ಫಕೀರ ಎಂಬ ಹೆಸರಿನಲ್ಲಿ ಬರೆಯುವ ಶ್ರೀಧರ ಬನವಾಸಿ ಜಿ.ಸಿ ಅವರ ಮೊದಲ ಪ್ರಯತ್ನ. ಈ ಸುದೀರ್ಘ ಪ್ರಯತ್ನದಲ್ಲಿ ಆಸ್ಪತ್ರೆಯೊಂದನ್ನು ನೆಲೆ ಮಾಡಿಟ್ಟುಕೊಂಡು, ಎಂಡೋಸಲ್ಫಾನ್, ಹುನಗುಂದ ಗೋಲಿಬಾರ್, ಗಂಗಾವತಿಯ ಭತ್ತದ ಕಾರಿಡಾರ್, ಮುಂತಾದ ನಾಲ್ಕಾರು ಕಥೆಗಳನ್ನು ಒಂದೇ ಸೂರಿನಡಿ ಹೆಣೆಯಲಾಗಿದೆ.
ಬೆಂಗಳೂರನ್ನು ಬೆಂಗವಾಡಿ ಎಂದು ಕರೆದರೂ ನಡುನಡುವೆ ಬೆಂಗಳೂರು ನುಸಿಯುತ್ತದೆ. ಇದೇ ಥರ ಹುನಗುಂದದ ಜೊತೆಗೂ ಆಗಿದೆ. ನೈಜ ಹೆಸರುಗಳನ್ನು ಬಳಸಿಕೊಂಡಿದ್ದರೂ ಕಾದಂಬರಿಯ ಓಟಕ್ಕೆ ಯಾವುದೇ ಕಷ್ಟವಾಗುತ್ತಿರಲಿಲ್ಲ.
ನಾಲ್ಕು ವಿವಿಧ ಪ್ರದೇಶಗಳ ಕಥೆಗಳಿದ್ದಾಗ ಸ್ಥಳೀಯ ಭಾಷಾ ಬಳಕೆಯ ಪ್ರಯತ್ನವೂ ಕಂಡು ಬರುತ್ತದೆ. ಆದರೆ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಭಾಷೆಯನ್ನು ಕಥಾ ಚೌಕಟ್ಟಿಗೆ ಒಗ್ಗಿಸುವುದರಲ್ಲಿ ಎಡವಿದಂತೆ ಎನಿಸುತ್ತದೆ.
ಇನ್ನೇನು ಕಥೆಯ ಅಂತ್ಯ ಎಲ್ಲೆಡೆಯೂ ನಿರಾಶಾದಾಯಕವಾಗಬಹುದು ಎನಿಸುವಾಗಲೇ ಸುಖಾಂತ್ಯವನ್ನು ಕಾಣಿಸುವುದು ಇಡೀ ಓದು, ಹತಾಶೆಗೆ ತಳ್ಳದಂತೆ ಮಾಡುತ್ತದೆ. ಮಾನವ ಸಂಬಂಧಗಳು, ನಿರ್ಲಕ್ಷ್ಯ, ನಿರ್ಲಜ್ಜ, ಆಸೆ, ವಾಂಛೆ, ಉಡಾಫೆತನ, ಔದಾರ್ಯ ಎಲ್ಲವನ್ನೂ ಒಂದೊಂದು ಪಾತ್ರಗಳಾಗಿಯೇ ಮುಂಚೂಣಿಗೆ ತರುವ ಲೇಖಕರ ತಂತ್ರ ಇಲ್ಲಿ ಫಲಿಸಿದೆ. ಮೊದಲ ಪ್ರಯತ್ನದಲ್ಲಿಯೇ ನಾಲ್ಕು ಮೂಲೆಗಳನ್ನು ಒಂದು ಚೌಕಕ್ಕೆ ತಂದಿರುವ ಈ ಸಾಹಸ ಮೆಚ್ಚುವಂಥದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.