ADVERTISEMENT

ಉಳಿತಾಯ ಯೋಜನೆ: ಹೆಚ್ಚು ಪ್ರಚಾರಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 19:30 IST
Last Updated 1 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಹೂಡಿಕೆದಾರರು ಚಿನ್ನ ಖರೀದಿಸುವುದಕ್ಕೆ ಹೆಚ್ಚು ಗಮನ ನೀಡುವ ಬದಲಿಗೆ ಇತರ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಲು ಸರ್ಕಾರ ಸೂಕ್ತ ಉತ್ತೇಜನ ನೀಡಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಸಲಹೆ ನೀಡಿದೆ.

ಹೆಚ್ಚೆಚ್ಚು ಉಳಿತಾಯ ಯೋಜನೆಗಳನ್ನು ಆರಂಭಿಸಿ, ಅವುಗಳ  ಪ್ರಯೋಜನ ಬಗ್ಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಆಂದೋಲನ ಹಮ್ಮಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚಿಸಲಾಗಿದೆ. ಜನಸಾಮಾನ್ಯರು ಕೇವಲ ಚಿನ್ನ ಖರೀದಿಸಲು ಹಣ ವೆಚ್ಚ ಮಾಡುವುದರಿಂದ ಅರ್ಥ ವ್ಯವಸ್ಥೆಗೆ ಹೆಚ್ಚಿನ ಪ್ರಯೋಜನ ಲಭಿಸದು. ಚಿನ್ನದ ಬೇಡಿಕೆ ಈಡೇರಿಸಲು ಗಮನಾರ್ಹ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಚಾಲ್ತಿ ಖಾತೆ ಕೊರತೆ ಹೆಚ್ಚಳಗೊಳ್ಳುತ್ತದೆ. 

ಕೇಂದ್ರ ಸರ್ಕಾರದ ಖಾತರಿ ಇರುವ ಉಳಿತಾಯ ಯೋಜನೆಗಳಲ್ಲಿ, ಹಣ ತೊಡಗಿಸಲು ಸಾರ್ವಜನಿಕರಿಗೆ ಉತ್ತೇಜನ ನೀಡಲು ಅಂಚೆ ಕಚೇರಿಗಳನ್ನು ಬಳಸಿಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಈ ನಿಟ್ಟಿನಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು ಎಂದು `ಅಸೋಚಾಂ~ ಸಿದ್ಧಪಡಿಸಿರುವ `ಭಾರತೀಯರ ಚಿನ್ನದ ವ್ಯಾಮೋಹ; ಅದರ ಪರಿಣಾಮಗಳು ಮತ್ತು ಸುಸ್ಥಿರತೆ~ ಕುರಿತ ವರದಿಯಲ್ಲಿ ಸಲಹೆ ನೀಡಿದೆ.

ಚಿನ್ನ ಆಮದು ಮಾಡಿಕೊಳ್ಳುವಲ್ಲಿ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿ ಇರುವ ಭಾರತ, ಜಾಗತಿಕ ವಾರ್ಷಿಕ ಒಟ್ಟು ಬೇಡಿಕೆಯಲ್ಲಿ ಒಂದು ಮೂರಾಂಶದಷ್ಟು ಪಾಲು ಹೊಂದಿದೆ. 2010-11ರಲ್ಲಿ ್ಙ1,65,000 ಕೋಟಿ  ಮೊತ್ತದ ಚಿನ್ನ ಆಮದು ಮಾಡಿಕೊಳ್ಳಲಾಗಿತ್ತು. 2015-16ರಲ್ಲಿ ಇದು  ್ಙ5,00,000 ಕೋಟಿಗಳಿಗೆ ಏರುವ ನಿರೀಕ್ಷೆ ಇದೆ. ಚಿನ್ನವು ದೇಶದ ಅರ್ಥ ವ್ಯವಸ್ಥೆಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ನೆರವಾಗಲಾರದು. ಸರ್ಕಾರ ಈಗಾಗಲೇ ಆಮದು ಮತ್ತು ಅಬಕಾರಿ ಸುಂಕ ಹೆಚ್ಚಿಸಿದ್ದರಿಂದ ಚಿನ್ನ ಮತ್ತು ಬೆಳ್ಳಿ ಇನ್ನಷ್ಟು ದುಬಾರಿಯಾಗಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.