ADVERTISEMENT

ಪ್ರೌಢ ಗಾಯನ ರಂಗಪ್ರವೇಶ: ಗಣನೀಯ ನೃತ್ಯೋತ್ಸವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಅಕ್ಟೋಬರ್ 2025, 7:39 IST
Last Updated 30 ಅಕ್ಟೋಬರ್ 2025, 7:39 IST
<div class="paragraphs"><p>ಸುಮಾ ಕೃಷ್ಣಮೂರ್ತಿ ಅವರ ವಿದ್ಯಾರ್ಥಿಗಳು</p></div>

ಸುಮಾ ಕೃಷ್ಣಮೂರ್ತಿ ಅವರ ವಿದ್ಯಾರ್ಥಿಗಳು

   

ರಂಗಪ್ರವೇಶ ಅಥವಾ ಚೊಚ್ಚಲ ಕಲಾ ಪ್ರದರ್ಶನ ಕಛೇರಿಗಳು ಬಹುತೇಕವಾಗಿ ನೃತ್ಯ ಕ್ಷೇತ್ರದಲ್ಲಿ ಸರ್ವೇ ಸಾಮಾನ್ಯ. ಬಹಳ ಅಪರೂಪವಾಗಿ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಅಂತಹ ಕಾರ್ಯಕ್ರಮವೊಂದು ಜಯನಗರದ ಶ್ರೀ ಜಯರಾಮ ಸೇವಾಮಂಡಳಿಯಲ್ಲಿ ನಡೆದು ವಿಖ್ಯಾತ ಗಾಯಕ ಬಾಲಸುಬ್ರಹ್ಮಣ್ಯಶರ್ಮ ಅವರ ಉದಯೋನ್ಮುಖ ಯುವ ಕಲಾವಿದ ಶ್ರೀಶ ಪ್ರಬುದ್ಧವಾಗಿದ್ದ ಪ್ರದರ್ಶನವನ್ನು ನೀಡಿದರು.

ಶೀಶ ಅವರ ಗಾಯನ ನೇರವೂ, ಸ್ಪಷ್ಟವೂ ಸಮತೋಲನವೂ ಹಾಗೂ ತೀರ ಗಾಢ ನಿರೂಪಣೆಗಳಿಂದ ಶ್ರವ್ಯವಾಗಿತ್ತು. ಅವರೊಂದಿಗೆ ಅಷ್ಟೇ ಉತ್ಸಾಹಪೂರ್ವಕವಾಗಿ ಸ್ಪಂದಿಸಿದ ವರಲಕ್ಷ್ಮಿ (ಪಿಟೀಲು), ವಿನಯ್‌ (ಮೃದಂಗ) ಮತ್ತು ಉತ್ತಮ್‌ (ಘಟ) ಅವರು ಪಕ್ಕವಾದ್ಯಗಾರರಾಗಿ ಕಛೇರಿಯ ಕಳೆಯನ್ನು ಹೆಚ್ಚಿಸಿದರು. ಅವರು ಹಾಡಿದ ಜನನೀಪಾಹಿ (ವಿಳಂಬ ಗತಿ ರಂಜಿಸಿತು), ಶಂಕರಾಭರಣದ ವಿಸ್ತೃತ ಪ್ರಸಾರ, ಸರೋಜದಳನೇತ್ರಿ ಕೀರ್ತನೆಗೆ ನೆರವಲ್‌ (ಸಾಮಗಾನಪ್ರಿಯೆ) ಮತ್ತು ದ್ವಿಕಾಲ ಸ್ವರಪ್ರಸ್ತಾರ ಶ್ರೀಶ ಅವರ ವಿದ್ವತ್ಪ್ರತಿಭೆಗಳಿಗೆ ಸಾಕ್ಷಿ ನುಡಿದವು. ತ್ಯಾಗರಾಜರ ಬಹಳ ವಿರಳವಾಗಿ ಕೇಳಿಬರುವ ನಾರಾಯಣಹರಿ (ಯಮುನಕಲ್ಯಾಣಿ) ವಿಶೇಷವಾಗಿ ಗಮನಸೆಳೆಯಿತು. ದಾಸರಿ ಕೃತಿಗಳನ್ನು ಚುರುಕಾಗಿ ಹಾಡಿ ಕಛೇರಿಯನ್ನು ಸಮಾಪ್ತಿಗೊಳಿಸಿದ ಗಾಯಕರು ಸಭೀಕರ ಮೆಚ್ಚುಗೆಗೆ ಪಾತ್ರರಾದುದು ಔಚಿತ್ಯಪೂರ್ಣವೇ ಆಗಿತ್ತು.

