ಮಂಡ್ಯ: ನಾಡಗೀತೆ, ರೈತ ಗೀತೆಯ ಇಂಪಾದ ಆಲಾಪನದ ಜೊತೆಗೆ ನಾಡು–ನುಡಿಯ ಬಗ್ಗೆ ಕೆಚ್ಚು ತುಂಬುವ, ಕನ್ನಡದ ಸೇವಕರನ್ನು ಬಡಿದೆಬ್ಬಿಸುವ ಮಾತುಗಳು. ಸಂವಿಧಾನದ ಪೀಠಿಕೆಯ ಓದು; ಇವೆಲ್ಲದರ ಜೊತೆಯಲ್ಲಿ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯಲ್ಲಿ ಮಂಡ್ಯದ ಜನರ ಭಾಷಾಭಿಮಾನ, ಹೋರಾಟದ ಕೆಚ್ಚಿನ ಬಗ್ಗೆ ಶ್ಲಾಘನೆಯೂ ವ್ಯಕ್ತವಾಯಿತು.
ಜಿಲ್ಲೆಗೆ ಮೂರು ದಶಕದ ನಂತರ ಒಲಿದಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲಿನ ಸ್ಯಾಂಜೊ ಆಸ್ಪತ್ರೆಯ ಹಿಂಭಾಗದಲ್ಲಿ ಸಾವಿರಾರು ಜನರ ನಡುವೆ ಶುಕ್ರವಾರ ಅತ್ಯುತ್ಸಾಹದಿಂದ ಆರಂಭಗೊಂಡಿತು.
ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆಯ ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಮಹಾಮಂಟಪದಲ್ಲಿ ನಡೆದ ಸಮಾರಂಭಕ್ಕೆ ಸಾಕ್ಷಿಯಾಗಲು ಮಂಡ್ಯದ ಸಾವಿರಾರು ಮಂದಿಯ ಜೊತೆಯಲ್ಲಿ ನಾಡಿನ ಉದ್ದಗಲದಿಂದ ಮತ್ತು ವಿದೇಶದಿಂದ ಬಂದಿದ್ದವರು ಸಾಕ್ಷಿಯಾಗಿದ್ದರು.
ಸಚಿವರು, ಸಾಹಿತಿಗಳು ಸೇರಿದಂತೆ ಮಾತನಾಡಿದ ಪ್ರತಿಯೊಬ್ಬರೂ ಮಂಡ್ಯದ ಜನರು ಭಾಷೆಯನ್ನು ಪ್ರೀತಿಸುವ ಬಗೆಯನ್ನು ಬಣ್ಣಿಸಿದರು. ಅದಕ್ಕೆ ಪ್ರತಿಯಾಗಿ ಸಭಿಕರಿಂದ ಚಪ್ಪಾಳೆ, ಶಿಳ್ಳೆ ಕೇಳಿ ಬಂತು.
ಮಾಲ್ನಂತೆ ಪುಸ್ತಕ ಸಂತೆಗೆ ಕರೆದುಕೊಂಡು ಹೋಗಿ: ‘ವಿಶೇಷ ದಿನಗಳಲ್ಲಿ ಮಕ್ಕಳನ್ನು ಮಾಲ್ ಮತ್ತು ಐಸ್ ಕ್ರೀಂ ಪಾರ್ಲರ್ಗಳಿಗೆ ಕರೆದುಕೊಂಡು ಹೋಗುವಂತೆಯೇ, ಪುಸ್ತಕ ಪ್ರದರ್ಶನ ಮತ್ತು ಸಾಹಿತ್ಯ ಕಾರ್ಯಕ್ರಮಗಳಿಗೂ ಕರೆದುಕೊಂಡು ಹೋಗಿ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪೋಷಕರಿಗೆ ಸಲಹೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭಾಷೆ ಕಲಿಯುವಂತೆ ಮಕ್ಕಳನ್ನು ಪ್ರೇರೇಪಿಸಬೇಕು. ಎಲ್ಲರೂ ಆದಷ್ಟು ಹೆಚ್ಚು ಭಾಷೆ ಕಲಿಯಲು ಮುಂದಾಗಬೇಕು. ಬೇರೆ ಭಾಷೆಗಳನ್ನು ಕಲಿಯುವುದರಿಂದ ನಮ್ಮ ಭಾಷೆ ಹೆಚ್ಚು ಬೆಳೆಯುತ್ತದೆ’ ಎಂದರು.
‘ಮಂಡ್ಯದ ಗಂಡು... ಎಂಬ ಹಾಡು ಕೇಳಿದಾಗಲೆಲ್ಲ ಅದು ಅಂಬರೀಷ್ ಅವರಿಗೆ ಸೀಮಿತವಾದದ್ದು ಎಂದು ತಿಳಿದುಕೊಂಡಿದ್ದೆ. ಆದರೆ, ಮಂಡ್ಯದವರು ಗಟ್ಟಿಗರು ಎಂದು ಇಲ್ಲಿಗೆ ಬಂದ ಮೇಲೆ ಗೊತ್ತಾಯಿತು’ ಎಂದಾಗ ಭರ್ಜರಿ ಚಪ್ಪಾಳೆಗಳು ಬಿದ್ದವು.
