ADVERTISEMENT

ಮೊದಲ ಓದು: ಯುದ್ಧೋನ್ಮಾದ ಜಗತ್ತಿಗೆ ವಾಸ್ತವ ಪಾಠ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 19:30 IST
Last Updated 27 ಡಿಸೆಂಬರ್ 2025, 19:30 IST
ಕೃಷ್ಣಯ್ಯನ ಕೊಳಲು
ಕೃಷ್ಣಯ್ಯನ ಕೊಳಲು   

ಮಹಾಕಾವ್ಯ ‘ಮಹಾಭಾರತ’ ಪೌರಾಣಿಕ ಮತ್ತು ಜನಪದೀಯಗೊಂಡು ನಿತ್ಯ ಬದುಕಿಗೆ ನಿದರ್ಶನವಾಗಿದೆ. ಅಂತಹ ವಸ್ತುವಿನ ಮೇಲೆ ಶೋಧದ ನೋಟವನ್ನು ಬೀರುತ್ತಾ ಹೊಸ ಕಥನವೊಂದು ‘ಕೃಷ್ಣಯ್ಯನ ಕೊಳಲು’ ಕಾದಂಬರಿಯಲ್ಲಿ ಅನಾವರಣಗೊಂಡಿದೆ. ಇಲ್ಲಿ ಕೃಷ್ಣನೇ ಕೇಂದ್ರವಾದರೂ ಆತನನ್ನು ಜನಸಾಮಾನ್ಯಗೊಳಿಸುವ ಕಲೆಯ ನೈಪುಣ್ಯತೆಯನ್ನು ಕಾದಂಬರಿಕಾರ ಟಿ.ಗೋವಿಂದರಾಜು ತೋರಿಸಿದ್ದಾರೆ. ದ್ವಾರಕೆ ಎಂಬ ರಾಜ ಆಸ್ಥಾನ ನಮ್ಮ ನೆನಪಿನ ಯಾವ ಗ್ರಾಮ ಭಾರತವೂ ಆಗಬಹುದು. ಕುರುಕ್ಷೇತ್ರ ನಂತರದ ‘ಭಾರತ ಕಥೆ’ ವಾಸ್ತವ ನೆಲೆಯಲ್ಲಿ ತೆರೆದುಕೊಳ್ಳುತ್ತದೆ. ಕೊಳಲಿನ ಅಧ್ಯಾತ್ಮ ಸ್ವರದ ಗಾಯನ ಯುದ್ಧ ವಿನಾಶದ ಪರಿಣಾಮವನ್ನೂ ಹೊರಹೊಮ್ಮಿಸುತ್ತದೆ.

ಕುರುಕ್ಷೇತ್ರದ ಕೃಷ್ಣಯ್ಯ ಇಲ್ಲಿ ‘ನೆನಪುಗಳ ಕಥನ’, ‘ನೊಂದವರ ಕಥನ’, ‘ಬೆಂದವರ ಕಥನ’, ‘ಕೊಳಲ ಗಾನದ ಕಥನ’, ‘ಲೋಕ–ಲೋಕೋತ್ತರ ಕಥನ’ ಎಂಬ ಐದು ಭಾಗದಲ್ಲಿ ಚಿತ್ರಿತನಾಗಿದ್ದಾನೆ. ಪ್ರತಿ ಅಧ್ಯಾಯದಲ್ಲಿಯೂ ‘ಸ್ವರ’ ಎಂಬ ಉಪ ಅಧ್ಯಾಯಗಳನ್ನು ಒಳಗೊಂಡಿದೆ. ಅವು ಪುಟ್ಟ ಕಥೆಯನ್ನು ಹೇಳುತ್ತವೆ. ಯುದ್ಧೋನ್ಮಾದ ಜಗತ್ತಿನಲ್ಲಿ ಕುರುಕ್ಷೇತ್ರದ ನಂತರದ ಜೀವನ ಪಾಠ ಆಗಬೇಕು ಎನ್ನುವ ಕಾಳಜಿ ಇಲ್ಲಿ ವ್ಯಕ್ತವಾಗುತ್ತದೆ. ಕಾಳಗ ನಂತರದ ಸ್ಮಶಾನ ಚಿತ್ರಣ ಮನುಷ್ಯ ಕುಲದ ವಿನಾಶ ದಾಹವನ್ನು ತೋರಿಸುವಂತಿದೆ. ‘ಕೃಷ್ಣಯ್ಯನ ಕಡಗ ಕಂಕಣ ಭಾಗ್ಯ’ ವಿಭಾಗದಲ್ಲಿ ‘ಯುದ್ಧ ಸಂತ್ರಸ್ತರಿಗೆ, ಸೈನಿಕ ವಿಧವಾ ಪತ್ನಿಯರಿಗೆ ಕೃಷ್ಣಯ್ಯನು ಕೆಲವೊಂದು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದನು. ಅಂಗ ಊನರಿಗೆ ಜೀವನ ನಿರ್ವಹಣಾ ಭತ್ಯೆಯ ವ್ಯವಸ್ಥೆ ಮಾಡಿದ್ದನು. ನಿರ್ಗತಿಕರಿಗೆ ವಸತಿ ಚಾವಡಿಗಳು, ಗಂಜಿ ಕೇಂದ್ರಗಳು, ಔಷಧಾಲಯಗಳು...’ ಹೀಗೆ ಚಿತ್ರಿಸುವ ಅವರು ಪ್ರಾಯದ ವಿಧವೆಯರ ಗೋಳನ್ನೂ ತರುತ್ತಾರೆ. 