ADVERTISEMENT

ಉದಯೋನ್ಮುಖ ಯುವ ಕಲಾವಿದ ಶ್ರೀಶ

ಗಾಯಕಿ ಸುಮಾ ಕೃಷ್ಣಮೂರ್ತಿಯವರು ತಮ್ಮ ಎಲ್ಲಾ ವಿವಿಧ ರೂಪಗಳಲ್ಲೂ ಮಿಂಚಿ, ತಮ್ಮ ಲಲಿತಶ್ರೀ ನೃತ್ಯ ಧಾಮದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಅಪೂರ್ವವಾಗಿ ಆಚರಿಸಿದರು. ಸೇವಾಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ವಿವಿಧ ಸ್ತರದ ಶಿಷ್ಯೆಯರು ಬೆರಗುಗೊಳಿಸುವಂತಹ ಪ್ರದರ್ಶನವನ್ನು ನೀಡಿ ಗುರುಗಳ ಹಿರಿಮೆ-ಗರಿಮೆಗಳನ್ನು ಎತ್ತಿಹಿಡಿದರು.

ಕೇವಲ ಶಿಷ್ಯರ ತಂದೆ-ತಾಯಿಯರನ್ನು ಸಂತುಷ್ಟಗೊಳಿಸುವಂತಹ ವಾರ್ಷಿಕೋತ್ಸವ ಕಾರ್ಯಕ್ರಮವಾಗದೆ ವೈವಿಧ್ಯಮಯ ರಚನೆಗಳ ಪ್ರಸ್ತುತಿ, ಆ ಪ್ರಸ್ತುತಿಗಳಲ್ಲಿ ಕಲಾ ತಂತ್ರ ಮತ್ತು ಕಲಾ ಪೂರ್ಣತೆ ತುಂಬಿ ತುಳುಕಿ ರಸಿಕರು ಪುಳಕಿತರಾದುದು ವಿಶೇಷ. ಗುರು ಸುಮಾ ಕೃಷ್ಣಮೂರ್ತಿ (ನಟುವಾಂಗ, ನಿರ್ದೇಶನ ಇತ್ಯಾದಿ) ಮತ್ತು ಅವರ ಪುತ್ರಿ ಲಾವಣ್ಯ ಅವರ ಪರಿಪೂರ್ಣ ಸಮಗ್ರತೆಯ ಗಾಯನ ಸಹಕಾರ ಕಾರ್ಯಕ್ರಮದ ಪರಿಣಾಮ-ಪ್ರಭವಗಳು ನೋಡುಗರ ಕಲಾಜ್ಞಾನವನ್ನು ಮತ್ತಷ್ಟು ಮೊನಚುಗೊಳಿಸಿ ವಿಸ್ತರಿಸುವಷ್ಟು ಶಕ್ಯವಾಗಿತ್ತು. ಸಮೂಹ ನೃತ್ಯಗಳಲ್ಲಿ ಕಂಡು ಬಂದ ಅನ್ಯೋನ್ಯತೆ, ಅಂಗಶುದ್ಚಿ, ಸಮಬಲ ಮತ್ತು ಸಮಕೌಶಲಗಳು ನೃತ್ಯಪ್ರೇಮಿಗಳ ಮನಸೆಳೆದವು.

