ಪುಟಪಾಕ ಚಿಂತನೆಗೊಡ್ಡುವ ‘ಚುರು’ ಕತೆಗಳು
ಲೇ: ಸತ್ಯೇಶ್ ಎನ್. ಬೆಳ್ಳೂರ್
ಪ್ರ: ಯಾಜಿ ಪ್ರಕಾಶನ, ಹೊಸಪೇಟೆ
ಮೊ: 94810 42400
ನಗರ ಮಾನವನ ದೈನಂದಿನ ನಡವಳಿಕೆಗಳು, ಕಾಲದ ಸ್ಥಿತ್ಯಂತರಗಳಿಗೆ ಆತನ ಸ್ಪಂದನೆ, ಆಲೋಚನಾ ಕ್ರಮದ ಬಗೆಗೆ ಇಲ್ಲಿನ ಕತೆಗಳು ಹೇಳುತ್ತವೆ.
ಪುಸ್ತಕದ ಹೆಸರೇ ಹೇಳುವಂತೆ ಇವು ‘ಚುರು’ ಕತೆಗಳು. ದೈನಂದಿನ ಸಣ್ಣ ಸಣ್ಣ ಘಟನೆಗಳು, ಅಲ್ಲಿ ಮನುಷ್ಯನ ಸಂಭಾಷಣೆಗಳು ಕತೆಯ ರೂಪ ಪಡೆದಂತೆ ನಮ್ಮ ಮುಂದೆ ನಿಲ್ಲುತ್ತವೆ. ಕತೆಯ ನಿರೂಪಣೆಯುಗಂಭೀರವಾಗಿರದೆ ಬಹಳ ಸರಳವಾಗಿವೆ. ವಿಡಂಬನೆ ಹಾಗೂ ಹಾಸ್ಯಭರಿತವಾಗಿವೆ.
85 ಕತೆಗಳು ಈ ಸಂಕಲನದಲ್ಲಿ ಇವೆ. ಇರದಲ್ಲಿ ‘ವೆಲ್ ಆರ್ಗನೈಸ್ಡ್’ ಕತೆ ಮಾರ್ಮಿಕವಾಗಿದೆ. ಬೆಂಗಳೂರಿನಂಥ ಮಹಾನಗರದಲ್ಲಿ ಎಲ್ಲವೂ ವೆಲ್ ಆರ್ಗನೈಸ್ಡ್. ಈ ಶಿಸ್ತೇ ಅರ್ಧ ನಮ್ಮನ್ನು ಮಂಗನನ್ನಾಗಿಸಿ ಬಿಡುತ್ತದೆ. ತಂದೆಯ ಶ್ರಾದ್ಧವನ್ನು ಬಹಳ ಕಡಿಮೆ ಖರ್ಚಿನಲ್ಲಿ ಮಾಡಿಕೊಡಲಾಗುವುದು ಎಂದು ಹೇಳಿ, ಕೊನೆಯಲ್ಲಿ ನಮ್ಮ ಸಂಘಕ್ಕೆ ದೇಣಿಗೆ ನೀಡಲೇಬೇಕು ಎಂದು ಒತ್ತಾಯಿಸುವ ತಂತ್ರ ದಂಗು ಬಡಿಸುತ್ತದೆ. ಇದನ್ನು ಬಹಳ ವಿಡಂಬನಾತ್ಮಕವಾಗಿ ಲೇಖಕರು ನಿರೂಪಿಸುತ್ತಾರೆ.
ಸತ್ಯೇಶ್ ಎನ್. ಬೆಳ್ಳೂರ್ ಅಂತರರಾಷ್ಟ್ರೀಯ ಕಂಪನಿ ಒಂದರಲ್ಲಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಣ ಹೆರುವ ವೃತ್ತಿಯಾದರೂ ಸೃಜನಶೀಲತೆ ಉಳಿಸಿಕೊಂಡಿರುವ ಇವರ ಕಾಳಜಿ ಅಭಿನಂದನಾರ್ಹ. ಕತೆಗಳು ಕೊನೆಯಲ್ಲಿ ನೀತಿ ಬೋಧನೆ ಎನಿಸಿದರೂ, ಹೀಗಾಗಬಾರದು ಎನ್ನುವ ಅವರ ಕಾಳಜಿ ನಮ್ಮನ್ನು ಕತೆ ಓದುವಂತೆ ಪ್ರೇರೇಪಿಸುತ್ತದೆ.
‘ಇಂದು ನಾವು ಮಾಹಿತಿ ಹಾಗೂ ಸಂವಹನ ಯುಗದಲ್ಲಿ ಬದುಕುತ್ತಿದ್ದೇವೆ. ಹೆಚ್ಚು ಜನರಿಗೆ ತಲುಪಲು ಸಾಹಿತ್ಯವೂ ಸಂವಹನ ತಂತ್ರಗಳನ್ನು ಬಳಸಿಕೊಳ್ಳ ಬಯಸುತ್ತದೆ. ಹೆಚ್ಚು ಜನರಿಗೆ ಪರಿಣಾಮಕಾರಿಯಾಗಿ ತಿಳಿಸಲು ಕಿರುಕತೆಗಳ ಸಂವಹನಕ್ರಮ ಉಪಯೋಗವಾದೀತು ಎಂಬ ನಂಬಿಕೆಯಿಂದ ಸತ್ಯೇಶ್ ಈ ಸವಿಯಾದ ಚುರುಕತೆಗಳನ್ನು ಬರೆದಿದ್ದಾರೆ’ ಎಂದು ವಿಮರ್ಶಕ ಎಸ್.ಆರ್. ವಿಜಯಶಂಕರ್ ಮುನ್ನುಡಿಯಲ್ಲಿ ಕತೆಗಳ ಕುರಿತು ಮೆಚ್ಚುಗೆಯ ಮಾತಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.