ADVERTISEMENT

ರಾಹು ಹೊಡೆಯುವುದು ಅಂದರೆ ಏನು; ಅಜಿತ್ ಪವಾರ್ ಸಾವಿಗೆ ರಾಹು ಕಾರಣನಾ?

ಮಹಾಬಲಮೂರ್ತಿ ಕೊಡ್ಲೆಕೆರೆ
Published 5 ಫೆಬ್ರುವರಿ 2026, 1:05 IST
Last Updated 5 ಫೆಬ್ರುವರಿ 2026, 1:05 IST
<div class="paragraphs"><p>ಅಜಿತ್ ಪವಾರ್</p></div>

ಅಜಿತ್ ಪವಾರ್

   

(ಪಿಟಿಐ ಚಿತ್ರ)

ಭಾರತೀಯ ಜ್ಯೋತಿಷವು ಸಾವಿನ ಕುರಿತು ತಿಳಿಯಲು ಬೇಕಾದ ಕೆಲವು ಸನ್ನಿವೇಶಗಳ ಬಗ್ಗೆ ನಿಶ್ಚಿತ ಮಾಹಿತಿಗಳನ್ನು ಕೊಡುತ್ತದೆ. ವಾರದ ಹಿಂದೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ದುರಂತದಲ್ಲಿ ದಿಢೀರ್‌ ಸಾವಿಗೆ ತುತ್ತಾದರು. ರಿಯಲ್ ಎಸ್ಟೇಟ್  ಉದ್ಯಮಿಯಾಗಿ ತೊಡಗಿಸಿಕೊಂಡ ಕೆಲವೇ ವರ್ಷಗಳ ಅವಧಿಯಲ್ಲಿ ಯಾರೂ ಕಂಡರಿಯದ ಮಟ್ಟದ ಯಶಸ್ಸು ಸಂಪಾದಿಸಿ, ಅತಿ ದೊಡ್ಡ ಶ್ರೀಮಂತರ ಸಾಲು ಸೇರಿದ ಸಿ.ಜೆ.ರಾಯ್ ಕೆಲ ದಿನಗಳ ಹಿಂದೆ ಆದಾಯ ತೆರಿಗೆ ಸಂಬಂಧದ ವಿಚಾರಣೆಯ ವೇಳೆ ಏಕಾಂಗಿಯಾಗಿ ತನ್ನ ಕೋಣೆಗೆ ಹೋಗಿ ಪಿಸ್ತೂಲಿನ ಗುಂಡಿಗೆ ತನಗೆ ತಾನೇ ಎದೆ ಒಡ್ಡಿ, ಆತ್ಮಹತ್ಯೆ ಮಾಡಿಕೊಂಡರು. ಅಬ್ರಾಹಂ ಲಿಂಕನ್, ಜಾನ್ ಎಫ್‌.ಕೆನಡಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ  ಹಂತಕರ ಸಂಚಿಗೆ ಬಲಿಯಾದರು. ಸಂಜಯ್ ಗಾಂಧಿ ವಿಮಾನ ಅಪಘಾತದಿಂದ ಸಾವಿಗೆ ತುತ್ತಾದರು. ಹೆಮಿಂಗ್ವೆ, ಸಿಲ್ವಿಯಾ ಪ್ಲಾತ್ ಮುಂತಾದವರು ಬರಹಗಾರರು ಸಾವನ್ನ ಆತ್ಮಹತ್ಯೆಯಲ್ಲಿ ಸ್ವೀಕರಿಸಿದರು.

ADVERTISEMENT

ಕಣ್ಮುಚ್ಚಿ ತೆರೆಯುವುದರೊಳಗಡೆ ಸಾವಿನ ಕದ ತಟ್ಟಿದ ಲಕ್ಷಗಟ್ಟಲೆ ಜನರು, ಆ ಕಾಲದ ವರ್ತಮಾನಕ್ಕೆ ದೊಡ್ಡದೇ ಆಘಾತ ನಿರ್ಮಿಸಿ ಕರಗಿ ಹೋದವರು. ಬದುಕನ್ನು ಇನ್ನು ಎದುರಿಸಲಾಗದು ಎಂದು ನಾನಾ ಸ್ವರೂಪದಲ್ಲಿ ಜೀವನದ ದಾರಿಯನ್ನು ಆತ್ಮಹತ್ಯೆಯ ಮೂಲಕ ಶೂನ್ಯವಾಗಿಸಿಕೊಂಡವರು ಇದ್ದಾರೆ‌. ಈ ಮೊದಲು ಹಳೆ ತಲೆಮಾರಿನ ಜನ ‘ಓಹ್..,ರಾಹು ಹೊಡೆದಿರಬೇಕು ಮಾರಾಯ, ಒಳ್ಳೇ ಗಟ್ಟಿ ಆಳಾಗಿ ಚೆನ್ನಾಗಿ ಇದ್ದವ, ಏಕಾಏಕಿ ಹೋಗೇಬಿಟ್ಟ. ಛೇ!! ಯಾರಿಗೂ ಬೇಡ ಈ ಜೀವನ, ಎಲ್ಲವೂ ಕ್ಷಣಿಕ’ ಎಂದು ಹೇಳುವುದನ್ನು ನಾನು ಕೇಳಿಸಿಕೊಂಡಿದ್ದಿದೆ.

