
ಸಮಾಜವಾದಿ ಆಂದೋಲನದ ಅಲೆಮಾರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ಸರ್ಕಾರವು ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ (ಮರಣೋತ್ತರ) ವನ್ನು ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಘೋಷಿಸಿದೆ. ಇದೇ ಸಂದರ್ಭದಲ್ಲಿ ನರೇಂದ್ರ ಪಾಠಕ್ ಅವರು ರಚಿಸಿದ ‘ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ’ ಕೃತಿ ಬಿಡುಗಡೆಗೊಂಡಿದೆ.
ಇದನ್ನು ಹಸನ್ ನಯೀಂ ಸುರಕೋಡ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 1924ರ ಜ. 24ರಂದು ಜನಿಸಿದ ಕರ್ಪೂರಿ ಠಾಕೂರ್ ಅವರು ಗಾಂಧೀಜಿ ಅವರ ಪ್ರಭಾವಕ್ಕೆ ಒಳಗಾದವರು. ಜತೆಗೆ ಸೆರೆವಾಸವನ್ನೂ ಅನುಭವಿಸಿದವರು. ಸ್ವಾತಂತ್ರ್ಯ ನಂತರದಲ್ಲಿ ರಾಮಮನೋಹರ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದ ಕರ್ಪೂರಿ ಠಾಕೂರ್ ಅವರು ಸಮಾಜವಾದ ಮಾರ್ಗದಲ್ಲಿ ಸಾಗಿದರು. ಹಿಂದುಳಿದ ವರ್ಗದವರ ಹಾಗೂ ಬಡ ಜನರ ಏಳಿಗೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟವರು.
ಬಿಹಾರ ರಾಜ್ಯಕ್ಕೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಹಾಗೂ 36 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿದ್ದರೂ, ಕರ್ಪೂರಿ ಅವರ ಬಳಿ ಕೊನೆಯಲ್ಲಿದ್ದಿದ್ದು ₹ 33 ಸಾವಿರ ಮಾತ್ರ! ಸಮಾಜವಾದಿ ಆಂದೋಲನದ ಅಲೆಮಾರಿಯಾಗಿದ್ದ ಕರ್ಪೂರಿ ಅವರು ಬಿಹಾರದ ಕುಗ್ರಾಮದಲ್ಲಿದ್ದ ಅವರ ಗುಡಿಸಲ ಮನೆಯನ್ನು ಪಕ್ಕಾ ಮನೆಯನ್ನಾಗಿ ಮಾಡಿಸಲಾಗದೆ ನಿರ್ಗಮಿಸಿದ ನಿಸ್ವಾರ್ಥ ಜನ ಹೋರಾಟಗಾರ. ರಾಜಕೀಯ ಎಂಬ ಶಬ್ದ ಬೇರೆಯೇ ಕಲ್ಪನೆ ನೀಡುವ ಈ ಕಾಲಘಟ್ಟದಲ್ಲಿ ಕರ್ಪೂರಿ ಠಾಕೂರ್ ಅವರ ಬದುಕು ಮತ್ತು ಹೋರಾಟ ಕುರಿತ ಈ ಕೃತಿ ಅವರ ಹೋರಾಟ ಮತ್ತು ಆಲೋಚನೆಗಳ ಪರಿಚಯ ಮಾಡಿಕೊಡಲಿದೆ.
ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ
ಲೇ: ನರೇಂದ್ರ ಪಾಠಕ್
ಅನು: ಹಸನ್ ನಯೀಂ ಸುರಕೋಡ
ಪ್ರ: ಲೋಹಿಯಾ ಪ್ರಕಾಶನ
ಪು: 300 ಬೆಲೆ: ₹ 300
ಸಂ: 9900750549
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.