ADVERTISEMENT

ಜ್ಯೋತಿಷ ದೀಪ | ವೇದಾಂಗಗಳಲ್ಲಿ ಪ್ರಮುಖ ಅಂಗ, ಜೀವನದ ಕಣ್ಣು ಜ್ಯೋತಿಷ್ಯ

ಭಾರತಿ ರವೀಂದ್ರ
Published 9 ಜೂನ್ 2025, 7:38 IST
Last Updated 9 ಜೂನ್ 2025, 7:38 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಜ್ಯೋತಿಷಶಾಸ್ತ್ರ ಎಂದರೆ ವಿಷಯಗಳ ಮೇಲೆ ಬೆಳಕು ಚೆಲ್ಲುವ ಶಾಸ್ತ್ರ. ಇದರ ಸಹಾಯದಿಂದ ನಮ್ಮ ಜೀವನದ ಮಾರ್ಗವನ್ನು ಸರಿಯಾದ ರೀತಿಯಲ್ಲಿ ಕಂಡುಕೊಳ್ಳಬಹುದು. ಈ ಜ್ಯೋತಿಷಶಾಸ್ತ್ರವು ಬಹಳ ಪುರಾತನವಾದ ಶಾಸ್ತ್ರ. ಇದರ ಉಲ್ಲೇಖವನ್ನು ನಾವು ವೇದಗಳಲ್ಲೇ ಕಾಣುತ್ತೇವೆ. ಹಾಗಾಗಿ ಜ್ಯೋತಿಷವನ್ನು ವೇದಾಂಗವೆಂದೂ ಕರೆಯುವರು. ವೇದವು ಷಡಂಗಗಳಿಂದ ಕೂಡಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆ ಆರು ಅಂಗಗಳು ಯಾವುವೆಂದರೆ:

ಶಿಕ್ಷಾ ವ್ಯಾಕರಣಂ ಛಂದೋ ನಿರುಕ್ತಂ ಜ್ಯೋತಿಷಂ ತಥಾ |
ಕಲ್ಪಶ್ಚೇತಿ ಷಡಂಗಾನಿ ವೇದಸ್ಯಾಹುರ್ಮನೀಷಿಣಃ ||

ADVERTISEMENT

ಎಂದರೆ, ಶಿಕ್ಷಾ, ಕಲ್ಪ, ನಿರುಕ್ತ, ವ್ಯಾಕರಣ, ಛಂದಸ್ಸು ಹಾಗೂ ಜ್ಯೋತಿಷ – ಇವೇ ವೇದದ ಆರು ಭಾಗಗಳು. ಈ ಆರೂ ಅಂಗಗಳನ್ನು ವೇದಪುರುಷನಿಗೆ ಸಮನ್ವಯ ಮಾಡಲಾಗಿದೆ. ಛಂದಸ್ಸು ವೇದಪುರುಷನ ಪಾದ, ವ್ಯಾಕರಣ – ಮುಖ, ಶಿಕ್ಷಾ – ಮೂಗು, ನಿರುಕ್ತ – ಕಿವಿ, ಕಲ್ಪ – ಅವನ ಕೈಗಳಾದರೆ, ಜ್ಯೋತಿಷವನ್ನು ಅವನ ಕಣ್ಣುಗಳಿಗೆ ಸಮನ್ವಯ ಮಾಡಲಾಗಿದೆ. ಹೇಗೆ ಕಣ್ಣುಗಳು ಮಾರ್ಗದರ್ಶನ ಮಾಡಲು ಸಹಕಾರಿಯಾಗಿರುವುದೋ ಹಾಗೆ ವ್ಯಕ್ತಿಯ ಜೀವನದುದ್ದಕ್ಕೂ ಮಾರ್ಗದರ್ಶನ ಮಾಡುವ ಶಾಸ್ತ್ರವಾಗಿದೆ ಈ ಜ್ಯೋತಿಷಶಾಸ್ತ್ರ. ಅದಕ್ಕಾಗಿಯೇ ಇದನ್ನು ವಿಷಯಗಳ ಮೇಲೆ ಬೆಳಕು ಚೆಲ್ಲುವ ಶಾಸ್ತ್ರ ಎಂದು ಕರೆದಿರುವುದು. ಇದರಿಂದ ನಾವು ತಿಳಿಯಬಹುದಾದ ವಿಷಯವೆಂದರೆ, ಜ್ಯೋತಿಷಶಾಸ್ತ್ರವು ಎಂದಿಗೂ ಕಾಲ್ಪನಿಕವಲ್ಲ, ವೇದಾಂಗದಿಂದಲೇ ಹುಟ್ಟಿತು ಎಂದು. ಈ ಜ್ಯೋತಿಷಶಾಸ್ತ್ರವನ್ನು ಇದುವರೆಗೂ ಸಂಸ್ಕರಿಸಿ, ಸಂರಕ್ಷಿಸಿ, ನಮ್ಮವರೆಗೂ ಕಾಪಿಟ್ಟು ಕೊಟ್ಟವರು ಹದಿನೆಂಟು ಜನ ಋಷಿಮುನಿಗಳು. ಇವರನ್ನು ‘ಜ್ಯೋತಿಷಶಾಸ್ತ್ರದ ಪ್ರವರ್ತಕರು’ ಎಂದು ಹೇಳಿದೆ. ಆ ಹದಿನೆಂಟು ಋಷಿಮುನಿಗಳನ್ನು ಸ್ಮರಿಸುವ ಶ್ಲೋಕ ಹೀಗಿದೆ:

