ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಸಾಹಿತ್ಯ ಲೋಕಕ್ಕೆ ಹೆಚ್ಚಿನ ಹೊತ್ತಿಗೆಗಳು ಸೇರ್ಪಡೆಯಾಗುತ್ತಿವೆ. ಮಕ್ಕಳನ್ನು ಸೆಳೆಯುವಂತಹ ವಿಷಯವುಳ್ಳ, ವಿನ್ಯಾಸವುಳ್ಳ ಕೃತಿಗಳು ಬರುತ್ತಿದ್ದು, ಇದಕ್ಕೆ ಹೊಸ ಸೇರ್ಪಡೆ ‘ಅಮ್ಮ ಹೇಳಿದ ಕಥೆಗಳು’.
ಗಾದೆಗಳನ್ನೇ ಆಧಾರವಾಗಿಟ್ಟುಕೊಂಡು ಈ ಕೃತಿ ರಚಿಸಿದ್ದಾರೆ ಲೇಖಕಿ. ತಮ್ಮ ತಾಯಿ ಹೇಳುತ್ತಿದ್ದ ಜನಪದ ಗಾದೆಗಳು, ಅದಕ್ಕೆ ಪೂರಕವಾದ ಕಥೆಗಳನ್ನು ಮೆಲುಕುಹಾಕುತ್ತಾ, ಮತ್ತೊಂದಿಷ್ಟು ಕಡೆ ಆ ಕಥೆಗಳನ್ನು ತನ್ನ ಕಲ್ಪನೆಯಲ್ಲಿ ವಿಸ್ತರಿಸಿಕೊಳ್ಳುತ್ತಾ ಸಾಗಿದ್ದಾರೆ ಭಾರತೀ ಕಾಸರಗೋಡು. ಒಟ್ಟು ಇಪ್ಪತ್ತೈದು ಕಥೆಗಳ ಗುಚ್ಛ ಈ ಕೃತಿ.
ಕಥೆಯ ರೂಪದಲ್ಲಿ ಮಕ್ಕಳಿಗೆ ಗಾದೆಗಳನ್ನು ಪರಿಚಯಿಸುವ ಕೆಲಸ ಈ ಕೃತಿಯಲ್ಲಾಗಿದೆ. ಕಥೆಗಳ ಅಂತ್ಯದಲ್ಲಿ ಇಡೀ ಕಥೆಯ ಸಾರಾಂಶವನ್ನು ಗಾದೆಯ ರೂಪದಲ್ಲಿ ಇಲ್ಲಿ ಹೇಳಲಾಗಿದೆ. ಉದಾಹರಣೆಗೆ ‘ಇನ್ನೊಬ್ಬರನ್ನು ಅನುಕರಣೆ ಮಾಡಬೇಡಿ, ಸ್ವಂತ ಬುದ್ಧಿ ಉಪಯೋಗಿಸಿ’ ಎನ್ನುವ ಕಿವಿಮಾತು ಹೇಳುವ ‘ಉರುಳಾಡಿ ಅತ್ತ’ ಎನ್ನುವ ಕಥೆಯ ಕೊನೆಯಲ್ಲಿ ‘ಸಂತೇಲಿ ಮಳೆ ಬಂದಾಗ ಉಪ್ಪಿನೋನು ಅತ್ರೆ ತೆಂಗಿನ ಕಾಯೋನು ಉರುಳಾಡಿ ಅತ್ತ’ ಎಂಬ ಗಾದೆಯನ್ನು ಉಲ್ಲೇಖಿಸಲಾಗಿದೆ. ಹೀಗೆ ಕಪ್ಪು–ಬಿಳುಪಿನ ಚಿತ್ರಸಹಿತ ಕಥೆಗಳು ಇಲ್ಲಿವೆ.
ಕಥೆಯ ಭಾಷೆ ಬಹಳ ಸರಳವಾಗಿದೆ. ಬಣ್ಣದ ಚಿತ್ರಗಳಿದ್ದರೆ ಕಥೆಗಳು ಮಕ್ಕಳನ್ನು ಇನ್ನಷ್ಟು ಸೆಳೆಯುತ್ತಿದ್ದವು. ಬೆನ್ನುಡಿಯಲ್ಲಿ ನಮ್ಮ ಗ್ರಂಥಾಲಯಗಳು ಮಕ್ಕಳನ್ನು ಮತ್ತಷ್ಟು ಸೆಳೆಯಲು ಮಾಡಬೇಕಾಗಿರುವ ಬದಲಾವಣೆಗಳ ಬಗ್ಗೆಯೂ ಸೂಚ್ಯವಾಗಿ ಲೇಖಕಿ ಉಲ್ಲೇಖಿಸಿದ್ದಾರೆ.
ಅಮ್ಮ ಹೇಳಿದ ಕಥೆಗಳು ಲೇ: ಭಾರತೀ ಕಾಸರಗೋಡು ಪ್ರ: ನ್ಯೂ ವೇವ್ ಬುಕ್ಸ್ ಸಂ: 9448788222 ಪುಟ: 84 ದರ: 90
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.