ADVERTISEMENT

ನಾಳೆ ಲೇಖನಾ, ಪುಣ್ಯಶ್ರೀ ‘ಗೆಜ್ಜೆಪೂಜೆ’

ಪ್ರಜಾವಾಣಿ ವಿಶೇಷ
Published 12 ಮೇ 2023, 21:44 IST
Last Updated 12 ಮೇ 2023, 21:44 IST
ಲೇಖನಾ ಮತ್ತು ಪುಣ್ಯಶ್ರೀ
ಲೇಖನಾ ಮತ್ತು ಪುಣ್ಯಶ್ರೀ   

ಸಾಧನ ಸಂಗಮ ನೃತ್ಯ ಕೇಂದ್ರದ ಸಂಸ್ಥಾಪಕರಾದ ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ. ಸಾಧನಾಶ್ರೀ ಪಿ. ಅವರ ಶಿಷ್ಯೆಯರಾದ ಲೇಖನಾ ಎಂ. ಹಾಗೂ ಪುಣ್ಯಶ್ರೀ ಎ.ಎಸ್‌ ಅವರು, ಇದೇ ಭಾನುವಾರ (ಮೇ.14) ರಂದು ‘ಗೆಜ್ಜೆ ಪೂಜೆ’ ನೆರವೇರಿಸಿ, ಭರತನಾಟ್ಯ ಪ್ರದರ್ಶನ ನೀಡುತ್ತಿದ್ದಾರೆ.

ಅಂದು ಸಂಜೆ 5.30ಕ್ಕೆ ಬಸವೇಶ್ವರ ನಗರದ ಸಾಧನಾ ಸಂಗಮದ ರಂಗೋಪನಿಷತ್ ಸಭಾಂಗಣದಲ್ಲಿ ‘ಗೆಜ್ಜೆ ಪೂಜೆ’ ನೃತ್ಯ ಕಾರ್ಯಕ್ರಮ ನಡೆಯಲಿದೆ.

ಗೆಜ್ಜೆಪೂಜೆ ನಟುವಾಂಗದಲ್ಲಿ ಡಾ. ಸಾಧನಾಶ್ರೀ ಪಿ ಮತ್ತು ವಿದುಷಿ ರಂಜನಾ ನಾಗರಾಜ್, ಗಾಯನದಲ್ಲಿ ಡಾ. ರಮ್ಯಾ ಸೂರಜ್, ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜನ್, ಕೊಳಲು ವಾದನದಲ್ಲಿ ವಿದ್ವಾನ್ ಶಶಾಂಕ್ ಜೋಡಿದಾರ್, ಪಿಟೀಲು ವಾದನದಲ್ಲಿ ವಿದ್ವಾನ್ ಕೃಷ್ಣ ಕಷ್ಯಪ್ ಪಾಲ್ಗೊಳ್ಳಲಿದ್ದಾರೆ.

ADVERTISEMENT

ನೃತ್ಯಗಾರ್ತಿಯರ ಪರಿಚಯ:

ಲೇಖನಾ ಎಂ. ಅವರು ಕಡಂಬಿ ವಿದ್ಯಾ ಕೇಂದ್ರದ 10ನೇ ತರಗತಿ ವಿದ್ಯಾರ್ಥಿನಿ. ಪುಣ್ಯಶ್ರೀ ಎ.ಎಸ್. ಅವರು ಮೌರ್ಯ ಪಬ್ಲಿಕ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿನಿ. ಇವರಿಬ್ಬರೂ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ನಡೆಸುವ 5ನೇ ಹಂತದ ಪರೀಕ್ಷೆಯನ್ನು ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಜೂನಿಯರ್ ಪರೀಕ್ಷೆಯಲ್ಲಿ ಶೇ 90 ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಸಾಧನಾ ಸಂಗಮದ ಬಹುತೇಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿರುವ ಇವರು ಓದಿನಲ್ಲೂ ಉತ್ತಮ ವಿದ್ಯಾರ್ಥಿನಿಯರು ಅನಿಸಿಕೊಂಡಿದ್ದಾರೆ.

ಲೇಖನಾ ನೃತ್ಯದಲ್ಲಷ್ಟೇ ಅಲ್ಲದೇ ಅಬಾಕಸ್ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಅಲ್ಲದೆ, ಸದ್ಗುರು ಸಂಗೀತ ಶಾಲೆಯ ಗುರು ವಿದುಷಿ ವಿಜಯಲಕ್ಷ್ಮಿ ರಾಜೀವ್ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಹಾಗೆಯೇ ಪುಣ್ಯಶ್ರೀ ಅವರು ಕ್ರೀಡೆ, ರಂಗಭೂಮಿ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದು, ಮೃದಂಗ ಅಭ್ಯಾಸ ಮುಂದುವರಿಸಿದ್ದಾರೆ.

ಗೆಜ್ಜೆಪೂಜೆ

ನಾಟ್ಯ ಕಲಾವಿದ್ಯಾರ್ಥಿಗಳಿಗೆ ಕಲಿಕೆಯ ನಡುವೆ ’ಗೆಜ್ಜೆಪೂಜೆ‘ ಪರೀಕ್ಷಾರ್ಥ ಪ್ರದರ್ಶನ ಇದ್ದಂತೆ. ಈ ಸವಾಲು ಸ್ವೀಕರಿಸಿ, ಜೊತೆಯಾಗಿ ಹೆಜ್ಜೆ ಹಾಕಲು ಸಿದ್ಧರಾಗಿದ್ದಾರೆ ಲೇಖನಾ ಮತ್ತು ಪುಣ್ಯಶ್ರೀ. ಬೆಂಗಳೂರಿನ ಸಾಧನಾ ಸಂಗಮ ನೃತ್ಯ ಕೇಂದ್ರದ ಸಂಸ್ಥಾಪಕರು, ರಾಜ್ಯೋತ್ಸವ ಪುರಸ್ಕೃತ ಗುರು ಜ್ಯೋತಿ ಪಟ್ಟಾಭಿರಾಮ್ ಮತ್ತು ಗುರು ಡಾ. ಸಾಧನಾಶ್ರೀ ಪಿ. ಅವರ ಮಾರ್ಗದರ್ಶನ ಹಾಗೂ ಪೋಷಕರ ಪ್ರೋತ್ಸಾಹ ಇವರ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ಲೇಖನಾ ಮತ್ತು ಪುಣ್ಯಶ್ರೀ
ಲೇಖನಾ ಮತ್ತು ಪುಣ್ಯಶ್ರೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.