ನವದೆಹಲಿ (ಪಿಟಿಐ): ಹಿರಿಯ ಶ್ರೇಣಿಯ ಇನ್ನೊಬ್ಬ ಅಧಿಕಾರಿ ಇನ್ಫೊಸಿಸ್ ತೊರೆದಿದ್ದಾರೆ. ಕಂಪೆನಿಯ ಭಾರತದ ವ್ಯವಹಾರ ಘಟಕದ ಮುಖ್ಯಸ್ಥರಾಗಿದ್ದ ಚಂದ್ರಶೇಖರ್ ಕಾಕಲ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಎನ್.ಆರ್. ನಾರಾಯಣಮೂರ್ತಿ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮರು ನೇಮಕಗೊಂಡ ನಂತರ (ಜೂನ್ನಲ್ಲಿ) ಇನ್ಫೊಸಿಸ್ ತೊರೆಯುತ್ತಿರುವ ಉನ್ನತ ಶ್ರೇಣಿಯ ಅಧಿಕಾರಿಗಳ ಸಂಖ್ಯೆ ಈ ಮೂಲಕ 9ಕ್ಕೆ ಏರಿಕೆ ಕಂಡಿದೆ.
ಕಾಕಲ್, 1999ರಲ್ಲಿ ಇನ್ಫೊಸಿಸ್ ಸೇರಿದ್ದರು. ಭಾರತದ ವ್ಯವಹಾರ ಘಟಕದ ಮುಖ್ಯಸ್ಥ ಹುದ್ದೆಯ ಜತೆ ಅವರು ಅಪ್ಲಿಕೇಷನ್ ಅಭಿವೃದ್ಧಿ ಮತ್ತು ಮೂಲಸೌಕರ್ಯ ನಿರ್ವಹಣೆ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದರು.
‘ಕಂಪೆನಿಯ ಹಿರಿಯ ಉಪಾಧ್ಯಕ್ಷ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದ ಚಂದ್ರಶೇಖರ್ ಕಾಕಲ್ ಮಾ.19ರಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಏ.18ರಿಂದ ಇದು ಜಾರಿಗೆ ಬರಲಿದೆ’ ಎಂದು ಇನ್ಫೊಸಿಸ್, ಅಮೆರಿಕದ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಎಸ್ಇಸಿ) ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.
2013ರ ಜುಲೈನಲ್ಲಿ ಇನ್ಫೊಸಿಸ್ನ ಜಾಗತಿಕ ಮಾರಾಟ ಮುಖ್ಯಸ್ಥ ಬಸಾಬ್ ಪ್ರಧಾನ್ ರಾಜೀನಾಮೆ ಸಲ್ಲಿಸಿದ್ದರು. ಜಾಗತಿಕ ತಯಾರಿಕಾ ವಿಭಾಗದ ಮುಖ್ಯಸ್ಥರಾಗಿದ್ದ ಅಶೋಕ್ ವೆಮೂರಿ ಆಗಸ್ಟ್ನಲ್ಲಿ ರಾಜೀನಾಮೆ ಸಲ್ಲಿಸಿ, ಪ್ರತಿಸ್ಪರ್ಧಿ ಕಂಪೆನಿಯಾದ ಐಗೇಟ್ನಲ್ಲಿ ‘ಸಿಇಒ’ ಆಗಿ ಸೇರಿದ್ದರು.
ಇನ್ಫೊಸಿಸ್ ಕನ್ಸಲ್ಟಿಂಗ್ನ ಸಹ ಸ್ಥಾಪಕರಾಗಿದ್ದ ಸ್ಟೀಫನ್ ಪಿ ನವೆಂಬರ್ನಲ್ಲಿ ರಾಜೀನಾಮೆ ಸಲ್ಲಿಸಿ ಕಂಪೆನಿ ತೊರೆದಿದ್ದರು. ಸೆಪ್ಟೆಂಬರ್ನಲ್ಲಿ ಕಂಪೆನಿಯ ಆಸ್ಟ್ರೇಲಿಯಾದಲ್ಲಿನ ‘ಬಿಪಿಒ’ ಘಟಕದ ಮುಖ್ಯಸ್ಥರಾಗಿದ್ದ ಕಾರ್ತಿಕ್ ಜಯರಾಮನ್ ರಾಜೀನಾಮೆ ಸಲ್ಲಿಸಿದ್ದರು.
1 ತಿಂಗಳ ಹಿಂದಷ್ಟೇ ಅಮೆರಿಕದಲ್ಲಿ ಕಂಪೆನಿಯ ಹಣಕಾಸು ಸೇವೆಗಳ ಮುಖ್ಯಸ್ಥರಾಗಿದ್ದ ಸುಧೀರ್ ಚತುರ್ವೇದಿ ರಾಜೀನಾಮೆ ನೀಡಿದ್ದರು. ವೆಚ್ಚ ಕಡಿತಕ್ಕಾಗಿ ಮತ್ತು ದೊಡ್ಡ ಪ್ರಮಾಣದ ಹೊರಗುತ್ತಿಗೆ (ಬಿಪಿಒ) ಯೋಜನೆಗಳನ್ನು ಪಡೆಯಲು, ನಾರಾಯಣಮೂರ್ತಿ ಅವರು ಕಂಪೆನಿಯ ಆಡಳಿತದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡುತ್ತಿರುವುದು ಹಿರಿಯ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾ-ಗಿವೆ ಎನ್ನುತ್ತಾರೆ ಐ.ಟಿ ಮಾರುಕಟ್ಟೆ ತಜ್ಞರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.