
ಕವನ
ಒಳಗಿನ ಬೆಂಕಿ ಆರುತ್ತಿರುವಾಗ
ಕೆಂಡಗಳು ಕೆಲವು ಉಸಿರಾಡುತಿವೆ
ಬೂದಿ ಹೊದ್ದುಕೊಂಡವು ಹಲವು
ಉಫ್ ಎಂದರೆ ಉರಿಯೋಣವೆಂದ
ಹಲವು ಹಾಗೇ ಅರೆಬರೆ ಕಾವಿನಲ್ಲಿವೆ
ಹಿಮದ ನಡಿಗೆಯ ಕಲಿಸಿದ್ದು ನೀನೇ
ಇದ್ದಕ್ಕಿದ್ದಂತೆ ಸಂಬAಧಗಳಲಿ ತಣ್ಣನೆಯ ಮೌನ
ಮೊದಲ ಮುತ್ತಿನ ಮೊದಲ ಅಪ್ಪುಗೆಯ
ಬಿಸುಪು ಕಳಕೊಂಡ ಮೈಯೀಗ ಕೊರಡು
ಅರಳಲಾರದೆ ಚಳಿಗೆ ಮುದುಡಿದ ಮೊಗ್ಗು
ಹೊರಗೆ ಅಂಗಳದಲಿ ನಾಟಕ ನಡೆಯುತಿದೆ
ಸಭಾಸದರ ಚಂಚಲತೆ, ನಿಮಿಷಕ್ಕೊಮ್ಮೆ
ಮೊಬೈಲು ಕೂಗುವುದು, ಇವರು ಒಳಹೊಕ್ಕು
ಮತ್ತೆ ಈ ಲೋಕಕ್ಕೆ ಬರುವುದು
ಇದ ಕಂಡ ಚಂದ್ರಮತಿ ತನ್ನ ವಿಲಾಪ
ನಿಲ್ಲಿಸಿ ಒತ್ತರಿಸಿದ ದುಃಖದಲಿ ನೋಡುತಿದ್ದಾಳೆ
ತನ್ನ ಮಗುವ; ಹಾವಿನ ಕುಟುಕು, ತನ್ನ ಶೋಕ
ಯಾರಿಗೆ ಅರುಹುವುದೆಂದು ದಿಕ್ಕೆಟ್ಟು
ಇಷ್ಟು ಸಾಕೆಂದು ಮೈಮುರಿಯುತ್ತಾ
ಬಾಯಿತೆರೆದು ಆಕಳಿಸುತ್ತಾ
ಇರುವ ಜನ
ಒದರಿ ಒಮ್ಮೆ ಹೋಗೋಣ ಬಾ
ಕಾಲು ನಡೆದಲ್ಲಿಗೆ, ಕೈ ಬೆರಳು ತೋರಿದಲ್ಲಿಗೆ
ಆದ ಗಾಯವ ಮರೆಯುವುದು ಹೇಗೆ?
ಹಚ್ಚೆ ಹಸಿರ ಕೊರೆತ ಶಾಶ್ವತ
ಎಲ್ಲೆಡೆಯಿಂದ ಕರ್ಣನಿಗೆ ಖೆಡ್ಡಾ
ಲೋಕದಲ್ಲಿ ಒಟ್ಟಿನಲಿ ಕೆಟ್ಟವನಿಗೆ ಕೆಳೆಯಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.