ಸೂರ್ಯಃ ಪಿತಾಮಹೋ ವ್ಯಾಸೋ ವಸಿಷ್ಠೋತ್ರಿಃ ಪರಾಶರಾಃ
ಕಶ್ಯಪೋ ನಾರದೋ ಗರ್ಗೋ ಮರೀಚಿರ್ಮನುರಂಗಿರಾಃ |
ಲೋಮಶಃ ಪೌಲಶಶ್ಚೈವ ಚ್ಯವನೋ ಯವನೋ ಭೃಗುಃ |
ಶೌನಕೋ ಅಷ್ಟಾದಶಶ್ಚೈತೇ ಜ್ಯೋತಿಷಶಾಸ್ತ್ರಪ್ರವರ್ತಕಾಃ ||

ಈ ಹದಿನೆಂಟು ಮುನಿಗಳು ಇಂದಿಗೂ ನಮನೀಯರಾಗಿದ್ದಾರೆ. ಈ ಅಷ್ಟಾದಶ ಪ್ರವರ್ತಕರ ಸಿದ್ಧಾಂತಗಳು ಕಾಲವಶದಿಂದ ಕೆಲವು ಭಾಗ ನಶಿಸುತ್ತಾ ಬಂದರೂ, ವರಾಹಮಿಹಿರ, ಭಟ್ಟೋತ್ಪಲ, ಪರಾಶರರು ಈ ಶಾಸ್ತ್ರ ನಾಶವಾಗದಂತೆ ಗ್ರಂಥಗಳನ್ನು ರಚಿಸಿ ಮಹದುಪಕಾರ ಮಾಡಿದ್ದಾರೆ.

ಇದುವರೆಗೂ ಜ್ಯೋತಿಷ್ಯದ ಉಲ್ಲೇಖ ಎಲ್ಲಿ ಬಂದಿದೆ? ಇದು ಎಷ್ಟು ಪ್ರಾಚೀನ ಎಂದು ತಿಳಿದ ನಂತರ, ಇಷ್ಟು ಬೃಹತ್ತಾದ ಶಾಸ್ತ್ರವನ್ನು ಹೇಗೆ ತಿಳಿಯುವುದು? ಹೇಗೆ ಓದುವುದು? ಎಂದು ಈಗ ನೋಡೋಣ.

ಅಧ್ಯಯನ:

ಜ್ಯೋತಿಷವನ್ನು ಅಧ್ಯಯನ ಮಾಡಲು ಅನುಕೂಲವಾಗುವಂತೆ ಇದನ್ನು ಮೊದಲು ಮೂರು ಭಾಗಗಳನ್ನಾಗಿ ವಿಂಗಡಿಸಲಾಯಿತು. ಇದನ್ನೇ ‘ತ್ರಿಸ್ಕಂಧಜ್ಯೋತಿಷ್ಯ’ ಎಂದು ಕರೆಯುವುದು. ಆ ಮೂರು ವಿಭಾಗಗಳು ಯಾವುದೆಂದರೆ:

  • ಸಿದ್ಧಾಂತ

  • ಸಂಹಿತೆ

  • ಹೋರಾ

ಇವುಗಳನ್ನು ಈಗ ವಿವರವಾಗಿ ತಿಳಿಯೋಣ.

1. ಸಿದ್ಧಾಂತ: ಸಿದ್ಧಾಂತ ವಿಭಾಗವು ಖಗೋಳಶಾಸ್ತ್ರ(Astronomy)ದ ವಿವರಣೆಯಾಗಿದೆ.