ವಾರ್ಷಿಕೋತ್ಸವವಲ್ಲ, ಅದೊಂದು ಗಣನೀಯ ನೃತ್ಯೋತ್ಸವ

ಆರಂಭಿಕ ನೃತ್ಯ ಪಾಠಗಳನ್ನು ಪುಟಾಣಿಗಳು ಚೊಕ್ಕವಾಗಿ ಒಪ್ಪಿಸಿ ಕಾರ್ಯಕ್ರಮಕ್ಕೆ ಉತ್ತಮ ನಾಂದಿಯನ್ನು ಒದಗಿಸಿದರು. ತಟ್ಟಡುವುಗಳ ಆರು ವಿನ್ಯಾಸಗಳು. ಗುರು ಸುಮಾ ಅವರ ತತ್ಕಾರಗಳೊಂದಿಗೆ ಗಣೇಶ ಸ್ತುತಿ ಘನವಾಗಿದ್ದವು. ಮೈಸೂರು ಶೈಲಿಯ ಬ್ರಾಂಡ್‌ ಐಟಂ ಹಾಗೂ ಸತ್ವ-ತತ್ವಪೂರ್ಣ ಮೇಳಪ್ರಾಪ್ತಿ (ಕೇದಾರ), ಲಯ ವಿವಿಧತೆಯ ಅಲರಿಪ್ಪು ಖುಷಿಕೊಟ್ಟವು. ಆಂಡಾಳ್‌ ಕವಿತ್ವದಲ್ಲಿ (ಮಧ್ಯಮಾವತಿ) ಅಭಿನಯ ಸೊಗಸು ಪ್ರಕಾಶಿಸಿತು. ಶ್ರೀ ಸುಂದರೇಶ್ವರನ ಮನೋರಮೆ ಶಾಮಲೆ ಮೀನಾಕ್ಷಿಯ ವರ್ಣನೆಯನ್ನು ಮಾಡುತ್ತಾ ಮುತ್ತುಸ್ವಾಮಿ ದೀಕ್ಷಿತರ ನೋಟ್ಟುಸ್ವರಗಳ ಪ್ರತಿಪಾದನೆ ರೋಚಕವಾಗಿತ್ತು.

ರಂಜನಿಮಾಲಾ (ವಿವಿಧ ಮಾಲಾಂತ್ಯ ರಾಗಗಳಲ್ಲಿ) ಅಭಿನಯ ಪ್ರೌಢಿಮೆಯನ್ನು ಪ್ರತಿಬಿಂಬಿಸುವಂತಹ ನಿರೂಪಣೆ. ವೇಣುವಿದ್ವಾಂಸ ವೇಣುಗೋಪಾಲ್‌ ಅವರ, ಬೇಹಾಗ್‌ ತಿಲ್ಲಾನ, ಮೈಸೂರು ಸಂಸ್ಥಾನ ಗೀತೆ ಮುಂತಾದ ಕೊನೆಯ ಪ್ರಸ್ತುತಿಗಳು ಉಪಯುಕ್ತವಾದ ಸಮಾಪ್ತಿಯನ್ನು ಒದಗಿಸಿದವು. ನುರಿತ ನೃತ್ಯ ಕಲಾವಿದೆ, ಪ್ರಭಾವಶಾಲಿ ನಿರೂಪಕಿ, ವಾಕ್ಚತುರೆ ರೂಪಶ್ರೀ ಮಧುಸೂದನ್‌ ತಮ್ಮ ಶಿಷ್ಯೆಯರನ್ನೂ ಈ ಕಾರ್ಯಕ್ರದಲ್ಲಿ ಗಮನಾರ್ಯವಾಗಿ ಭಾಗವಹಿಸುವಂತೆ ಮಾಡುವುದರೊಂದಿಗೆ ತಮ್ಮ ಚೇತೋಹಾರಿ ಕಾರ್ಯಕ್ರಮ ನಿರೂಪಣಾ ಕುಶಲತೆಯಿಂದ ಅಂದಿನ ಸಂಜೆಯ ಕಾರ್ಯಕ್ರಮದ ಜೀವನಾಡಿಯಾಗಿ ಮೆರೆದ ರೂಪಶ್ರೀ ಮಧುಸೂದನ್‌ ಅಭಿನಂದನಾರ್ಹರು.