ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯದ ಒಕ್ಕೊರಲು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 19:39 IST
Last Updated 24 ನವೆಂಬರ್ 2017, 19:39 IST
ಅಭಿವ್ಯಕ್ತಿ ಸ್ವಾತಂತ್ರ್ಯದ ಒಕ್ಕೊರಲು
ಅಭಿವ್ಯಕ್ತಿ ಸ್ವಾತಂತ್ರ್ಯದ ಒಕ್ಕೊರಲು   

ಮೈಸೂರು: ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಸಮ್ಮೇಳನವನ್ನು ಗುರ್ತಿಸುವ ಹಾಗೂ ರೂಪಿಸುವ ಪ್ರಯತ್ನಗಳು ನುಡಿಹಬ್ಬದ ವೇದಿಕೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾದವು.

ಸಮ್ಮೇಳನದ ಅಧ್ಯಕ್ಷ ಚಂಪಾ ಅವರಿಗೆ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರವನ್ನು ಮಾಡಿದ ನಿಕಟಪೂರ್ವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ, ’ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ಕುವೆಂಪು ಸ್ಮರಣೆಯಲ್ಲಿ ನಡೆಯುತ್ತಿರುವ ಈ ಸಮ್ಮೇಳನ ಅಭಿವ್ಯಕ್ತಿ ಸ್ವಾತಂತ್ರ್ಯದ ರಣಕಹಳೆ ಆಗಬೇಕು’ ಎಂದು ಆಶಿಸಿದರು.

ಮಾತು ಮತೀಯವಾಗುತ್ತಿರುವ, ಭಾಷೆ ಭ್ರಷ್ಟವಾಗಿರುವ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ. ನಾಲಗೆ, ಕೈಕಾಲು, ಕತ್ತು ಕತ್ತರಿಸಲು ಕರೆನೀಡುವ ಸಾಂಸ್ಕೃತಿಕ ಸರ್ವಾಧಿಕಾರದ ಕಾಲದಲ್ಲಿ ನಾವಿದ್ದು, ಇದನ್ನು ತೊಡೆದುಹಾಕುವುದು ಇಂದಿನ ಜರೂರು ಎಂದರು.

ADVERTISEMENT

ಸಮ್ಮೇಳನದ ಸಂಘಟನೆಯ ನೇತೃತ್ವ ವಹಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ. ಮಹದೇವಪ್ಪ ಅವರು ತಮ್ಮ ಸ್ವಾಗತ ಭಾಷಣದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಅಗತ್ಯವನ್ನು ಸೂಚ್ಯವಾಗಿ ಪ್ರಸ್ತಾಪಿಸಿದರು.

’ಸಾಹಿತ್ಯ ಪರಿಷತ್ತು ಧಾರ್ಮಿಕ ಪರಿಷತ್ತು ಅಲ್ಲ. ನಾಡಿನ ಜನರ ಸಮಸ್ತ ಆಶೋತ್ತರಗಳ ಚರ್ಚೆಗೆ ವೇದಿಕೆಯಾಗುವ ಪರಿಷತ್‌ನ ಸಮ್ಮೇಳನ, ಸಂವಿಧಾನದ ಆಶಯಗಳನ್ನು ಬಲಪಡಿಸುವ ಧ್ಯೇಯ ಹೊಂದಿದೆ. ಭಾರತೀಯ ಗಣತಂತ್ರದಲ್ಲಿ ಪ್ರಬಲ ನಾಡನ್ನಾಗಿ ಹೊರಹೊಮ್ಮಿಸುವ ಆಶಯ ಸಮ್ಮೇಳನದ ಹಿಂದಿದೆ’ ಎಂದರು.

ಸಮ್ಮೇಳನವನ್ನು ಉದ್ಘಾಟಿಸಿದ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಮ್ಮ ಸರ್ಕಾರ ಬೆಂಬಲ ನೀಡಲಿದೆ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಚಂಪಾ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿಲ್ಲಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ’ದೀಪ ಹಚ್ಚುವ ಸಮಯದಲ್ಲಿ ನನ್ನ ಕೈ ಹಿಡೀರಿ ಎಂದು ಮುಖ್ಯಮಂತ್ರಿ ಕರೆದರು. ನಾನು ಅವರ ಕೈ ಹಿಡಿದೆ. ದೀಪ ಹಚ್ಚುವವರ ಕೈಗಳನ್ನು ನಾವು ಹಿಡಿಯಬೇಕಿದೆ, ಬೆಂಕಿ ಹಚ್ಚುವ ಕೈಗಳಿಂದ ದೂರ ಉಳಿಯಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.