ADVERTISEMENT

ಪಶ್ಚಿಮ ಘಟ್ಟ ಕುರಿತ ಅಪೂರ್ವ ಕೃತಿ

ಪುಸ್ತಕ ಪರಿಚಯ

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 20:14 IST
Last Updated 23 ಜೂನ್ 2018, 20:14 IST
ಪುಸ್ತಕ ಮುಖಪುಟ
ಪುಸ್ತಕ ಮುಖಪುಟ   

ಪರಿಸರಕ್ಕೆ ಸಂಬಂಧಿಸಿದ ಬರಹ ಎಂಬ ವಿಷಯ ಪ್ರಸ್ತಾಪ ಆದಾಗಲೆಲ್ಲ ಕನ್ನಡದ ಮನಸ್ಸು ತಾನಾಗಿಯೇ ನೆನಪು ಮಾಡಿಕೊಳ್ಳುವ ಹೆಸರು ‘ನಾಗೇಶ ಹೆಗಡೆ’. ಪ್ರಜಾವಾಣಿ ಸೇರಿದಂತೆ ವಿವಿಧೆಡೆ ಪ್ರಕಟವಾಗುವ ಬರಹಗಳ ಮೂಲಕ ಕನ್ನಡದ ಓದುಗರ ಜೊತೆ ದಶಕಗಳಿಂದ ಒಡನಾಟ ಇರಿಸಿಕೊಂಡವರು ಹೆಗಡೆಯವರು. ಅವರ ಹುಟ್ಟೂರು ಪಶ್ಚಿಮ ಘಟ್ಟದ ಸೆರಗಿನಲ್ಲೇ ಇರುವುದಾಗಿರುವ ಕಾರಣದಿಂದಲೋ ಏನೋ ಅವರಿಗೆ ಈ ಘಟ್ಟ ಶ್ರೇಣಿಗಳ ಜೊತೆ ಹೊಕ್ಕಳ ಬಳ್ಳಿ ಸಂಬಂಧ. ಅಂತಹ ಗಾಢ ಸಂಬಂಧ ಇರುವುದು ಅವರ ಬರಹಗಳಲ್ಲಿ ವ್ಯಕ್ತವಾಗುತ್ತದೆ.

ಪಶ್ಚಿಮ ಘಟ್ಟಗಳ ವಿಸ್ಮಯದ ಬಗ್ಗೆ, ಅಲ್ಲಿನ ಸಂಪತ್ತನ್ನು ರಕ್ಷಿಸುವ ಕಳಕಳಿಯಿಂದ ಹೆಗಡೆಯವರು ಬರೆದಿರುವ ಪುಟ್ಟ ಪುಸ್ತಕ ‘ಅಪೂರ್ವ ಪಶ್ಚಿಮಘಟ್ಟ’. ಇದನ್ನು ಬೆಂಗಳೂರಿನ ಭೂಮಿ ಬುಕ್ಸ್‌ ಪ್ರಕಟಿಸಿದೆ. ‘ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಜನಜಾಗೃತಿ ಮೂಡಿಸಲೆಂದು 1986ರ ಅಕ್ಟೋಬರ್‌ನಲ್ಲಿ ಪಾದಯಾತ್ರೆ ನಡೆಯಿತು. ಕೇರಳದಿಂದ ಆರಂಭಿಸಿ, ಗುಜರಾತ್‌ವರೆಗೆ ನಡೆದ ಪಾದಯಾತ್ರೆ ಅದಾಗಿತ್ತು. 800 ಕಿಲೋ ಮೀಟರ್‌ಗಳಷ್ಟು ದೂರ ಕ್ರಮಿಸಿದ ಈ ಪಾದಯಾತ್ರೆಯು ಘಟ್ಟಸಾಲುಗಳ ಹಳ್ಳಿ–ಪಟ್ಟಣಗಳ ಮೂಲಕ ಸಾಗಿತು. ಡಾ. ಶಿವರಾಮ ಕಾರಂತರಂತಹ ಹಿರಿಯರನ್ನು ತನ್ನತ್ತ ಸೆಳೆಯಿತು. ಆ ಪಾದಯಾತ್ರೆಯನ್ನು ನೆನಪಿಸಿಕೊಳ್ಳುತ್ತ, ಅದು ನಡೆದ ಮೂವತ್ತು ವರ್ಷಗಳಲ್ಲಿ ಏನೇನಾದವು ಎಂಬುದರ ಅವಲೋಕನ ಈ ಕೃತಿ’ ಎಂದು ಪುಸ್ತಕದ ಬಗ್ಗೆ ಹೇಳಲಾಗಿದೆ.

ಘಟ್ಟಗಳ ಕುರಿತು ಹೆಗಡೆಯವರ ಸೊಗಸಾದ ಬರಹದ ಜೊತೆಯಲ್ಲೇ ನುರಿತ ಛಾಯಾಚಿತ್ರಗ್ರಾಹಕರು ಕ್ಲಿಕ್ಕಿಸಿರುವ ಪಶ್ಚಿಮಘಟ್ಟ ಸಾಲುಗಳ ವರ್ಣಮಯ ಚಿತ್ರಗಳು ಈ ಪುಸ್ತಕದ ಜೊತೆ ಬರುವ ಬೋನಸ್‌ನಂತೆ ಇವೆ. 360 ಕೋಟಿ ವರ್ಷಗಳ ಇತಿಹಾಸ ಹೊಂದಿರುವ ಈ ಘಟ್ಟ ಸಾಲುಗಳಲ್ಲಿ ಈಗ ಅಳಿವಿನ ಅಂಚಿಗೆ ಸರಿದಿರುವ ಪ್ರಾಣಿ ಪ್ರಭೇದಗಳು, ಅಲ್ಲಿನ ಶೋಲಾ ಕಾಡುಗಳು, ಕಾಳಿಂಗ ಸರ್ಪ‍ಗಳು, ರಾಮಪತ್ರೆ ಜಡ್ಡಿ (ಅಥವಾ ಮಿರಿಸ್ಟಿಕಾ ಸ್ವಾಂಪ್‌) ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಇದರಲ್ಲಿ ಟಿಪ್ಪಣಿಗಳಿವೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವವರ ಪಾಲಿಗೆ ಅತ್ಯಂತ ಮಹತ್ವದ್ದಾದ ಅರಣ್ಯಹಕ್ಕು ಕಾಯ್ದೆಯ ಕುರಿತೂ ಕಿರುಟಿಪ್ಪಣಿಯೊಂದು ಈ ಕೃತಿಯಲ್ಲಿ ಇದೆ.

ADVERTISEMENT

ಹೊರಗೆ ಧೋ ಎಂದು ಮಳೆ ಹುಯ್ಯುತ್ತಿರುವಾಗ, ಮನೆಯಲ್ಲಿ ಒಂದು ಕಪ್ ಕಾಫಿ ಮಾಡಿಕೊಂಡು ಓದಲು ಕುಳಿತರೆ, ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿಬಿಡಬಹುದಾದ ಬೆಚ್ಚನೆಯ ಪುಸ್ತಕ ಇದು.

ಪುಟಗಳು: 52
ಬೆಲೆ: ₹ 50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.