ರಾಹು ಹೊಡೆಯುವುದು ಅಂದರೆ ಏನು?

ಭಾರತೀಯ ಜ್ಯೋತಿಷ ವಿಜ್ಞಾನ, (ಕೆಲವು ಸೂಕ್ಷ್ಮ ಕಾಲ ಘಟ್ಟಗಳು ಸಂಧಿ ಸಂಕಟವಾಗಿ ರೂಪು ತಳೆಯುವಾಗ, ವಿಶಿಷ್ಟ ಶನಿ ಕಾಟದ ದಿನಗಳು ಮಾರಕ ಸ್ಥಿತಿಯಲ್ಲಿ ಹರಳುಗಟ್ಟಿಕೊಂಡಾಗ, ಜನ್ಮ‌ ಕುಂಡಲಿಯಲ್ಲಿ ಘಾತಕ ಶಕ್ತಿಯನ್ನು ಮರಣ ಸ್ಥಾನದಲ್ಲಾಗಲಿ, ಛಿದ್ರ ಸ್ಥಾನದಲ್ಲಾಗಲಿ, ಇಲ್ಲವೇ ನಷ್ಟದ ಮನೆಯಲ್ಲಿ ಕ್ರೂರ ಗ್ರಹಗಳು ಸ್ವತಃ ತಾವೇ ಭರಿಸಿಕೊಂಡಿದ್ದಾಗ) ವಿಷಮ ಗಳಿಗೆಗಳು ಕೂಡಿ ಬಂದರೆ, ಅಪಾಯಕ್ಕೆ ಬೇಕಾದ ಸಂದಿಗ್ಧತೆಗಳು ಥಟ್ಟನೆ ಹೇಗೆಲ್ಲ ಜೀವಕ್ಕೆ ವಿಷ ಕಕ್ಕಿಸುವ ಹೆಡೆಗಳಾಗಿ ಎದ್ದು ನಿಲ್ಲುತ್ತವೆ ಎಂಬುದನ್ನು ವಿಶದವಾಗಿ ವಿವರಿಸಿದೆ.

ವಿವರಿಸಲ್ಪಟ್ಟ ಹಲವಾರು ವಿಚಾರಗಳು, ವಿಸ್ಮಯ ಮೂಡಿಸುವಷ್ಟು ಸ್ಪಷ್ಟವಾದ ರೇಖಾ ಚಿತ್ರಗಳನ್ನು ಒದಗಿಸುತ್ತವೆ. ಆದರೆ ಸೂಕ್ಷ್ಮ ಪರಿಶೀಲನೆಗೆ ತಾಳ್ಮೆ ಬೇಕು. ಹುಟ್ಟಿದ ಸಂದರ್ಭದ ಜಾತಕ ಕುಂಡಲಿಯ ಸ್ಥಿತಿ ಗತಿಯ ಅಂಶಗಳು, ಸದ್ಯದ ವರ್ತಮಾನದ, ಹಾಲಿ ಗ್ರಹದ ಸ್ಥಿತಿಗತಿಗಳ ಮೇಲೆ ಹೇಗೆಲ್ಲ ತಮ್ಮದೇ ಆದ‌ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ ಎಂಬುದನ್ನು ಪರಿಶೀಲಿಸಿ ನಿರ್ಣಯ ತಳೆಯಬೇಕು.

ರಾಹು ರಕ್ತದೊತ್ತಡ, ಸಕ್ಕರೆ ಕಾಯಿಲೆ, ನಿಕೃಷ್ಟ ಮನೋ ಸ್ಥಿತಿ ಕುರಿತು ತಿಳಿಸಿದರೆ, ಶನಿ ಗ್ರಹವು ಎಲುಬು, ನರ ಮಂಡಲ, ಸ್ನಾಯು ಮಂಡಲದ ಬಗ್ಗೆ ತಿಳಿಸುತ್ತದೆ. ಚಂದ್ರನು ಅಪಾಯಕಾರಿ ಆತ್ಮಹತ್ಯೆಗೆ ಶೀಘ್ರ ವೇಗದೊಂದಿಗೆ ಮುನ್ನುಗ್ಗಿಸಿ ಬಿಡುತ್ತಾನೆ. ಆದರೆ ಕೆಲವು..,ಷರತ್ತುಗಳು ಹದಿಗಟ್ಟಿರುತ್ತವೆ. ಜತೆಗೆ ಒಬ್ಬನೇ ಕೂಡಾ ಅಸಹಜ ಸಾವಿಗೆ ಬೇಕಾದ ಹೆದ್ದಾರಿ ಒಂದನ್ನು ನಿರ್ಮಿಸಬಲ್ಲ.

