಿಗಿನ ಚಿತ್ರಗಳು ಇರುವ ‘ಗಿಳಿವಿಂಡು’ ಸ್ನೇಹಸೇತುವಿನಂತೆ ಕೆಲಸ ಮಾಡಲಿದೆ.ಪೊಲೀಸ್‌ ಇಲಾಖೆಯಲ್ಲಿ ಅದೂ ಠಾಣೆಯ ಮಟ್ಟದಲ್ಲಿ ಇಂಥದೊಂದು ಪ್ರಯತ್ನ ಇದೇ ಮೊದಲು ಎನ್ನುತ್ತಾರೆ ಪುರೋಹಿತ್. ‌

ನಗರ ಪೊಲೀಸ್ ಕಮಿಷನರ್ ಭಾಸ್ಕರ್‌ ರಾವ್‌ ಮತ್ತು ಸಂಚಾರ ವಿಭಾಗದ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವೀಕಾಂತ ಗೌಡ ಅವರು ಈಚೆಗೆ ಈ ಎರಡೂ ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.