ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಭಾರ್ತಿ ಏರ್ಟೆಲ್ನ ಇ–ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಪರವಾನಗಿ ರದ್ದು ಆದೇಶ ಹಿಂದಕ್ಕೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.
ಇದರಿಂದ ಸಂಸ್ಥೆಯು ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವುದಕ್ಕೆ ಮತ್ತೆ ಚಾಲನೆ ಸಿಗಲಿದೆ.
ಸಂಸ್ಥೆಯು ಆಧಾರ್ ಕಾಯ್ದೆ ಅನ್ವಯ ಮೂರು ತಿಂಗಳಿಗೆ ಒಮ್ಮೆ ಸಮಗ್ರ ವರದಿಯನ್ನು ನೀಡಬೇಕು. ಕಾಲಕಾಲಕ್ಕೆ ಯುಐಡಿಎಐ ನೀಡುವ ನಿರ್ದೇಶನಕ್ಕೆ ಬದ್ಧವಾಗಿರಬೇಕು ಎನ್ನುವ ಷರತ್ತುಗಳೊಂದಿಗೆ ಈ ಅನುಮತಿ ನೀಡಲಾಗಿದೆ.
ಆದರೆ, ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನ ‘ಇ–ಕೆವೈಸಿ’ ರದ್ದು ಆದೇಶವನ್ನು ಹಿಂದಕ್ಕೆ ಪಡೆದಿಲ್ಲ. ಹೀಗಾಗಿ ಆಧಾರ್ ಸಂಖ್ಯೆ ಬಳಸಿ ಹೊಸ ಖಾತೆ ತೆರೆಯಲೂ ಆಗುವುದಿಲ್ಲ.
ಸಂಸ್ಥೆಯು ನಿಯಮಗಳನ್ನು ಪಾಲಿಸಿದ್ದು, ನಿರಂತರವಾಗಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿದೆ. ಹೀಗಾಗಿ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.
ಏನಿದು ಪ್ರಕರಣ?: ಆಧಾರ್ ಕಾಯ್ದೆ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ, ‘ಯುಐಡಿಎಐ’ 2017ರ ಡಿಸೆಂಬರ್ 16 ರಂದು ಭಾರ್ತಿ ಏರ್ಟೆಲ್ ಮತ್ತು ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ನ ಇ–ಕೆವೈಸಿ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಿತ್ತು.
ಸಂಸ್ಥೆಯ ಮಳಿಗೆಗಳಲ್ಲಿ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಿಸುವಾಗ ಗ್ರಾಹಕರಿಗೆ ಸೂಚನೆ ನೀಡದೇ ಪೇಮೆಂಟ್ಸ್ ಬ್ಯಾಂಕ್ ಖಾತೆಯನ್ನೂ ತೆರೆಯಲಾಗುತ್ತಿದೆ. ಎಲ್ಪಿಜಿ ಸಬ್ಸಿಡಿ ಮೊತ್ತವೂ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುವಂತೆ ಮಾಡಲಾಗುತ್ತಿದೆ ಎಂದು ಗ್ರಾಹಕರು ದೂರು ನೀಡಿದ್ದರು. ಇದನ್ನು ಪರಿಗಣಿಸಿ ಸರ್ಕಾರ ಮತ್ತು ಯುಐಡಿಎಐ ‘ಇ–ಕೆವೈಸಿ’ ಪರವಾನಗಿ ರದ್ದು ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.