‘ಸಾಹಿತ್ಯ ಸಮ್ಮೇಳನಗಳು ಪಾಶ್ಚಾತ್ಯ ಸಂಸ್ಕೃತಿಯನ್ನು ಮೆಟ್ಟಿ ನಿಲ್ಲಲು ನೆರವಾಗಿವೆ. ಕನ್ನಡ ಭಾಷೆ ಮಾತ್ರವಲ್ಲ, ಸಂಸ್ಕೃತಿಯ ಪ್ರತೀಕ’ ಎಂದು ಹೇಳಿದ ಅವರು ‘ಹಸುರಿನ ರಾಶಿಯ ಚಂದ... ಮಕ್ಕಳ ನಲಿವಿನ್ಯಾಗ...’ ಎಂಬ ಹಾಡು ಹಾಡಿ ಆಶುಕವಿಯಾದರು.
ಆಶಯ ನುಡಿಗಳನ್ನಾಡಿದ ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ್ ಜೋಶಿ, ‘ಮಂಡ್ಯದ ಜನ ಮತೀಯ ಬಾಂಧವ್ಯ, ಕನ್ನಡದ ಕೆಚ್ಚು ಇರುವ ಕಲಿಗಳು’ ಎಂದು ಬಣ್ಣಿಸಿದರು.
‘ಕನ್ನಡ ಕಲಿಕೆಯಲ್ಲಿ ಆಸಕ್ತಿ ಕಡಿಮೆಯಾಗಲು ಕಾರಣವೇನೆಂದು ಹುಡುಕಬೇಕಾಗಿದೆ. ಕೇಂದ್ರ ಸರ್ಕಾರದ ಪರೀಕ್ಷೆಗಳು ಕನ್ನಡದಲ್ಲಿ ನಡೆಯುತ್ತಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದು ಹೇಳಿದರು.
ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ, ‘ಎಲ್ಲರನ್ನು ಬಡಿದೆಬ್ಬಿಸಲು ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿರಬೇಕು. ಆ ಮೂಲಕ ದ್ವೇಷ-ಕ್ಲೇಶ ಇಲ್ಲವಾಗಿಸಬೇಕು’ ಎಂದರು.
ಸಮ್ಮೇಳನದ ಲಾಂಛನವುಳ್ಳ ಅಂಚೆಚೀಟಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಸರ್ವಾಧ್ಯಕ್ಷ ಗೊ.ರು.ಚನ್ನಬಸಪ್ಪ, ಪ್ರೊ.ಚಂದ್ರಶೇಖರ ಕಂಬಾರ, ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ, ಸಚಿವರಾದ ಶಿವರಾಜ ತಂಗಡಗಿ, ಡಾ. ಎಚ್.ಸಿ.ಮಹಾದೇವಪ್ಪ, ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕರಾದ ರುದ್ರಪ್ಪ ಲಮಾಣಿ, ರಮೇಶ್ ಬಂಡಿಸಿದ್ದೇಗೌಡ, ಮಧು ಮಾದೇಗೌಡ, ಪಿ.ಎಂ. ನರೇಂದ್ರ ಸ್ವಾಮಿ, ದಿನೇಶ್ ಗೂಳಿಗೌಡ, ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ.ಮಂಜು, ಕೆ.ಎಂ.ಉದಯ, ಕೆ.ವಿವೇಕಾನಂದ, ರವಿಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಳಾ, ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನೂಪ್ ಕುಮಾರ್, ಪ್ರಾದೇಶಿಕ ಆಯುಕ್ತ ರಮೇಶ್, ವಲಯ ಐಜಿಪಿ ಎಂ.ಬಿ. ಬೋರಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಕೆ.ಧರಣಿದೇವಿ ಮಾಲಗತ್ತಿ, ನಗರಸಭೆ ಅಧ್ಯಕ್ಷ ಪ್ರಕಾಶ್, ಮುಖಂಡ ಕೆ.ಎಚ್.ಮುನಿಯಪ್ಪ, ಕವಿ ಐ.ಜಿ.ಸನದಿ, ಕಸಾಪ ಮಂಡ್ಯ ಘಟಕದ ಸಂಚಾಲಕಿ ಮೀರಾ ಶಿವಲಿಂಗಯ್ಯ, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳ ಅಧ್ಯಕ್ಷ ಬಿ.ಬೋರೇಗೌಡ, ಬೂದನೂರು ಗ್ರಾ.ಪಂ.ಅಧ್ಯಕ್ಷೆ ಮಾನಸ, ಬೇಲೂರು ಗ್ರಾ.ಪಂ. ಅಧ್ಯಕ್ಷೆ ಸುವರ್ಣಾವತಿ, ಉಮ್ಮಡಹಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ್ ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಕುಮಾರ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.