ರಾಹು, ಕೇತು ಹಾಗೂ ಶನಿ ಗ್ರಹಗಳೂ ಚಂದ್ರನನ್ನು ‌ಅಸಹಜವಾದ ಸಾವಿಗೆ ಉದ್ರೇಕಿಸಬಲ್ಲವು. ಶನಿಯ ಜತೆಯಿಂದ ಚಂದ್ರ ಕ್ಯಾನ್ಸರ್‌ಗೆ ಕಾರಣನಾಗಬಲ್ಲ. ರಾಹುವಿನ ಮೂಲಕ ಏಕಾಏಕಿಯಾದ ಅವಘಡಗಳಿಗೆ ಕಾರಣನಾಗಬಲ್ಲ. ರಾಹು ಗ್ರಹದ ಯಜಮಾನತ್ವದ ಆರ್ದ್ರಾ ನಕ್ಷತ್ರದ ದಿನ ಸಿ.ಜೆ.ರಾಯ್ ಆತ್ಮಹತ್ಯೆ ಸಂಭವಿಸಿದೆ.

ಅಶುಭ ಗ್ರಹಗಳು ಯಾವವು?

ರವಿ, ಕುಜ, ಶನಿ, ರಾಹು ಹಾಗೂ ಕೇತು ಗ್ರಹಗಳು ಅಶುಭ ಗ್ರಹಗಳ ಗುಂಪಿಗೆ ಸೇರಿರುತ್ತವೆ. ಈ‌ ಗ್ರಹಗಳೊಂದಿಗೆ ಶುಭ ಗ್ರಹಗಳಾದ ಚಂದ್ರ, ಬುಧ, ಗುರು, ಶುಕ್ರ ಕೂಡಾ ಯಾವುದೇ ರೀತಿಯ ಸಂಬಂಧ ಪಡೆದವಾದರೆ, ಕೆಲವು ವಿಷಮ ಕ್ಷಣಕ್ಕೆ ವರ್ತಮಾನ ಬಾಯ್ತೆರೆದುಕೊಂಡಿತು ಅಂತಾದರೆ, ಈ ಶುಭ ಗ್ರಹಗಳೂ ಸಾವಿನ ಕುಣಿಕೆಯನ್ನು ದಿಢೀರಾಗಿ ನೇಯಬಲ್ಲವು. ಬಹು ಜನಪ್ರಿಯ ತಾರೆಯೊಬ್ಬರು ವಿದೇಶವೊಂದರಲ್ಲಿ ಏಕಾಏಕಿ ನೀರಿನ ಟಬ್‌ಗೆ ಬಿದ್ದು ಸಾವಿಗೀಡಾದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಸಾಯಲು ಬಲವಾದ ಕಾರಣಗಳೇ ಇರದಿದ್ದ ಸಂದರ್ಭ ಎಂದು ಇದನ್ನು ಸರಳವಾಗಿ ಹಾಗೆ ಅನ್ನಲಾಗದು. ಮೃಗಶಿರಾ ನಕ್ಷತ್ರದ ಭಾವ ಛೇದನ ರಾಶಿಗಳಲ್ಲಿ ಚಂದ್ರನ ವಿದಾಯ, ಆಗಮನ ಸಂಭವಿಸುವಾಗ, ಸೂರ್ಯ ಹಾಗೂ ಶನಿ ಗ್ರಹಗಳಿಗೆ ಕೆಲವು ವಿಷಮತೆಗಳು ಹರಳುಗಟ್ಟಿದರೆ, ಕ್ಷಣ ಮಾತ್ರದ ಘಾತಕ ಶಕ್ತಿ, ಸಾವಿನ ಮಂಟಪವನ್ನು ಕ್ಷಿಪ್ರ ಉಂಟುಮಾಡಬಹುದಾಗಿದೆ.