ಖಗೋಳ ವಿದ್ಯಮಾನಗಳಾದ ಗ್ರಹ, ನಕ್ಷತ್ರ, ಗ್ರಹಣಗಳ ಲೆಕ್ಕಾಚಾರವನ್ನು ಈ ವಿಭಾಗದಲ್ಲಿ ತಿಳಿಯಬಹುದು. ಗ್ರಹಗಳು ಈಗ ಎಲ್ಲಿ ಚಲಿಸುತ್ತಿವೆ? ನಕ್ಷತ್ರಗಳು ಎಷ್ಟು ದೂರದಲ್ಲಿವೆ ಸೂರ್ಯನಿಂದ? ಇಂತಹ ಮಾಹಿತಿಗಳನ್ನು ತಿಳಿಸುವುದು ಸಿದ್ಧಾಂತ. ಈ ಸಿದ್ಧಾಂತ ಭಾಗಕ್ಕೆ ವರಾಹಮಿಹಿರ ಹಾಗೂ ಆರ್ಯಭಟರು ಒಳ್ಳೆಯ ಮಾಹಿತಿಗಳನ್ನು ಒದಗಿಸಿರುವರು. ಇವರ ಕೊಡುಗೆ ಅಪಾರ.

2. ಸಂಹಿತೆ: ಈ ಭಾಗದಲ್ಲಿ ನಾವು ಜನಸಾಮಾನ್ಯರಿಗೆ ಬೇಕಾದ ವಿಚಾರ ಹಾಗೂ ದೇಶ, ರಾಜ್ಯದ ಭವಿಷ್ಯವನ್ನು ತಿಳಿಯಲು ಸಾಧ್ಯವಿದೆ. ಜನಸಾಮಾನ್ಯರಿಗೆ ಉತ್ತು-ಬಿತ್ತಲು ಬೇಕಾದ ಮಳೆ-ಬೆಳೆಗಳ ವಿಚಾರ. ಭೂಕಂಪ, ಗಾಳಿ-ಮೋಡಗಳ ವಿಚಾರ ಎಲ್ಲವನ್ನೂ ತಿಳಿಸಿಕೊಡುವುದು. ಜೊತೆಗೆ ದೇಶ, ರಾಜ್ಯಕ್ಕೆ ಬರುವ ಆಪತ್ತುಗಳ ಬಗ್ಗೆಯೂ ತಿಳಿಸಿಕೊಡುವುದು.

3. ಹೋರಾ: ಈ ಹೋರಾಭಾಗದ ಅಧ್ಯಯನವೇ ಜ್ಯೋತಿಷದ ಭಾಗವಾಗಿದೆ. ಇಲ್ಲಿ ಗ್ರಹಗಳ ವಿಚಾರ, ರಾಶಿ, ನಕ್ಷತ್ರಗಳ ವಿಚಾರಗಳನ್ನೆಲ್ಲಾ ಹೇಳಲಾಗಿದೆ. ಇದನ್ನು ಚೆನ್ನಾಗಿ ತಿಳಿದುಕೊಂಡರೆ, ಒಬ್ಬ ವ್ಯಕ್ತಿಯ ಮೇಲೆ ಇವುಗಳ ಪ್ರಭಾವ ಹೇಗಾಗುವುದು ಎಂದು ಹೇಳಲು ಸಾಧ್ಯವಾಗುವುದು. ಹಗಲು-ರಾತ್ರಿಗಳಲ್ಲಿ ನಡೆಯುವ ಎಲ್ಲಾ ಕೆಲಸಗಳ ಬಗ್ಗೆ ಮಾಹಿತಿ ನೀಡುವುದೇ ಹೋರಾ. ಹಗಲು-ರಾತ್ರಿ ಸತತವಾಗಿ ಎನ್ನಲು ‘ಅಹೋರಾತ್ರಿ’ ಎನ್ನುತ್ತೇವೆ. ಅಹೋರಾತ್ರಿಯಲ್ಲಿ, ಮಧ್ಯದ ಪದವನ್ನು ಪರಿಗಣಿಸಿ ‘ಹೋರಾಶಾಸ್ತ್ರ’ ಎಂದು ಪ್ರಸಿದ್ಧಿಯಾಗಿರುವುದು. ಈ ಹೋರಾಶಾಸ್ತ್ರಕ್ಕೆ ಪರಾಶರ ಪದ್ಧತಿಯೇ ಮೂಲ. ಈ ಪದ್ಧತಿಯೇ ಎಲ್ಲಕ್ಕೂ ಮೂಲವೆನ್ನಬಹುದು.

ಜ್ಯೋತಿಷ ಎಂದರೇನು? ಅದರ ಮೂಲವೆಲ್ಲಿ? ಅದರ ವಿಭಾಗಗಳು ಯಾವುವು? ಈ ವಿವರಗಳನ್ನು ನೋಡಿದೆವು. ಮುಂದಿನ ಸಂಚಿಕೆಯಲ್ಲಿ ಜ್ಯೋತಿಷಶಾಸ್ತ್ರದ ಇತರ ಪದ್ಧತಿಗಳನ್ನು ತಿಳಿಯೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.