‘ಕಡಲ ತೀರದಲಿ ಕರಿದ ಮೀನಿನ ಘಮಲು’ ವಿಭಾಗದಿಂದ ಕಥೆ ಮೈದಳೆಯುತ್ತದೆ. ಇಲ್ಲಿನ ವರ್ಣನೆ ಊರೆಂಬ ಊರುಗಳು ಹೆಂಡ ಮತ್ತು ಮೋಜುಮಸ್ತಿಯಲ್ಲಿ ತೇಲುತ್ತಿರುವ ಬಗೆಯನ್ನು ವರ್ಣನಾತ್ಮಕವಾಗಿ ತಂದಿದ್ದಾರೆ. ಉತ್ಪ್ರೇಕ್ಷೆಯ ಅಲಂಕಾರ ವಿವರಗಳಿಲ್ಲದೆ ಸಹಜ ಗ್ರಾಮ್ಯಶೈಲಿಯ ಬರಹ ಓದುಗರನ್ನು ಆಕರ್ಷಿಸುತ್ತದೆ. ‘ಸಾಂಬನಿಗಾಯಿತು ಬಸುರು’ ಇಲ್ಲಿ ಹಾಸ್ಯದ ಲೇಪನದಲ್ಲಿ ಮೊನುಚಾದ ವ್ಯಂಗ್ಯವನ್ನು ಕೃತಿಕಾರರು ಮಾಡಿದ್ದಾರೆ. ಕೃಷ್ಣನ ಮಗ ಸಾಂಬ ತನ್ನ ಪಟಾಲಂ ಜೊತೆ ಪಾನಗೋಷ್ಠಿಯಲ್ಲಿ ಚಿತ್ತಾಗಿರುತ್ತಾನೆ. ಅದೇ ಸಮಯಕ್ಕೆ ಭೇಟಿ ನೀಡುವ ಮುನಿಗಳ ಮುಂದೆ ಗರ್ಭಿಣಿಯ ವೇಷ ಧರಿಸಿ ‘ತ್ರಿಕಾಲಜ್ಞಾನಿಗಳು ಹುಟ್ಟುವ ಮಗು ಹೆಣ್ಣೋ ಗಂಡೋ ಎಂದು ತಿಳಿಸಿ’ ಎಂದು ವಿನಂತಿಸುವ ಸನ್ನಿವೇಶ ಕೂಡ ವಿಭಿನ್ನ ಅರ್ಥವನ್ನೇ ಸ್ಫುರಿಸುವಂತಿದೆ. 

ADVERTISEMENT

ಮಹಾಭಾರತದ ಅನೇಕ ಎಲೆಮರೆ ಕಾಯಿಯಂತಹ ಪಾತ್ರಗಳು ಇಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಜನಪದರ ನಂಬಿಕೆ ಮತ್ತು ದ್ವಾಪರದ ರಾಜಕೀಯವನ್ನು ಇವತ್ತಿನ ಕಾಲಘಟ್ಟಕ್ಕೆ ಹೋಲುವಂತೆ ಸಂಕಥನವನ್ನು ನಿರೂಪಿಸಿದ್ದಾರೆ.

ಕೃಷ್ಣಯ್ಯನ ಕೊಳಲು

ಲೇ: ಟಿ. ಗೋವಿಂದರಾಜು

ಪ್ರ: ವೀರಲೋಕ

ಮೊ: 7022122121

ಬೆಲೆ: ₹ 275

ಪು: 224

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.