ಕುಜ ರಾಹು,ಶುಕ್ರಾದಿತ್ಯ, ರಾಹು ಬೃಹಸ್ಪತಿ ಸಂಧಿ ಇತ್ಯಾದಿ

ಕಳೆದ ತಿಂಗಳು 2025 ಮುಗಿದು 2026 ಹೊಸ ವರ್ಷವಾಗಿ ಬಂತು. ಈ ಎರಡೂ ವರ್ಷಗಳು ಒಂದೆಡೆ ಸಂಧಿಸುವ ಬಿಂದುವೇ ಸಂಧಿ. ಇದೇ ರೀತಿಯಲ್ಲಿ ಕುಜ ದಶಾ ಮುಗಿದು ರಾಹು ದಶಾ, ಇಲ್ಲಾ ಕುಜ ಮುಗಿದು ಗುರು ದಶಾದ ಕಾಲ ಘಟ್ಟ ಬರುವಾಗ, ಹಾಗೆಯೇ ಶುಕ್ರ ದಶಾ ಮುಗಿದು ರವಿ ದಶಾ ಬರುವಾಗ ಕ್ಷಿಪ್ರ ಅವಘಡಗಳು ಬರಬಹುದು. ಅರವತ್ತು, ಎಪ್ಪತ್ತು, ಎಪ್ಪತ್ತೈದು, ಎಂಭತ್ತು ವರ್ಷ ಮುಗಿಯುವ ಸಂದರ್ಭಗಳಲ್ಲಿ ಕೂಡಾ ಎಚ್ಚರಿಕೆ ಬೇಕು. ಈ ಕಾಲ ಘಟ್ಟ ಮರಣವನ್ನು ತರುತ್ತವೆ ಎಂದಲ್ಲ. ದಿಢೀರನೆ ಕೆಲವು ಅನಿರೀಕ್ಷಿತ ಏಟುಗಳನ್ನು ತರುವ ಅಪಾಯದ ವರ್ತಮಾನವನ್ನು ನಿರ್ಮಿಸಿಬಿಡುತ್ತವೆ. ಆದರೆ ಷರತ್ತಿನ ಕೆಲ ಸಂಯೋಜನೆಗಳು ಜಾತಕ ಕುಂಡಲಿಯಲ್ಲಿ ಇದ್ದರೆ ಇವು ಅಮೃತದಂತೆ ಅನ್ವಯಿಸಿ, ಅಪಾಯದ ಕಾರ್ಮೋಡಗಳು ಗಾಳಿಗೆ ಚದುರಿ ಹೋಗುವ ಹಾಗೆ ಸಾವಿನ ಅಪಾಯ ಕರಗುತ್ತದೆ ಕೂಡಾ. ಜಾಗರೂಕತೆ ಮಾತ್ರ ಬೇಕೇ ಬೇಕು.

ಅಂತರಿಕ್ಷ ಯಾನ ಕೈಗೊಂಡಿದ್ದ ಕಲ್ಪನಾ ಚಾವ್ಲಾ, ಸಂಪೂರ್ಣ ಆರೋಗ್ಯದಲ್ಲಿ ಲವಲವಿಕೆಯಿಂದ ಇದ್ದಿದ್ದ ಪುನೀತ ರಾಜಕುಮಾರ್ ಸಾವು, ಹಾಗೆಯೇ ನಟ ಸಂಚಾರಿ ವಿಜಯ್ ಒಂದೈದು ನಿಮಿಷದ ಬೈಕ್ ರೈಡಿಂಗ್‌ಗಾಗಿ ಹೋಗಿದ್ದವರು ವಾಪಸು ಬಂದು ಮುಗಿಸುವುದರೊಳಗಾಗಿ ಸಂಭವಿಸಿದ ಮರಣದ ವಿಚಾರ ಇತ್ಯಾದಿ ಸಂಧಿ ದೋಷದ ನಿಮಿತ್ತವಾದ, ಕಣ್ಣೆವೆ ಮುಚ್ಚಿ ತೆಗೆಯುವುದರೊಳಗೆ ಸಂಭವಿಸಿದ ಮರಣಗಳು.

ಒಟ್ಟಿನಲ್ಲಿ ಕಾಲನ ಕರೆ ಪೂರ್ವ ನಿರ್ಣಿತ ಎಂದರೆ ಹಲವರ ವಿಚಾರಗಳಲ್ಲಿ ನಾವು ನಂಬಲೇಬೇಕು. ಹೀಗಾಗಿ ತೀರಾ ಇತ್ತೀಚಿನದಾದ ಅಜಿತ್ ಪವಾರ್ ಸಾವು, ಸಿ.ಜೆ.ರಾಯ್ ಸಾವು, ಕೂಡಾ ನಂಬಲಸಾಧ್ಯ. ಆದರೆ ವಿಧಿ ಬರಹವೇ ಹಾಗೆ ಇದ್ದಾಗ ಸಾವನ್ನು ತಪ್ಪಿಸುವುದು ಕಷ್ಟ. ಇದು ಆಶ್ಚರ್ಯ. ಆದರೂ ಸತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.